ಏಪ್ರಿಲ್ನಲ್ಲಿ ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಅದೃಷ್ಟದ ಹೊಳೆ: ಯುಗಾದಿ ತಿಂಗಳು ಯಾರಿಗೆ ಶುಭ, ಯಾರಿಗೆ ಅಶುಭ..?
ಏಪ್ರಿಲ್ ಒಂದರಿಂದ ಒಂಬತ್ತರವರೆಗೂ ಶೋಭಾಕೃತ್ ನಾಮ ಸಂವತ್ಸರ ನಡೆಯುತ್ತದೆ.
ನಂತರ ಏಪ್ರಿಲ್ 9,2024 ಚಾಂದ್ರಮಾನ ಯುಗಾದಿ ಹಬ್ಬ. ಆ ದಿನದಿಂದ ಕ್ರೋಧಿ ನಾಮ ಸಂವತ್ಸರ ಪ್ರಾರಂಭವಾಗುತ್ತದೆ.
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಅಂದರೆ ಏಪ್ರಿಲ್ 2024ರ ಮಾಸ ಭವಿಷ್ಯ.
ಮಾಸದ ವಿಶೇಷಗಳು
ಏಪ್ರಿಲ್ 9: ಚಾಂದ್ರಮಾನ ಯುಗಾದಿ
ಏಪ್ರಿಲ್ 11: ರಂಜಾನ್ ಹಬ್ಬ
ಏಪ್ರಿಲ್ 14: ಸೌರಮಾನ ಯುಗಾದಿ. ಸೂರ್ಯ ಮೀನ ರಾಶಿಯಿಂದ ಮೇಷಕ್ಕೆ ಪ್ರವೇಶ.

ಮೇಷ ರಾಶಿಯ ಮಾಸ ಭವಿಷ್ಯ
ಶುಕ್ರ, ರಾಹು, ಸೂರ್ಯ ಬುಧ ವ್ಯಯಸ್ಥಾನದಲ್ಲಿ ಇದ್ದು ಖರ್ಚುಗಳನ್ನು ಹೆಚ್ಚಿಸುತ್ತಾರೆ. ಸೂರ್ಯ 14ರಂದು ಮೇಷರಾಶಿಗೆ ಪ್ರವೇಶವಾಗುತ್ತಾನೆ. ನಿಮಗೆ ಉಷ್ಣಪ್ರಕೋಪ ಆಗಬಹುದು. ಆರೋಗ್ಯ ಜಾಗ್ರತೆ. ಈ ತಿಂಗಳು ನಿಮಗೆ ಖರ್ಚುಗಳು ಕೊಂಚ ಹೆಚ್ಚೇ ಇವೆ. ಕೆಲಸಕಾರ್ಯಗಳಲ್ಲಿ ಹಿನ್ನಡೆ ಇದೆ. ಶನಿ ಲಾಭ ಸ್ಥಾನದಲ್ಲಿ ಈ ವರ್ಷಪೂರ್ತಿ ಇರುತ್ತಾನೆ. ಅದರಿಂದ ಖರ್ಚು ಇದ್ದರೂ ಹಣಕ್ಕೆ ಕೊರತೆ ಇರುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಗುರು ಧನಸ್ಥಾನಕ್ಕೆ ಬರುತ್ತಾನೆ. ಆಗ ಈ ವರ್ಷಪೂರ್ತಿ ನಿಮಗೆ ಗುರುಬಲ ಶನಿಬಲ ಎರಡೂ ಸಿಗುತ್ತದೆ. ಜೊತೆಗೆ ಆರನೇ ಮನೆಯ ಕೇತು ಸಹ ನಿಮ್ಮ ಬೆಂಬಲಕ್ಕೆ ಇದ್ದಾನೆ. ಖರ್ಚುಗಳು ಹಿಡಿತಕ್ಕೆ ಬರುತ್ತದೆ.
ನೀವು ಯೋಜಿಸಿದಂತೆ ಕೆಲಸಕಾರ್ಯಗಳು ಯುಗಾದಿಯ ನಂತರ ಸುಲಭವಾಗಿ ನೆರವೇರುತ್ತದೆ. ವೃತ್ತಿಯಲ್ಲಿ ನಿಮಗೆ ಖುಷಿ ಕೊಡುವಂಥ ಬದಲಾವಣೆ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆಕಟ್ಟುವುದು, ಆಸ್ತಿಕೊಳ್ಳುವುದು, ವಾಹನ ಖರೀದಿ, ಚಿನ್ನಬೆಳ್ಳಿ ಖರೀದಿ ಮೊದಲಾದ ಸಂತೋಷ ಕೊಡುವಂತ ಸಂಗತಿಗಳು ಈ ವರ್ಷ ನಿಮಗೆ ಇವೆ. ಭಾಗ್ಯೋದಯವಾಗುವ ಸಮಯ. ಸಮಯವನ್ನು ನಿಮಗೆ ಅನುಕೂಲಕರವಾಗಿ ಉಪಯೋಗಿಸಿಕೊಳ್ಳಿ.

