ಕರ್ನಾಟಕದ ರೈಲ್ವೆ ಕ್ರಾಂತಿ: ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ
ಪ್ರಾಕೃತಿಕ ಸೌಂದರ್ಯದ ಹೆಗ್ಗಳಿಕೆ ಹೊಂದಿರುವ ಕರ್ನಾಟಕದ ರೈಲು ನಿಲ್ದಾಣಗಳು ಮತ್ತೊಂದು ಬಗೆಯ ರಮಣೀಯ ತಾಣಗಳು. ಒಂದೊಂದು ನಿಲ್ದಾಣಗಳಲ್ಲಿಯೂ ಒಂದೊಂದು ಬಗೆಯ ವೈಶಿಷ್ಟ್ಯವಿದೆ. ಇತ್ತೀಚೆಗೆ ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ಬಂದಿರುವ ಬದಲಾವಣೆ ಅಂತಾರಾಷ್ಟ್ರೀಯ ಮಟ್ಟದ್ದು.
ನೀವು ಒಮ್ಮೆ ಬೆಂಗಳೂರಿನಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ ಹೋಗಿ ಬಂದರೆ ಸಾಕು. ಇದೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಭಾವನೆ ಬರುತ್ತದೆ. ಆದರೆ, ಇದು ರೈಲು ನಿಲ್ದಾಣ. ಮೆಜೆಸ್ಟಿಕ್, ಯಶವಂತಪುರ ರೈಲು ನಿಲ್ದಾಣಗಳು ಕೂಡ ತಮ್ಮದೆ ಆದ ವಿಶೇಷತೆಗಳಿಂದ ಕೂಡಿವೆ. ರೈಲು ನಿಲ್ದಾಣಗಳು ಪ್ರವಾಸಿ ಸ್ಥಳಗಳಾಗಿ ಮಾರ್ಪಟ್ಟಿವೆ.

ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಸಾಮಾನ್ಯ ರೈಲುಗಳ ಪ್ರಯಾಣ ಕೂಡ ಅವಿಸ್ಮರಣೀಯ ಅನುಭವ ನೀಡುತ್ತದೆ. ಅಂತಹದರಲ್ಲಿ ವಿಸ್ಟಾಡೋಮ್ ರೈಲು ಪ್ರಯಾಣವು ಜೀವಮಾನದ ಅನುಭವ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಚ್ಚ ಹಸಿರು ಮತ್ತು ಪಶ್ಚಿಮ ಘಟ್ಟಗಳ ಸುಂದರವಾದ ದೃಶ್ಯಗಳ ಜೊತೆ ಜೊತೆಗೆ ವಿಸ್ಟಾಡೋಮ್ ರೈಲಿನ ಐಷಾರಾಮಿ ಸೌಕರ್ಯ ಕೂಡ ನಿಮ್ಮ ಮನಸ್ಸಿನಲ್ಲಿ ಉಳಿಯಲಿದೆ.
ಬದಲಾಯಿತು ರೈಲ್ವೆ.. ಬದಲಾಯಿತು ಭವಿಷ್ಯ!
ಕರ್ನಾಟಕದ ರೈಲ್ವೇಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೆ. ದೀರ್ಘ ಪ್ರಯಾಣಗಳು ಈಗಿಲ್ಲ. ಒಂದು ಗಂಟೆಯೊಳಗೆ ಬೆಂಗಳೂರನ್ನು ಮೈಸೂರಿಗೆ ಸಂಪರ್ಕಿಸಬಹುದು. ಮುಂಬೈಗೆ ಕೇವಲ ಏಳು ಗಂಟೆಗಳಲ್ಲಿ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣ ಮಾಡಬಹುದು. ದಶಕಗಳಿಂದ ಅಭಿವೃದ್ಧಿ ಕಾಣದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಂತಹ ಪ್ರದೇಶಗಳು ಈಗ ರೈಲ್ವೆಯಿಂದ ಪ್ರಯೋಜನ ಪಡೆಯುತ್ತಿವೆ.

