ಮೈಸೂರಿನ ಅರಮನೆಗಳ ಇತಿಹಾಸ ಗೊತ್ತಾ?
ಮೈಸೂರು, ಅಕ್ಟೋಬರ್ 19 : ಮೈಸೂರು ಎಂದಾಕ್ಷಣ ಕಣ್ಣಮುಂದೆ ಬರುವುದು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಭವ್ಯವಾದ ಅಂಬಾವಿಲಾಸ ಅರಮನೆ. ಮೈಸೂರಿನಲ್ಲಿ ಬೇರೆ ಯಾವುದೇ ನಗರದಲ್ಲಿ ಕಾಣದಷ್ಟು ಅರಮನೆಗಳಿವೆ ಎಂದರೆ ಅಚ್ಚರಿಯಾಗಬಹುದು. ಬಹುಶಃ ಇದೇ ಕಾರಣಕ್ಕೆ ಮೈಸೂರನ್ನು 'ಅರಮನೆ ನಗರಿ' ಎಂದು ಕರೆಯುವುದು.
ನಗರದಲ್ಲಿ ಒಂದು ಸುತ್ತು ಹೊಡೆದರೆ ವಿಶ್ವವಿಖ್ಯಾತ ಅಂಬಾವಿಲಾಸ, ಜಗನ್ಮೋಹನ, ಲಲಿತಾ ಮಹಲ್, ರಾಜೇಂದ್ರ ವಿಲಾಸ, ಲೋಕರಂಜನ್ ಮಹಲ್, ವಸಂತ ಮಹಲ್, ಕಾರಂಜಿ ವಿಲಾಸ, ಚೆಲುವಾಂಬ ವಿಲಾಸ, ಚಾಮುಂಡಿ ವಿಹಾರ, ಚಿತ್ತರಂಜನ್ ಮಹಲ್, ಜಯಲಕ್ಷ್ಮೀ ವಿಲಾಸ ಮುಂತಾದ ಅರಮನೆಗಳು ಗಮನಸೆಳೆಯುವ ಜೊತೆಗೆ ಇತಿಹಾಸದ ಕಥೆ ಹೇಳುತ್ತವೆ.
ಅಂಬಾವಿಲಾಸ ಅರಮನೆ : ಈಗಿರುವ ಅಂಬಾವಿಲಾಸ ಅರಮನೆಗೂ ಮೊದಲು ಹಳೆಯ ಅರಮನೆಯನ್ನು 1800 ಮತ್ತು 1804ರಲ್ಲಿ ಕಟ್ಟಲಾಗಿತ್ತು. ಕಟ್ಟಿಗೆ ಹಾಗೂ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದ ಅರಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಯಿತು. ನಂತರ ಹೊಸ ಮಾದರಿಯಲ್ಲಿ ಅರಮನೆಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು. 1897 ರಿಂದ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಪೂರ್ಣಗೊಂಡಿತು. [ದಸರಾ ಆನೆಗಳ ಪಾಲನೆ ಹೇಗೆ?]
ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನಿರ್ಮಾಣಗೊಂಡಿರುವ ಅರಮನೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಫಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ 5 ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ. [ಮೈಸೂರು ದಸರಾ 2015 : ಚಿತ್ರ ಸಂಪುಟ]
ಜಗನ್ಮೋಹನ ಅರಮನೆ : ಮೈಸೂರು ಮಹಾರಾಜರ ಆಳ್ವಿಕೆಯ ವೈಭವವನ್ನು ಸಾರುತ್ತಾ ಕಲಾ ಸಂಗ್ರಹಾಲಯವಾಗಿ ಕಂಗೊಳಿಸುವ ಜಗನ್ಮೋಹನ ಅರಮನೆಯನ್ನು 1861 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರು. ಅಂಬಾವಿಲಾಸ ಅರಮನೆಗೆ ಬೆಂಕಿಬಿದ್ದ ನಂತರ ಹೊಸ ಅರಮನೆ ನಿರ್ಮಾಣವಾಗುವರೆಗೂ ರಾಜ ಪರಿಹಾರ ಇದೇ ಅರಮನೆಯಲ್ಲಿ ವಾಸ್ತವ್ಯ ಹೂಡಿತ್ತು. 1900ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿವಾಹ, 1902ರಲ್ಲಿ ನಡೆದ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕ ಮಹೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಇದು ಸಾಕ್ಷಿಯಾಗಿದೆ.