ವೃಷಭ ರಾಶಿಯ ಮಾಸ ಭವಿಷ್ಯ
ಈಗ ನಿಮಗೆ ಹತ್ತರಲ್ಲಿ ಶನಿ 12ರಲ್ಲಿ ಗುರು ಇದ್ದಾರೆ. ಮುಂದೆ ಕೆಲವೇ ದಿನಗಳಲ್ಲಿ ಗುರು ನಿಮ್ಮ ರಾಶಿಗೇ ಪ್ರವೇಶವಾಗುತ್ತಾನೆ. ಇದು ಕೊಂಚ ಮಾನಸಿಕ ಕಿರಿಕಿರಿ ಹಾಗೂ ಖರ್ಚನ್ನು ತೋರಿಸುತ್ತದೆ. ವೃತ್ತಿಯಲ್ಲಿ ಒತ್ತಡ ಆಗಬಹುದು. ಆದರೆ ಲಾಭಸ್ಥಾನದಲ್ಲಿ ಈ ಮಾಸದ ಮಧ್ಯಭಾಗದವರೆಗೂ ಸೂರ್ಯ ಶುಕ್ರ, ಬುಧ, ರಾಹು ಇರುತ್ತಾರೆ. ನಿಮಗೆ ಧನಾಗಮನ ಚೆನ್ನಾಗಿದೆ. ನಿರೀಕ್ಷೆಗೂ ಮೀರಿ ಹಣದ ಆದಾಯ ಚೆನ್ನಾಗಿ ಇರುತ್ತದೆ. 15ರ ನಂತರ ಸೂರ್ಯ ವ್ಯಯಸ್ಥಾನವಾದ ಮೇಷರಾಶೀಗೆ ಪ್ರವೇಶವಾದರೂ ಲಾಭ ಸ್ಥಾನದಲ್ಲಿ ಇನ್ನೂ ಮೂರುಗ್ರಹಗಳು ಇರುವುದರಿಂದ ಚಿಂತೆಗೆ ಕಾರಣವಿಲ್ಲ.
ರಾಹು ಈ ವರ್ಷ ಪೂರ್ತಿ ಲಾಭಸ್ಥಾನದಲ್ಲಿ ಇದ್ದು ನಿಮಗೆ ಹಣಕಾಸಿನ ಸಹಾಯ ಮಾಡುತ್ತಲೇ ಇರುತ್ತಾನೆ. ರಾಹುವಿನಿಂದ ಧೈರ್ಯ, ಛಾತಿ. ಹಣ ಈ ಮೂರು ನಿಮಗೆ ಒದಗಿಬರುತ್ತದೆ. ಸಂಕಷ್ಟದ ಸಮಯದಲ್ಲಿ ಯಾರಾದರೂ ನಿಮ್ಮ ಸಹಾಯಕ್ಕೆ ಒದಗಿ ಬರುತ್ತಾರೆ. ಹಣಕಾಸಿನ ಬಿಕ್ಕಟ್ಟು ಆಗಾಗ ತಲೆದೋರಿದರೂ ರಾಹುವಿನ ನೆರವಿನಿಂದ ಅದು ತಕ್ಷಣ ಪರಿಹಾರವೂ ಆಗುತ್ತದೆ. ಶುಭಕಾರ್ಯಕ್ಕಾಗಿ ಹಣ ಖರ್ಚು ಮಾಡುತ್ತೀರಿ. ಒಳ್ಳೆಯ ಹೆಸರು ಪಡೆಯುತ್ತೀರಿ.

ಮಿಥುನ ರಾಶಿಯ ಮಾಸ ಭವಿಷ್ಯ
ಈ ಮಾಸದ ಮಧ್ಯಭಾಗದಿಂದ ಸೂರ್ಯ ಲಾಭ ಸ್ಥಾನಕ್ಕೆ ಬಂದು ಈ ಮಾಸಪೂರ್ತಿ ಇರುತ್ತಾನೆ. ಲಾಭಸ್ಥಾನದಲ್ಲಿ ಯಾವುದೇ ಗ್ರಹ ಇದ್ದರೂ ಹಣಕಾಸಿನ ನೆರವು ಸಿಗುತ್ತದೆ. ಸರ್ಕಾರದಿಂದ ಲಾಭ ಇದೆ. ಮುಂದಿನ ದಿನಗಳಲ್ಲಿ ಗುರು ವ್ಯಯಸ್ಥಾನಕ್ಕೆ ಬಂದಾಗ ಖರ್ಚುಗಳು ಹೆಚ್ಚಾಗುತ್ತದೆ. ಧರ್ಮ ಕಾರ್ಯಕ್ಕೆ ಹಣ ಖರ್ಚು ಮಾಡುವಿರಿ. ಜಾಗ ಬದಲಾವಣೆ ಆಗುವ ಯೋಗ ಇದೆ. ಇದು ನಿಮ್ಮ ವಾಸಸ್ಥಾನದ ಬದಲಾವಣೆ ಇರಬಹುದು ಅಥವಾ ವೃತ್ತಿಯಲ್ಲಿ ಬದಲಾವಣೆ ಇರಬಹುದು.