ಬಳ್ಳಾರಿ, ಘಟಪ್ರಭಾ, ಗೋಕಾಕ್ ರಸ್ತೆ, ಬೀದರ್, ಮಂಗಳೂರು ಜಂಕ್ಷನ್, ಹರಿಹರ ಸೇರಿ ಹಲವು ನಿಲ್ದಾಣಗಳು ಅಭಿವೃದ್ಧಿಯಾಗುತ್ತಿವೆ. ತಡೆರಹಿತ ಪ್ರಯಾಣಕ್ಕೆ ಸಿದ್ಧವಾಗುತ್ತಿವೆ. ಇದರ ಜೊತೆಗೆ ಬಂದಿರುವ ವಂದೇ ಭಾರತ್ ಎಕ್ಸ್ಪ್ರೆಸ್ಗಳು ರೈಲು ಪ್ರಯಾಣವನ್ನು ಮತ್ತಷ್ಟು ಆರಾಮದಾಯಕವಾಗಿಸಿವೆ. ರಾಜ್ಯದಲ್ಲಿ ಪ್ರಸ್ತುತ ಐದು ವಂದೇ ಭಾರತ್ ರೈಲುಗಳಿವೆ.
ಪ್ರಯಾಣವಷ್ಟೇಯಲ್ಲ.. ಆರ್ಥಿಕತೆಗೂ ಜೀವಸೆಲೆ ಈ ರೈಲ್ವೆ!
ರೈಲ್ವೆ ಕೇವಲ ಪ್ರಯಾಣಿಕರ ಪ್ರಯಾಣಕ್ಕಷ್ಟೇ ಸೀಮಿತವಾಗಿಲ್ಲ. ರೈಲು ನಿಲ್ದಾಣಗಳು ವ್ಯಾಪಾರಿಗಳ ತಾಣವಾಗಿದೆ. ವ್ಯಾಪಾರ, ವ್ಯವಹಾರ ಮಾಡುವ ಸಮುದಾಯಗಳ ಜೀವಸೆಲೆಗಳಾಗಿವೆ. ಅಭಿವೃದ್ಧಿ ಪಡಿಸಿದ ಮಾರ್ಗಗಳಲ್ಲಿ ವೇಗವಾಗಿ ಸರಕು ಸಾಗಣೆಯು ರಾಜ್ಯದಾದ್ಯಂತ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತಿದೆ. ರೈತರು ಈಗ ತಮ್ಮ ಉತ್ಪನ್ನಗಳನ್ನು ಹೆಚ್ಚು ವೇಗವಾಗಿ ಸಾಗಿಸಬಹುದು. ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನ ಪಡೆಯಬಹುದು.

ಸ್ಥಳೀಯರು ಸ್ಟೇಷನ್ ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಉದ್ಯೋಗಗಳು ಸೃಷ್ಟಿಯಾಗುವುದರ ಜೊತೆಗೆ ವ್ಯಾಪಾರಿಗಳು ತಮ್ಮ ಜೀವನ ನಿರ್ವಹಣೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಭಾಗವಾಗಿ ರಾಜ್ಯದಾದ್ಯಂತ 13 ನಿಲ್ದಾಣಗಳನ್ನು ಉನ್ನತೀಕರಿಸಲಾಗಿದೆ.
ಹಿಂದುಳಿದ ಪ್ರದೇಶಗಳಿಗೂ ರೈಲ್ವೆ ಸಂಪರ್ಕ
ಬೀದರ್ನಿಂದ ಕಲಬುರ್ಗಿಗೆ ಸಂಪರ್ಕ ಕಲ್ಪಿಸುವ ಮಾರ್ಗದಂತೆ ಈ ಹಿಂದೆ ಹಿಂದುಳಿದ ಪ್ರದೇಶಗಳಿಗೂ ಹೊಸ ಮಾರ್ಗಗಳನ್ನು ಹಾಕಲಾಗುತ್ತಿದೆ. ನಿಲುಗಡೆ ಇಲ್ಲದ ಎಷ್ಟೋ ಜಾಗಗಳಲ್ಲಿ ನಿಲುಗಡೆ ನೀಡಲಾಗುತ್ತಿದೆ. ರೈಲು ಮಾರ್ಗಗಳನ್ನು ವಿಸ್ತರಿಸಿ ಜನರಿಗೆ ಸೇವೆ ನೀಡಲಾಗುತ್ತಿದೆ. ಸರಕು ಸಾಗಣೆ ಕಾರಿಡಾರ್ಗಳನ್ನು ಮಾಡಿ ವ್ಯಾಪಾರವನ್ನು ಉತ್ತೇಜಿಸಲಾಗುತ್ತಿದೆ.
ಈ ರೈಲ್ವೆ ಕ್ರಾಂತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಖಾಸಗಿ ಹೂಡಿಕೆದಾರರು ಮತ್ತು ಸ್ಥಳೀಯ ಸಮುದಾಯಗಳ ಸಹಯೋಗಕ್ಕೆ ಸಾಕ್ಷಿಯಾಗಿದೆ. ಕರ್ನಾಟಕವು ಸಮರ್ಥ, ಆಧುನಿಕ ಮತ್ತು ಅಂತರ್ಗತ ರೈಲ್ವೆ ಜಾಲದಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕವು ಭವಿಷ್ಯದತ್ತ ಸಾಗುತ್ತಿರುವಾಗ, ಅದರ ರೈಲ್ವೆಗಳು ಪ್ರಗತಿ, ಸಮೃದ್ಧಿ ನಾಳೆಯ ಭವಿಷ್ಯತ್ತಿಗಾಗಿ ಹೊಸ ಹಳಿಗಳನ್ನು ಹಾಕುತ್ತಿವೆ.











Click it and Unblock the Notifications