ಈ ಅರಮನೆ ಕಟ್ಟಡವು ಚಂದ್ರಾಕೃತಿಯ ಕಮಾನುಗಳುಳ್ಳ ಎರಡು ಅಂತಸ್ತಿನ ಅಪೂರ್ವ ಕಲಾವಿನ್ಯಾಸವನ್ನು ಹೊಂದಿದ್ದು, ಬಣ್ಣದ ಅಲಂಕಾರಿಕ ಗಾಜುಗಳನ್ನೊಳಗೊಂಡ ಕಿಟಿಕಿಗಳು ಅರಮನೆಗೆ ಶೋಭೆ ನೀಡಿವೆ. ದೇವಾಲಯದ ವಾಸ್ತುಶಿಲ್ಪ ಶೈಲಿಯ ಅರಮನೆ ರಾಜಾರವಿವರ್ಮ, ವೆಂಕಟಪ್ಪರ ಕಲಾ ಕೌಶಲ್ಯಕ್ಕೆ ಕನ್ನಡಿ ಹಿಡಿದಂತಿದೆ. ಈ ಅರಮನೆ ಕೇವಲ ಅರಮನೆಯಾಗಿ ಉಳಿದಿಲ್ಲ. ವಿಶ್ವದ ಕಲಾಸಕ್ತರನ್ನು ತನ್ನತ್ತ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.
ಈ ಅರಮನೆಯಲ್ಲಿ ಮೈಸೂರು ಅರಸರ ವಂಶಾವಳಿಯನ್ನು ಬಿಂಬಿಸುವ ಭಿತ್ತಿ ಚಿತ್ರಗಳಿದ್ದು, ರಾಜಾ ಒಡೆಯರ್, ಕಂಠೀರವ ನರಸರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ಅವರೊಂದಿಗೆ ಮಕ್ಕಳಾದ ಚಾಮರಾಜ ಒಡೆಯರ್, ಅಳಿಯ ಲಿಂಗರಾಜ ಅರಸ್, ಕೃಷ್ಣ ಅರಸು, ಸುಬ್ಬರಾಜ ಅರಸು ಅವರುಗಳ ತೈಲ ಚಿತ್ರಗಳನ್ನು ಕಾಣಬಹುದಾಗಿದೆ.
ಸಿಂಹಾಸನರೂಢರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ, ಅಂಧಕಾರದ ನಡುವೆ ಕೈಯಲ್ಲಿ ದೀಪ ಹಿಡಿದ ಹೆಣ್ಣೊಬ್ಬಳ ತೈಲವರ್ಣದ ಚಿತ್ರ ಗಮನಸೆಳೆಯುತ್ತದೆ. ಇಲ್ಲಿ ಹೈದರಾಲಿ, ಟಿಪ್ಪುವಿನ ವಸ್ತುಗಳು, ದಂತ, ಪಿಂಗಾಣಿ, ಗಂಧದ ಕಲಾಕೃತಿಗಳು, ಸಂಗೀತ ವಾದ್ಯಗಳು, ಅಲಂಕಾರಿಕ ವಸ್ತುಗಳು, ಛಾಯಾಚಿತ್ರಗಳಿದ್ದು ಇದೊಂದು ರೀತಿಯ ಕಲಾ ಸಂಗ್ರಹಾಲಯವಾಗಿ ಗಮನಸೆಳೆಯುತ್ತಿದೆ.