ಒಂದು ಒಳ್ಳೆಯ ಬದಲಾವಣೆ ಅಂತೂ ಇದೆ. ಇದನ್ನು ನಿಮಗೆ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳಿ. ವೃತ್ತಿಸ್ಥಾನದಲ್ಲಿ ರಾಹು ಶುಕ್ರಬುಧ ಇರುವವರೆಗೂ ನಿಮಗೆ ವೃತ್ತಿ ಆರಾಮದಾಯಕವಾಗಿ ಇರುತ್ತದೆ. ಒಂಬತ್ತರ ಶನಿ ತಟಸ್ಥ. ಈ ವರ್ಷದಲ್ಲಿ ಸಹ ನಿಮ್ಮ ಜೀವನದಲ್ಲಿ ಒಂದು ಬದಲಾವಣೆ ಇದೆ ಇದರಿಂದ ನಿಮಗೆ ಕೊಂಚ ಅನುಕೂಲವೂ ಆಗುತ್ತದೆ. ಬಾಕಿಯಂತೆ ಯಾವ ಏರುಪೇರು ಇಲ್ಲದ ಜೀವನ.

ಕಟಕ ರಾಶಿಯ ಮಾಸ ಭವಿಷ್ಯ
ಕಳೆದ ವರ್ಷ ಅಷ್ಠಮಶನಿಯಿಂದ ಬಹಳಷ್ಟು ಕಷ್ಟ ಪಟ್ಟಿದ್ದೀರಿ. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೀರಿ. ಈ ವರ್ಷವೂ ಅಷ್ಟಮಶನಿ ಇದ್ದರೂ ಮುಂದೆ ಕೆಲವೇ ದಿನಗಳಲ್ಲಿ ಗುರು ಲಾಭಸ್ಥಾನಕ್ಕೆ ಪ್ರವೇಶವಾದಾಗ ನಿಮಗೆ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಒದಗಿ ಬರುತ್ತದೆ. ಈ ವರ್ಷ ಪೂರ್ತಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿರುತ್ತೀರಿ. ಅವಿವಾಹಿತರಿಗೆ ವಿವಾಹಯೋಗ ಇದೆ. ಎಷ್ಟೋ ಕ್ಲಿಷ್ಟ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡಿದ್ದೀರಿ. ಹಣ ಬಹಳಷ್ಟು ಕಳೆದುಕೊಂಡಿದ್ದೀರಿ. ಕೆಲವರು ಅಧಿಕಾರ ಪದವಿಯನ್ನೂ ಕಳೆದುಕೊಂಡಿರಬಹುದು. ಈಗ ಅವೆಲ್ಲವೂ ನಿಮಗೆ ಸಿಗುತ್ತದೆ.
ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸಮಾಜದಲ್ಲಿ ತಲೆಯೆತ್ತಿ ನಿಲ್ಲುತ್ತೀರಿ. ಸಾಮಾಜಿಕ ಗೌರವ ಮನ್ನಣೆಗಳು ಸಿಗುತ್ತ್ತವೆ. ವೃತ್ತಿಯಲ್ಲಿ ಬಡ್ತಿಗಾಗಿ ಕಾಯುತ್ತಿರುವವರಿಗೆ ಶುಭಸುದ್ದಿ ಇದೆ. ಆರೋಗ್ಯ ಸುಧಾರಿಸುತ್ತದೆ. ಬಂಧುಗಳೊಡನೆ ಒಡನಾಡುತ್ತೀರಿ. ವಿಹಾರಧಾಮಗಳಿಗೆ ಹೋಗಿಬರುತ್ತೀರಿ. ಈ ವರ್ಷ ನಿಮಗೆ ಜೀವನದಲ್ಲಿ ಪ್ರಫುಲ್ಲತೆ ಇದೆ. ಅದು ಈ ತಿಂಗಳಿನಿಂದಲೇ ನಿಮ್ಮ ಅನುಭವಕ್ಕೆ ಬರುತ್ತದೆ.

