ಭಾರತದಲ್ಲಿ ಸಾಮಾನ್ಯ ಶೀತ, ನೆಗಡಿ ರೂಪಕ್ಕೆ ತಿರುಗಿತಾ ಕೊರೊನಾ ವೈರಸ್!?
ನವದೆಹಲಿ, ಆಗಸ್ಟ್ 26: ಭಾರತದಲ್ಲಿ ಕೊರೊನಾವೈರಸ್ ರೋಗವು ಸಾಮಾನ್ಯ ಶೀತ, ನೆಗಡಿಯ ರೂಪಕ್ಕೆ ತಿರುಗುತ್ತಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ. ಎನ್ ಕೆ ಅರೋರಾ ತಿಳಿಸಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ಟ್ರ್ಯಾಕರ್ ನೀಡಿರುವ ಮಾಹಿತಿ ಪ್ರಕಾರ, ಕಳೆದ 28 ದಿನಗಳಲ್ಲಿ ಭಾರತದಲ್ಲಿ ಕೋವಿಡ್-19 ಸೋಂಕಿನಿಂದಲೇ 1,276 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯ ನೆಗಡಿ, ಶೀತವನ್ನು ಸಹ ಸಾರ್ವಜನಿಕರು ನಿರ್ಲಕ್ಷ್ಯ ಮಾಡುವಂತಿಲ್ಲ. ಸದಾ ಜಾಗರೂಕತೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಜನರು ಮೊದಲಿನಂತೆ ತಮ್ಮ ದೈನಂದಿನ ಬದುಕು ಕಟ್ಟಿಕೊಳ್ಳುವ ದಿನಗಳು ಸನ್ನಿಹಿತಕ್ಕೆ ಬಂದಿದೆ. ಕೋವಿಡ್-19 ಬೂಸ್ಟರ್ ಡೋಸ್ ಪಡೆದುಕೊಳ್ಳದ ಶೇ.75ರಷ್ಟು ಮಂದಿ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಭಾರತ್ ಬಯೋಟೆಕ್ನಿಂದ ಮೂಗಿನ ಲಸಿಕೆ ಮತ್ತು ಜೆನೋವಾ ಫಾರ್ಮಾದಿಂದ ಎಂಆರ್ಎನ್ಎ ಲಸಿಕೆ ಬಿಡುಗಡೆ ಮಾಡುವುದಾಗಿ ಹೇಳಿದರು.

ಕೊರೊನಾವೈರಸ್ ಏರಿಳಿತದ ಕಾರಣ ಗುರುತಿಸಲು ಸಾಧ್ಯವಿಲ್ಲ
ಕಳೆದ ಮಾರ್ಚ್ನಲ್ಲಿ ಪ್ರತಿದಿನ ಸುಮಾರು 1,000 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಕಂಡು ಬಂದಿದ್ದವು. ಆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಆ ಸಂಖ್ಯೆಯು ಕ್ರಮೇಣ 15,000 ರಿಂದ 20,000ಕ್ಕೆ ಏರಿಕೆ ಆಗಿದೆ. ಕಳೆದ ಮೂರು ವಾರಗಳಲ್ಲಿ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸಿವೆ. ಇದರ ಪರಿಣಾಮವಾಗಿ ಸೋಂಕುಗಳ ಸಂಖ್ಯೆ ಏರುಪೇರಾಗಲು ನಿಖರವಾದ ಕಾರಣವನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಆದಾಗ್ಯೂ ಹಲವಾರು ವೈಜ್ಞಾನಿಕ ಅಂಶಗಳು ಸೋಂಕಿತರ ಸಂಖ್ಯೆಗೆ ಕಾರಣವಾಗುತ್ತಿವೆ. ಸಮುದ್ರದ ಆಚೆಗಿನ ಪ್ರಯಾಣ, ಧಾರ್ಮಿಕ ಸಾಮಾಜಿಕ ಕಾರ್ಯಕ್ರಮ, ಯಾವುದೇ ಪ್ರಮುಖ ರಾಜಕೀಯ ಸಭೆಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ಅನಾರೋಗ್ಯವು ಹೆಚ್ಚು ವೇಗವಾಗಿ ಹರಡುತ್ತದೆ.
ಎರಡನೆಯದಾಗಿ ಓಮಿಕ್ರಾನ್ ಸೋಂಕಿನ ವಿವಿಧ ತಳಿಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಯಿತು. ಮೂರನೇ ಅಂಶವೆಂದರೆ ಕಳೆದ ಎಂಟು ತಿಂಗಳ ಅವಧಿಯಲ್ಲಿ ಕೊರೊನಾ ವೈರಸ್ ಪರೀಕ್ಷಾ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಪರೀಕ್ಷೆಯಲ್ಲಿ ಇಳಿಕೆ
ಕಳೆದ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಪ್ರತಿದಿನ 15 ರಿಂದ 20 ಲಕ್ಷ ಜನರನ್ನು ಕೋವಿಡ್-19 ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ ಈಗ ದಿನಕ್ಕೆ 2,00,000 ರಿಂದ 4,00,000 ಜನರನ್ನು ಮಾತ್ರ ಪರೀಕ್ಷಿಸುತ್ತಿದ್ದೇವೆ. ಏಕೆಂದರೆ ಕೋವಿಡ್-19 ಸೋಂಕಿನ ಪ್ರಮಾಣ ಸೌಮ್ಯವಾಗಿದ್ದು, ನಾವು ಸಂಪರ್ಕ ಪತ್ತೆಹಚ್ಚುವಿಕೆಯನ್ನು ಮಾಡುತ್ತಿಲ್ಲ. ಇದು ಜ್ವರ, ಸಂಭವನೀಯ ಗಂಟಲಿನ ಲಕ್ಷಣ ಮತ್ತು 3 ರಿಂದ 5 ದಿನಗಳಲ್ಲಿ ಕಣ್ಮರೆಯಾಗುವ ದೇಹದ ನೋವು ಸೇರಿದಂತೆ ವಿಶಿಷ್ಟವಾದ ಶೀತವನ್ನು ಹೋಲುವ ಲಕ್ಷಣಗಳನ್ನು ಹೊಂದಿರುತ್ತದೆ.

