ಬಳ್ಳಾರಿ ಚುನಾವಣಾ ಭವಿಷ್ಯ : ಜ್ಯೋತಿಷಿಗಳಿಗೆ ಚಾಲೇಂಜ್
ಧೈರ್ಯವಿದ್ದರೆ ಇಂಥವರೇ ಇಂತಿಷ್ಟು ಮತಗಳಿಂದ ಗೆಲ್ಲುತ್ತಾರೆಂದು ಜ್ಯೋತಿಷಿಗಳು ಭವಿಷ್ಯ ನುಡಿಯಲಿ ನೋಡೋಣ. ಸದ್ಯದಲ್ಲೇ ರಾಜಕೀಯ ಬಿರುಗಾಳಿ ಬೀಸಲಿದೆ, ರಾಜಕಾರಣಿಗಳ ಸ್ಥಾನಗಳು ಪಲ್ಲಟವಾಗಲಿವೆ, ರಾಜ್ಯದಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದು ಟಾಂಟಾಂ ಹೊಡೆದುಕೊಂಡಿದ್ದ ಜ್ಯೋತಿಷಿಗಳು ಎಲ್ಲಿದ್ದಾರೆ?
ಇಂದಿನ ದಿನಗಳಲ್ಲಿ ಜ್ಯೋತಿಷಿಗಳನೇಕರು ಟಿವಿಗಳನ್ನೇ ನೆಚ್ಚಿಕೊಂಡಿದ್ದಾರೆ. ಪೇನಲ್ ಡಿಸ್ಕಸಶನ್ ಗೆ ಕರೆದಾಗ ಸಖತ್ತಾಗಿ ಮೇಕಪ್ ಮಾಡಿಕೊಂಡು ಬಂದು, ತಮಗನಿಸಿದ್ದನ್ನು ಹೇಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆಯೇ ವಿನಃ ತಾವಾಗಿಯೇ ಭವಿಷ್ಯ ನುಡಿಯುವ ಧೈರ್ಯವನ್ನೇ ತೋರುತ್ತಿಲ್ಲ.
ಟಿವಿ ಚಾನಲ್ಲುಗಳಲ್ಲಿ ಕೂಡ ಈ ಸೋಕಾಲ್ಡ್ ಜ್ಯೋತಿಷಿಗಳನ್ನು ಕರೆಸಿ ವಾದ ವಾಗ್ವಾದ ನಡೆಸುವುದು ಸಾಮಾನ್ಯವಾಗಿದೆ. ಬಂದವರ ನಡುವೆಯೇ ಜಗಳವೆಬ್ಬಿಸಿ ಟಿಆರ್ಪಿ ಏರಿಸಿಕೊಂಡರೆ ಕಾರ್ಯಕ್ರಮ ಸಾರ್ಥಕವಾದಂತೆ. ಜನರು ಕೂಡ ಇಂತಹ ಕಾರ್ಯಕ್ರಮಗಳನ್ನು ತಮಾಷೆಯಾಗಿಯೇ ನೋಡುತ್ತಿದ್ದಾರೆ.
ಬಳ್ಳಾರಿ ಚುನಾವಣೆಯ ವಿಷಯಕ್ಕೆ ಮತ್ತೆ ಬಂದರೆ, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವವರು ಮತದಾರರೇ ಹೊರತು ಜ್ಯೋತಿಷಿಗಳಲ್ಲ. ಇದನ್ನು ಅಲ್ಲಗಳೆದು, ಅಭ್ಯರ್ಥಿಗಳ ಜಾತಕ ಮತ್ತು ಗ್ರಹಗತಿಗಳ ಅಧ್ಯಯನ ಮಾಡಿ ಇಂಥವರೇ ಗೆಲ್ಲುತ್ತಾರೆಂದು ಡಿ.4ರೊಳಗೆ ಖಚಿತವಾಗಿ ಹೇಳಲಿ. ಕರ್ನಾಟಕದ ಜ್ಯೋತಿಷಿಗಳಿಗೊಂದು ಚಾಲೇಂಜ್.