ಸಿಂಹ ರಾಶಿಯ ಮಾಸ ಭವಿಷ್ಯ
ಈ ವರ್ಷ ನಿಮಗೆ ಮಧ್ಯಮ ಫಲಗಳು. ಈ ಮಾಸದಲ್ಲಿ ಉತ್ತಮಫಲಗಳು ಇವೆ. ಇದುವರೆಗೂ ಭಾಗ್ಯಸ್ಥಾನದ ಗುರುವಿನಿಂದ ಉತ್ತಮಫಲಗಳನ್ನು ಪಡೆದಿದ್ದೀರಿ. ಈ ಮಾಸವೂ ಪಡೆಯುತ್ತೀರಿ. ಆದರೆ ಮುಂದಿನ ದಿನಗಳಲ್ಲಿ ಗುರುವಿನ ಬದಲಾವಣೆಯಿಂದ ಕೊಂಚ ಏರಪೇರು ಸಾಧ್ಯತೆ ಇದೆ. ಸರಾಗವಾಗಿ ನಡೆಯುತ್ತಿದ್ದ ಜೀವನದ ಬಂಡಿ ಕೊಂಚ ಮುಗ್ಗರಿಸಿದಂತೆ ಆಗುತ್ತದೆ. ಗುರುವಿನ ಅನುಗ್ರಹ ಪಡೆದುಕೊಳ್ಳಿ. ಈಗ ಶನಿ ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ವರ್ಷಪೂರ್ತಿ ಇರುತ್ತಾನೆ. ಜೊತೆಗೆ ಮಂಗಳನೂ ಈ ತಿಂಗಳ 20ರ ತನಕ ಇರುತ್ತಾನೆ. ಇದು ನಿಮಗೆ ಕೊಂಚ ಹಿನ್ನೆಡೆ ಕೊಡುತ್ತದೆ.
ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹದು. ಈ ಮಾಸದ ಮಧ್ಯಭಾಗದಿಂದ ಸೂರ್ಯ ಭಾಗ್ಯಸ್ಥಾನಕ್ಕೆ ಬರುತ್ತಾನೆ. ಈ ಮಾಸ ಪೂರ್ತಿ ಸೂರ್ಯ ಗುರು ಒಟ್ಟಿಗೆ ಇರುತ್ತಾರೆ. ಇದು ನಿಮಗೆ ಬಹಳಷ್ಟು ಒಳ್ಳೆಯ ಫಲಗಳನ್ನು ನೀಡುತ್ತದೆ. ಈ ಮಾಸ ಪೂರ್ತಿ ಗುರುಬಲ ಇದೆ. ಆದ್ದರಿಂದ ಅಷ್ಟೊಂದು ಚಿಂತೆಗೆ ಕಾರಣವಿಲ್ಲ. ಆದರೂ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಂದಲ್ಲ ಹತ್ತುಬಾರಿ ಯೋಚಿಸಿ. ನೀವು ಯಾರನ್ನೂ ನಂಬುತ್ತೀರೋ ಅವರಿಂದಲೇ ತೊಂದರೆ ಎದುರಾಗುವ ಸಾಧ್ಯತೆ ಬರಬಹುದು.

ಕನ್ಯಾ ರಾಶಿಯ ಮಾಸ ಭವಿಷ್ಯ
ನಿಮಗೆ ಈ ಮಾಸ ಈ ತಿಂಗಳು ಅದೃಷ್ಟವೋ ಅದೃಷ್ಟ. ಭಾಗ್ಯಸ್ಥಾನಕ್ಕೆ ಗುರು ಪ್ರವೇಶವಾಗುವುದರಿಂದ ನಿಮಗೆ ಬಹಳಷ್ಟು ಶುಭಫಲಗಳು ಈ ವರ್ಷ ಸಿಗುತ್ತದೆ. ಶನಿ ಕೂಡ ಆರನೇ ಮನೆಯಲ್ಲಿ ಈ ವರ್ಷಪೂರ್ತಿ ಇದ್ದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತಾನೆ. ಈ ತಿಂಗಳಲ್ಲಿ ಕೊಂಚ ಅಡಚಣೆ ನಿಧಾನ ಕಾಣಿಸಿಕೊಂಡರೂ ಈ ತಿಂಗಳ ಕೊನೆಯ ಹೊತ್ತಿಗೆ ಎಲ್ಲ ಕೆಲಸಗಳೂ ವೇಗ ಪಡೆದುಕೊಳ್ಳುತ್ತದೆ. ಅದೃಷ್ಟದ ಗಾಳಿ ಬೀಸಿ ಬರುತ್ತದೆ. ಹಣದ ಹರಿವೂ ಉತ್ತಮವಾಗಿ ಇರುತ್ತದೆ.