ಕೊರೊನಾ ವೈರಸ್ ಹರಡುವಿಕೆ ಬಗ್ಗೆ ನಿಷ್ಕಾಳಜಿ
ಕೊರೊನಾ ವೈರಸ್ ಸೋಂಕಿನ ಬಗ್ಗೆ ಅನೇಕ ಜನರು ನಿರ್ಲಕ್ಷ್ಯ ಭಾವನೆಯನ್ನು ಪ್ರದರ್ಶಿಸುತ್ತಿದ್ದಾರೆ. ತಮ್ಮನ್ನು ತಾವು ಪರೀಕ್ಷೆಗೆ ಒಳಪಡಿಸಿಕೊಳ್ಳುತ್ತಿಲ್ಲ. ಇದೇ ಸಂದರ್ಭದಲ್ಲಿ ಬೇರೆ ರೋಗಾಣುಗಳು ಕೂಡ ಅಂಟಿಕೊಳ್ಳುತ್ತವೆ. ಕೋವಿಡ್ನಿಂದ ಅಥವಾ ಬೇರೆ ರೋಗಾಣುವಿನಿಂದ ಕಾಯಿಲೆ ಉಂಟಾಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಒಟ್ಟಾರೆ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ ಸಮುದಾಯದ ಮಟ್ಟದಲ್ಲಿ ಸೋಂಕು ಹೇಗೆ ಹರಡುತ್ತಿದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಅದೃಷ್ಟವಶಾತ್, ಓಮಿಕ್ರಾನ್ ಅಥವಾ ಪ್ರಸ್ತುತ ಕೋವಿಡ್ ಸೋಂಕಿನ ತೀವ್ರತೆಯು ದೀರ್ಘಕಾಲದ ಹೃದ್ರೋಗ, ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆ, ಇತ್ಯಾದಿಗಳನ್ನು ಒಳಗೊಂಡಂತೆ ಗಮನಾರ್ಹ ಸಹ-ಅಸ್ವಸ್ಥತೆಗಳನ್ನು ಹೊಂದಿರುವ ಜನರಲ್ಲಿ ಮಾತ್ರ ಸಂಭವಿಸುತ್ತಿದೆ. ಅಂಥವರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಸೋಂಕಿನಿಂದ ಸಾವಿನ ಮನೆ ಸೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್-19 ಬಗ್ಗೆ ಜಾಗರೂಕರಾಗಿರಿ ಎಂದು ಸಲಹೆ
ಸಾಮಾನ್ಯವಾಗಿ ಪ್ರಾಥಮಿಕ ಆರೋಗ್ಯ ಸಮಸ್ಯೆಯನ್ನು ಹೊಂದಿರುವ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದು, ಈ ವೇಳೆ ಅಂಥವರಿಗೆ ಕೋವಿಡ್-19 ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ಖಾತ್ರಿ ಆಗುತ್ತಿದೆ. ಕೊರೊನಾಗೆ ಸಂಬಂಧಿಸಿದ ತೀವ್ರ ಅನಾರೋಗ್ಯ ಸಮಸ್ಯೆವು ಸಾಮಾನ್ಯವಾಗಿದೆ. ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವ ಮಂದಿಗೆ ಸೋಂಕು ಅಂಟಿಕೊಂಡರೆ ಪರಿಸ್ಥಿತಿ ಮತ್ತಷ್ಟು ಹಾಳಾಗಬಹುದು. ಈ ಕಾಯಿಲೆ ಬಗ್ಗೆ ಯಾರೊಬ್ಬರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಏಕೆಂದರೆ ಕೊರೊನಾ ವೈರಸ್ ಎನ್ನುವುದು ನಮ್ಮ ಸುತ್ತಲೂ ಇದೆ. ಅದರ ಬಗ್ಗೆ ನಾವು ಜಾಗರೂಕತೆಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ.

ದೇಶದಲ್ಲಿ ಒಂದೇ ದಿನ 10,256 ಮಂದಿಗೆ ಕೊವಿಡ್
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,256 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 68 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 13,528 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 44,389,176ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 43,770,913 ಸೋಂಕಿತರು ಗುಣಮುಖರಾಗಿದ್ದು, 527,556 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 90,707ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಪಾಸಿಟಿವಿಟಿ ದರದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 4,22,322 ಮಂದಿಗೆ ಕೋವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ. ದೇಶದಲ್ಲಿ ಇದುವರೆಗೂ 88,43,39,045 ಜನರಿಗೆ ಕೊರೊನಾ ವೈರಸ್ ಸೋಂಕಿತ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.












Click it and Unblock the Notifications