ನಾನು ಡೈರೆಕ್ಟರ್ ಆಗ್ತೀನಿ ಅಂದಾಗ ವಿಜಯ್ ರಿಯಾಕ್ಷನ್ ಹೇಗಿತ್ತು? ಕೊನೆಗೂ ಅಪ್ಪನ ಗುಟ್ಟು ರಟ್ಟು ಮಾಡಿದ ಮಗ
ತಮಿಳು ಸೂಪರ್ಸ್ಟಾರ್, ಹಾಲಿ ಸಿಎಂ ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ (Jason Sanjay) ಈಗ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸದಾ ಕ್ಯಾಮೆರಾ ಹಿಂದಿನ ಜಗತ್ತನ್ನು ಇಷ್ಟಪಡುವ ಜೇಸನ್, ತಾವೇಕೆ ನಟನೆಯ ಬದಲು ನಿರ್ದೇಶನ ಆಯ್ದುಕೊಂಡರು? ಮತ್ತು ಈ ನಿರ್ಧಾರಕ್ಕೆ ತಂದೆಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' (Sigma) ಚಿತ್ರದ ಬಿಡುಗಡೆಯ ತಯಾರಿಯಲ್ಲಿರುವ ಜೇಸನ್ ಸಂಜಯ್, ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ್ದಾರೆ. ತಾವು ಚಿತ್ರರಂಗಕ್ಕೆ ಬರಬೇಕು ಎಂದು ನಿರ್ಧರಿಸಿದ ಆ ಕ್ಷಣವನ್ನು ನೆನಪಿಸಿಕೊಂಡ ಜೇಸನ್, ಮೊದಲು ತಮ್ಮ ಆಪ್ತರ ವಲಯದಲ್ಲಿ ಈ ಬಗ್ಗೆ ಚರ್ಚಿಸಿದ್ದಾಗಿ ಹೇಳಿದ್ದಾರೆ.

ಪೋಷಕರು ಏನಂದ್ರು?
"ನಾನು ಚಿತ್ರರಂಗಕ್ಕೆ ಬರಬೇಕು ಎಂದುಕೊಂಡಾಗ ಮೊದಲು ನನ್ನ ಪೋಷಕರು (ವಿಜಯ್-ಸಂಗೀತ), ತಂಗಿ ಮತ್ತು ನನ್ನ ಆಪ್ತ ಸ್ನೇಹಿತರ ಬಳಿ ಮಾತನಾಡಿದೆ. ಅವರೆಲ್ಲರೂ ನನ್ನ ನಿರ್ಧಾರಕ್ಕೆ ಸ್ಪಂದಿಸಿದರು, ಬೆಂಬಲ ನೀಡಿದರು. ಅವರ ಆ ಪ್ರೋತ್ಸಾಹ ನನಗೆ ಅಪಾರ ಶಕ್ತಿಯನ್ನು ನೀಡಿತು. ನನ್ನ ಮೇಲೆ ಅವರಿಗೆ ಎಷ್ಟು ನಂಬಿಕೆ ಇದೆ ಎಂಬುದು ನನಗೆ ಆಗಲೇ ಅರ್ಥವಾಗಿದ್ದು," ಎಂದು ಜೇಸನ್ ಹೇಳಿದ್ದಾರೆ.
ಅಲ್ಲದೆ ಸಿಗ್ಮಾ ಸಿನಿಮಾ ಸೆಟ್ಟೇರಿದಾಗ ತಮಿಳು ಚಿತ್ರರಂಗದ ಖ್ಯಾತ ನಟರಾದ ವಿಜಯ್ ಸೇತುಪತಿ, ಸೂರಿ ಸೇರಿದಂತೆ ಹಲವು ಗಣ್ಯರು ತಮಗೆ ಶುಭ ಹಾರೈಸಿ ಆಶೀರ್ವದಿಸಿದ್ದನ್ನು ಅವರು ನೆನೆದಿದ್ದಾರೆ. ಇದೇ ವೇಳೆ ತಮಗೆ ಈಗಾಗಲೇ 2-3 ಹೊಸ ಕಥೆಗಳ ಆಲೋಚನೆಗಳಿದ್ದು, 'ಸಿಗ್ಮಾ' ಬಿಡುಗಡೆಯಾದ ನಂತರ ಅವುಗಳನ್ನು ಹೊರತರುವುದಾಗಿ ತಿಳಿಸಿದ್ದಾರೆ.