ಅವಿವಾಹಿತರಿಗೆ ಈ ವರ್ಷ ಕಂಕಣ ಬಲ ಇದೆ. ಆಸ್ತಿಕೊಳ್ಳುವ ಯೋಗ ಇದೆ. ಉದ್ಯೋಗದಲ್ಲಿ ಬಡ್ತಿ ಇದೆ. ಅರ್ಹರಿಗೆ ಪ್ರಶಸ್ತಿ ಸನ್ಮಾನಗಳು ದೊರೆಯುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಇದೆ. ಕಂಪ್ಯೂಟರ್ ಪರಿಣಿತರಿಗೆ ಗಣಿತಜ್ಞರಿಗೆ ಅಕೌಂಟ್ಸ್ ವಿಭಾಗದವರಿಗೆ ಉತ್ತಮ ಫಲಗಳು ದೊರೆಯತ್ತದೆ. ಒಳ್ಳೆಯ ಹೆಸರು ಪ್ರತಿಷ್ಠೆ ಸಿಗುತ್ತದೆ. ವಿದೇಶ ಪ್ರಯಾಣ ಯೋಗ ಇದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು. ಉನ್ನತ ವ್ಯಾಸಂಗಕ್ಕೆ ಅನುಕೂಲ ಒದಗಿಬರುತ್ತದೆ. ಎಲ್ಲ ರೀತಿಯಲ್ಲೂ ಉತ್ತಮಫಲಗಳನ್ನು ನಿರೀಕ್ಷಿಸಬಹುದು. ಯಾವುದೇ ಸಮಸ್ಯೆಗಳು ಕಾಡುತ್ತಿದರೆ ಪರಿಹಾರ ದೊರೆಯುತ್ತದೆ. ನೀವು ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಖುಷಿ ಸುಮ್ಮಾನ ನಿಮ್ಮದಾಗಿರುತ್ತದೆ.

ತುಲಾ ರಾಶಿಯ ಮಾಸ ಭವಿಷ್ಯ
ವರ್ಷಫಲಕ್ಕೆ ಹೇಳುವುದಾದರೆ ಈ ವರ್ಷ ನಿಮಗೆ ಮಧ್ಯಮಫಲಗಳಿವೆ. ಏಪ್ರಿಲ್ ತಿಂಗಳು ಪೂರ್ತಿ ಗುರುಬಲ ರಾಹುಬಲ ಇರುತ್ತದೆ. ನೀವು ಮುಟ್ಟಿದ್ದೆಲ್ಲ ಚಿನ್ನ. ಎಲ್ಲ ರೀತಿಯ ಅನುಕೂಲಗಳು ಒದಗಿ ಬರುತ್ತದೆ. ಹೊಸ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ, ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಈಗ ಶುಭಸುದ್ದಿ ಇದೆ. ನೌಕರಿಯಲ್ಲಿ ಬಡ್ತಿ ಇದೆ. ವಿಶೇಷ ಸ್ಥಾನಮಾನ ಸಿಗುವುದು, ಸನ್ಮಾನ ಗೌರವ ಪ್ರಶಸ್ತಿ ಎಲ್ಲವೂ ನಿಮಗೆ ಲಭಿಸುತ್ತದೆ. ಮನಸ್ಸಿಗೆ ಮುದ ನೀಡುವ ಸಂಗತಿಗಳು ಇವೆ.
ಹಣಕಾಸಿನ ಒತ್ತಡ ಕೊಂಚ ಇರುತ್ತದೆ. ಏಕೆಂದರೆ ಪಂಚಮಶನಿಯ ಪ್ರಭಾವ ಇರುವುದರಿಂದ ಕೊಂಚ ಅಡ್ಡಿಆತಂಕಗಳನ್ನು ಎದುರಿಸಬೇಕಾಗುತ್ತದೆ. ಏಪ್ರಿಲ್ ನಂತರ ಗುರುಬಲ ಕಡಿಮೆಯಾಗುತ್ತದೆ. ಆಗ ನಿಮ್ಮ ಓಟದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸುತ್ತೀರಿ. ಆದರೆ ಈ ವರ್ಷಪೂರ್ತಿ ರಾಹುಬಲ ಇದೆ. ರಾಹುಬಲವು ನಿಮಗೆ ಹಣಕಾಸಿನ ನೆರವನ್ನೂ, ಧೈರ್ಯ ಛಲ ಎದೆಗಾರಿಕೆಯನ್ನು ಕೊಡುತ್ತದೆ. ಗುರುಬಲ ಇಲ್ಲದಿದ್ದರೂ ಈ ವರ್ಷಪೂರ್ತಿ ನೀವು ರಾಹುಬಲದಿಂದ ಮುನ್ನಡೆಯನ್ನು ಸಾಧಿಸುತ್ತೀರಿ. ಶತ್ರುಗಳನ್ನು ನಿಗ್ರಹಿಸುತ್ತೀರಿ. ಅಡಚಣೆಗಳನ್ನು ಮುರಿದು ಮುಂದೆ ಸಾಗುತ್ತೀರಿ.

ವೃಶ್ಚಿಕ ರಾಶಿಯ ಮಾಸ ಭವಿಷ್ಯ
ಈ ವರ್ಷ ಫಲದಲ್ಲಿ ನಿಮಗೆ ಈ ವರ್ಷ ಪೂರ್ತಿ ಗುರುಬಲ ಇದ್ದು ಈ ಸಂವತ್ಸರ ನಿಮಗೆ ಶುಭವನ್ನು ತರುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ಹೊಸ ನೌಕರಿಗಾಗಿ ಪ್ರಯತ್ನ ಪಡುತ್ತಿರುವವರಿಗೆ ಶುಭಸುದ್ದಿ ಇದೆ. ವಿದೇಶ ಪ್ರಯಾಣ ಯೋಗ ಇದೆ. ಈ ಮಾಸದಲ್ಲಿ ನಿಮಗೆ ಇನ್ನೂ ಗುರುಬಲ ಬಂದಿರುವುದಿಲ್ಲ. ಹಾಗಾಗಿ ಈ ತಿಂಗಳು ಕೊಂಚ ನಿಧಾನಗತಿಯನ್ನು ಅನುಭವಿಸುತ್ತೀರಿ. ಈ ವರ್ಷಪೂರ್ತಿ ಶನಿ ನಾಲ್ಕನೇ ಮನೆಯಲ್ಲಿ ಗುರು ಏಳನೇ ಮನೆಯಲ್ಲಿ ಇರುತ್ತಾರೆ. ಶನಿ ನಾಲ್ಕನೇ ಮನೆಯಲ್ಲಿ ಇರುವುದು ಅಷ್ಟು ಶುಭದಾಯಕವಲ್ಲ. ವಾಹನಗಳಿಂದ ನಷ್ಟ ಇದೆ. ವಾಹನ ವ್ಯಾಪಾರಿಗಳಿಗೆ, ಲೋಹದ ವ್ಯಾಪಾರಿಗಳಿಗೆ ನಷ್ಟ ಇದೆ. ಅಂದರೆ ನಿಮ್ಮ ನಿರೀಕ್ಷೆಯಷ್ಟು ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಮದ್ಯಮ ವೇಗ ಇರುತ್ತದೆ.
ಏಪ್ರಿಲ್ 14 ರ ನಂತರ ಸೂರ್ಯ ಉಚ್ಛರಾಶಿಯಾದ ಮೇಷಕ್ಕೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಧೈರ್ಯ ಸಿಗಲಿದೆ. ಸರ್ಕಾರದಿಂದ ಆದಾಯ ವೃದ್ಧಿಯಾಗುತ್ತದೆ. ಆರನೇ ಮನೆಯ ಸೂರ್ಯ ಹಣಕಾಸಿನ ನೆರವನ್ನೂ ಕೊಡುತ್ತಾನೆ. ಈ ತಿಂಗಳ ಅಂತ್ಯದಲ್ಲಿ ಗುರು ಬದಲಾವಣೆಯಾದಾಗ ನಿಮಗೆ ನಿಮ್ಮ ನಿರೀಕ್ಷೆಗೂ ಮೀರಿ ಶುಭಫಲಗಳು ದೊರೆಯಲಿದೆ. ನಿಮ್ಮ ಎಲ್ಲಾ ಸಮಸ್ಯಗಳಿಗೂ ಪರಿಹಾರ ಸಿಗುತ್ತದೆ. ಬಂಧುಬಾಂಧವರ, ನಿಮ್ಮ ಮನೆಯವರ ಬೆಂಬಲ ಸಿಗುತ್ತದೆ. ಧನದ ಮೂಲ ಉತ್ತಮವಾಗುತ್ತದೆ.

ಧನಸ್ಸು ರಾಶಿಯ ಮಾಸ ಭವಿಷ್ಯ
ನೀವು ಕಳೆದ ಒಂದು ವರ್ಷದಿಂದ ಶನಿ ಬಲ ಗುರು ಬಲ ಎರಡನ್ನೂ ಬಹಳ ಅನಭವಿಸುತ್ತಿದ್ದೀರಿ. ಮೂರನೇ ಮನೆಯ ಶನಿ ಈ ವರ್ಷಪೂರ್ತಿ ಅಲ್ಲೇ ಇದ್ದು ನಿಮಗೆ ಸುಖ ಸಂತೋಷಗಳನ್ನು ಹೆಚ್ಚಿಸುತ್ತಾನೆ. ಹಣದ ಹರಿವು ತುಂಬಾ ಉತ್ತಮವಾಗಿದೆ. ಆದರೆ ಈ ತಿಂಗಳ ಅಂತ್ಯದಲ್ಲಿ ಗುರು ಈಗಿರುವ ಐದನೇ ಮನೆಯಿಂದ ಆರನೇ ಮನೆಗೆ ಪ್ರವೇಶವಾಗುತ್ತಾನೆ. ಆರನೇ ಮನೆಯ ಗುರು ಅಷ್ಟು ಶುಭಕಾರಕನಲ್ಲ. ಮನಸ್ಸಿಗೆ ಚಿಂತೆ, ದುಃಖ ವ್ಯಾಕುಲಗಳು ಕಾಡಿಸುತ್ತದೆ. ನಿಮ್ಮವರೇ ನಿಮಗೆ ವಿರೋಧವಾಗಿ ನಿಲ್ಲಬಹುದು. ಹಣಕಾಸಿನ ಮುಗ್ಗಟ್ಟು ಆಗಾಗ ತಲೆದೋರುತ್ತದೆ. ಯಾವುದಾದರೂ ಹಳೆಯ ತಪ್ಪುಗಳು ಈಗ ಮೇಲೆದ್ದು ನಿಂತು ನಿಮ್ಮನ್ನು ಕಂಗೆಡಿಸಬಹುದು.