ಬಾಲ್ಯದಲ್ಲೇ ಚಿಗುರಿತ್ತು ಸಿನಿಮಾ ಕನಸು
ಸ್ಟಾರ್ ನಟನ ಮಗನಾಗಿ ಬೆಳೆದ ಜೇಸನ್ ಅವರಿಗೆ ಸಿನಿಮಾ ಪರಿಚಯ ಹೊಸದೇನಲ್ಲ. ಚಿತ್ರರಂಗದ ಕುಟುಂಬದಿಂದ ಬಂದಿದ್ದರಿಂದ ಬಾಲ್ಯದಿಂದಲೇ ಶೂಟಿಂಗ್ ಸ್ಪಾಟ್ಗಳಿಗೆ ಭೇಟಿ ನೀಡುತ್ತಿದ್ದರು. ಪ್ರೀಮಿಯರ್ ಶೋಗಳನ್ನು ನೋಡುವುದು ಮತ್ತು ಜಗತ್ತಿನ ವಿಭಿನ್ನ ಶೈಲಿಯ ಸಿನಿಮಾಗಳನ್ನು ವೀಕ್ಷಿಸುವುದು ಅವರ ಮುಖ್ಯ ಹವ್ಯಾಸವಾಗಿತ್ತು. ಕಥೆಗಾರನಾಗಿ ಬದಲಾದ ದಿನಗಳನ್ನು ನೆನಪಿಸಿಕೊಂಡ ಅವರು, "ನಾನು ಯಾವ ಸಿನಿಮಾ ನೋಡಿದರೂ ಅದರ ಕಥೆ ಎಲ್ಲಿಂದ ಶುರುವಾಗುತ್ತದೆ, ಹೇಗೆ ತೆರೆದುಕೊಳ್ಳುತ್ತದೆ ಮತ್ತು ನಿರ್ದೇಶಕ ಅದನ್ನು ಹೇಗೆ ನಿರೂಪಿಸುತ್ತಾನೆ ಎಂಬುದನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ನನಗೆ ಅದು ಒಂದು ಆಟದ ತರಹ ಅನಿಸುತ್ತಿತ್ತು. ಸಿನಿಮಾ ನೋಡದ ಸ್ನೇಹಿತರ ಬಳಿ ಹೋಗಿ ಇಡೀ ಕಥೆಯನ್ನ ಅತ್ಯಂತ ರೋಮಾಂಚನಕಾರಿಯಾಗಿ ವಿವರಿಸುತ್ತಿದ್ದೆ. ಬಹುಶಃ ಆ ರೀತಿ ಕಥೆ ಹೇಳಲು ಆರಂಭಿಸಿದ್ದೇ ನಾನು ನಿರ್ದೇಶಕನಾಗಲು ಅಡಿಪಾಯ ಹಾಕಿತು" ಎಂದಿದ್ದಾರೆ.