ಈ ತಿಂಗಳಿಗೆ ಹೇಳುವುದಾದರೆ ಇನ್ನೂ ಗುರುಬಲ ಇದ್ದು ನಿಮಗೆ ಬೇಕಾದ ಸಹಾಯ ಸೌಲಭ್ಯಗಳು ಸಿಗುತ್ತವೆ. ಗಂಡು ಸಂತಾನದಿಂದ ಶುಭಸುದ್ದಿ ಇದೆ. ಮಕ್ಕಳೊಡನೆ ಒಡನಾಟ ನಿಮಗೆ ಖುಷಿ ಕೊಡುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ಈ ವರ್ಷಪೂರ್ತಿ ಇರುತ್ತಾನೆ. ಇದರಿಂದ ನಿಮಗೆ ಸುಖವಾಗಿ ಇರಲು ಆಗಾಗ ತೊಂದರೆ ಆಗುತ್ತದೆ. ತಾಯಿಯೊಂದಿಗೆ ವಿರೋಧ ಏರ್ಪಡುತ್ತದೆ. ಅನಾರೋಗ್ಯ ಕಾಡಿಸಬಹುದು. ಸಂಗಾತಿಯ ಆರೋಗ್ಯವೂ ಏರುಪೇರಾಗಬಹುದು. ವೃಥಾ ಅಲೆದಾಟ ಅನಿಶ್ಚಿಂತೆ ಕಾಡಿಸುತ್ತದೆ.

ಮಕರ ರಾಶಿಯ ಮಾಸ ಭವಿಷ್ಯ
ನಿಮಗೆ ಇಲ್ಲಿಯವರೆಗೂ ಬಹಳ ಪರಿಕ್ಷಾ ಕಾಲವನ್ನು ಅನುಭವಿಸಿದ್ದೀರಿ. ನಮ್ಮ ಫೈಲನ್ನು ದೇವರು ಗಮನಿಸುವುದೇ ಇಲ್ಲವೇ ಎನ್ನುವಷ್ಟು ಬೇಸರ ಹತಾಶೆಗಳು ನಿಮಗೆ ಆಗಿವೆ. ನಮಗೂ ಒಳ್ಳೆಯ ಕಾಲ ಬರತ್ತದಾ ಎಂದು ಬಹಳ ಕಾತುರದಿಂದ ನಿರೀಕ್ಷೆ ಮಾಡುತ್ತಿದ್ದೀರಿ. ಸಾಡೆಸಾತಿಯ ಪ್ರಭಾವ ಏಳು ವರ್ಷದಿಂದ ನಿಮ್ಮನ್ನು ಹಣ್ಣು ಮಾಡಿದೆ. ಎಲ್ಲದಕ್ಕೂ ಕೊನೆ ಎಂಬುದು ಇರುತ್ತದೆ. ಹಾಗೆಯೇ ನಿಮ್ಮ ಕಷ್ಟಗಳೂ ಈವರ್ಷ ಕೊನೆಗಾಣುತ್ತದೆ. ಈ ತಿಂಗಳಲ್ಲೇ ಅದರ ಪ್ರಭಾವ ನಿಮಗೆ ಗೋಚರಿಸುತ್ತದೆ. ಈ ವರ್ಷದ ಫಲ ಹೇಳುವುದಾದರೆ ಈ ವರ್ಷ ಸೆಪ್ಟೆಂಬರ್ ಹೊತ್ತಿಗೆ ನಿಮ್ಮ ಸಾಡೆಸಾತಿ ಶನಿ ಸಂಪೂರ್ಣ ಮುಗಿಯುತ್ತದೆ.
ಯುಗಾದಿ ಕಳೆದ ನಂತರ ನಿಮ್ಮ ಸಮಯ ಬಹಳ ಚೆನ್ನಾಗಿದೆ. ಅವಕಾಶಗಳು ಇದುವರೆಗೂ ಮಾಯಾಜಿಂಕೆಯಂತೆ ಹತ್ತಿರದವರೆಗೂ ಬಂದು ಮಾಯವಾಗುತ್ತಿತ್ತು. ಈಗ ಗಟ್ಟಿ ಅವಕಾಶಗಳು ಬರುತ್ತವೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕೆ ಉದ್ಯೋಗ ಅಥವಾ ಇನ್ಯಾವುದೇ ನಿಮ್ಮ ಭವಿಷ್ಯವನ್ನು ಭವ್ಯವಾಗಿಸುವ ಅವಕಾಶಗಳು ಬಂದೇ ಬರುತ್ತದೆ.