ಜೇಸನ್ ಸಂಜಯ್ ಕೆನಡಾದಲ್ಲಿ ಚಿತ್ರನಿರ್ಮಾಣದ ಕೋರ್ಸ್ ಮುಗಿಸಿದ್ದಾರೆ. ಅಲ್ಲಿ ಓದುತ್ತಿದ್ದಾಗಲೇ 120 ಪುಟಗಳ ಕಥೆಯೊಂದನ್ನು ಬರೆದಿದ್ದರು. ಆದರೆ, ಆ ಸಮಯದಲ್ಲಿ ಅಷ್ಟು ದೊಡ್ಡ ಪ್ರಮಾಣದ ಫೀಚರ್ ಫಿಲ್ಮ್ ಮಾಡಲು ಸಾಧ್ಯವಾಗದ ಕಾರಣ, ಇಡೀ ಕಥೆಯನ್ನು ಕರಗಿಸಿ 20 ನಿಮಿಷಗಳ ಕಿರುಚಿತ್ರವನ್ನಾಗಿ ರೂಪಿಸಿದ್ದರು. ಒಬ್ಬ ನಿರ್ದೇಶಕನಾಗಿ ತಮ್ಮ ಸಾಮರ್ಥ್ಯವೇನು, ತಮಗೆ ಯಾವುದು ಒಲಿಯುತ್ತದೆ ಮತ್ತು ಯಾವುದು ಒಲಿಯುವುದಿಲ್ಲ ಎಂಬುದನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಅವರು ಆ ಕಿರುಚಿತ್ರ ಮಾಡಿದ್ದರು. ಭಾರತಕ್ಕೆ ಮರಳಿದ ನಂತರ ಕೆಲವು ಕಥೆಗಳ ಮೇಲೆ ಕೆಲಸ ಮಾಡಿ, ಸಿನಿಮಾ ತಜ್ಞರು ಹಾಗೂ ಸ್ನೇಹಿತರ ಸಲಹೆ ಮೇರೆಗೆ ಚಿತ್ರಕಥೆಯನ್ನ ಮತ್ತಷ್ಟು ಗಟ್ಟಿಗೊಳಿಸಿದರು.
ಪ್ರೊಡ್ಯೂಸರ್ ಸಿಕ್ಕಿದ್ದು ಹೇಗೆ?
ತಮ್ಮ ಕನಸಿನ ಮಾತನಾಡಿದ ಜೇಸನ್, ನನ್ನ ಅಂಕಲ್ ಸಂಜೀವ್ ಅವರ ಮೂಲಕ ನನಗೆ ನಿರ್ಮಾಪಕ ತಮಿಳ್ ಕುಮರನ್ ಸರ್ ಪರಿಚಯವಾಯಿತು. ಆಗಲೂ ನಾನು ಸಿನಿಮಾ ನಿರ್ದೇಶನ ಮಾಡುತ್ತೇನೆ ಅಂದುಕೊಂಡಿರಲಿಲ್ಲ. ಕೇವಲ ಒಬ್ಬ ನಿರ್ಮಾಪಕರಿಗೆ ಕಥೆ ಹೇಳುವ ಅನುಭವ ಸಿಗಲಿ ಎಂದು ಹೋಗಿದ್ದೆ. ಆದರೆ ನಾನು ಹೇಳಿದ ಕಥೆ ತಮಿಳ್ ಕುಮರನ್ ಅವರಿಗೆ ತುಂಬಾ ಇಷ್ಟವಾಯಿತು. ನಂತರ ನಾನು ಸುಬಾಸ್ಕರನ್ ಸರ್ ಅವರನ್ನ ಭೇಟಿಯಾಗಿ ಕಥೆ ಹೆಳಿದೆ, ಅವರಿಗೂ ಕಥೆ ಇಷ್ಟವಾಯ್ತು. ಆ ಕಥೆಯೇ ಈಗ ನೀವು ನೋಡಲಿರುವ ಸಿಗ್ಮಾ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಅಡಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಆಕ್ಷನ್ ಎಂಟರ್ಟೈನರ್ 'ಸಿಗ್ಮಾ' ಚಿತ್ರದಲ್ಲಿ ಟಾಲಿವುಡ್ ನಟ ಸಂದೀಪ್ ಕಿಶನ್ ನಾಯಕನಾಗಿ ನಟಿಸುತ್ತಿದ್ದಾರೆ. ದಳಪತಿ ವಿಜಯ್ ಪುತ್ರನ ಚೊಚ್ಚಲ ನಿರ್ದೇಶನದ ಚಿತ್ರದ ಮೇಲೆ ಈಗ ಇಡೀ ದಕ್ಷಿಣ ಭಾರತದ ಚಿತ್ರರಂಗ ಕಣ್ಣಿಟ್ಟಿದೆ.












Click it and Unblock the Notifications