ಈ ವರ್ಷ ನೀವು ನೆಮ್ಮದಿ ಕಾಣುತ್ತೀರಿ. ನೀವು ಕಳೆದುಕೊಂಡ ಅಧಿಕಾರ ಹಣ ಸಾಮಾಜಿಕ ಗೌರವ ಪ್ರಸಿದ್ಧಿ ಎಲ್ಲವೂ ನಿಮಗೆ ಮರಳಿ ಸಿಗುತ್ತದೆ. ಅರ್ಹರಿಗೆ ವಿವಾಹಭಾಗ್ಯ ಇದೆ. ವಿದೇಶದಲ್ಲಿ ಅವಕಾಶ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಇದೆ. ಯುಗಾದಿಯ ನಂತರ ನಿಮಗೆ ಗುರುಬಲ ಪ್ರಾರಂಭವಾಗುತ್ತದೆ. ಐದನೇ ಮನೆಗೆ ಪ್ರವೇಶವಾಗುವ ಗುರು ನಿಮ್ಮ ಮೇಲಿನ ಸ್ತರದ ಜೀವನಕ್ಕೆ ಕೊಂಡೊಯ್ಯುತ್ತಾನೆ. ನೀವು ಊಹಿಸದೆ ಇರುವಂಥ ಅವಕಾಶಗಳು, ಸುಖಶಾಂತಿ ನೆಮ್ಮದಿಗಳು ದೊರೆಯುತ್ತದೆ. ಜೀವನ ಗಟ್ಟಿಯಾಗಿ ನೆಲೆ ನಿಲ್ಲುತ್ತದೆ.

ಕುಂಭ ರಾಶಿಯ ಮಾಸ ಭವಿಷ್ಯ
ಈ ವರ್ಷ ನಿಮಗೆ ಗುರು ನಾಲ್ಕನೇ ಮನೆಗೆ ಪ್ರವೇಶವಾಗಿ ಕೊಂಚ ಅಡಚಣೆಗಳನ್ನು ಕೊಡುತ್ತಾನೆ. ವೃಥಾ ಅಲೆದಾಟ, ಊಟ ನಿದ್ರೆಗೆ ಕೊರತೆ, ಮಾನಸಿಕ ಕಿರಿಕಿರಿ ಇರುತ್ತದೆ. ಹಣದ ಅಡಚಣೆ ಬಹುವಾಗಿ ಕಾಡುತ್ತದೆ. ಹಣದ ಕೊರತೆ ಇಲ್ಲದಿದ್ದರೂ ಖರ್ಚುಗಳು ಹೇರಳವಾಗಿ ಇದೆ. ನಿಮ್ಮ ರಾಶಿಯಲ್ಲೇ ಶನಿ ಈ ವರ್ಷಪೂರ್ತಿ ಇರುತ್ತಾನೆ. ಹಾಗೂ ಗುರು ಮೂರನೇ ಮನೆಯಿಂದ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಈ ಎರಡೂ ಗ್ರಹಗಳ ಪ್ರಭಾವ ನಿಮಗೆ ಕೊಂಚ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ನೀವು ಅಂದುಕೊಳ್ಳುವುದೇ ಒಂದು ಆಗುವುದೇ ಒಂದು ಎಂಬಂತೆ ಸನ್ನಿವೇಶಗಳು ಸೃಷ್ಟಿಯಾಗುತ್ತದೆ.
ನಿಮ್ಮನ್ನು ಗಲಿಬಿಲಿಗೊಳಿಸುತ್ತದೆ. ಮೇಲಧಿಕಾರಿಗಳ ಆಗ್ರಹಕ್ಕೆ ಪಾತ್ರರಾಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇದೆ. ವಿದೇಶ ಪ್ರಯಾಣ ಹೋಗುವವರಿಗೆ ವೀಸಾದ ಸಮಸ್ಯೆ ಕಾಡಿಸಬಹುದು. ವರ್ಗಾವಣೆ ಬಯಸುವವರಿಗೆ ತಾವು ಇಚ್ಛೆಪಟ್ಟ ಜಾಗಕ್ಕೆ ವರ್ಗಾವಣೆ ಸಿಗದೆ ಪರತಪಿಸುವಂತಾಗುತ್ತದೆ. ತಾಯಿಯ ಆರೋಗ್ಯಕ್ಕೆ ಹಾನಿ ಇದೆ. ವಯಸ್ಸಾದ ತಾಯಿ ಇದ್ದವರು ಕೊಂಚ ಜಾಗ್ರತೆ ವಹಿಸಿ. ಎರಡನೇ ಮನೆ ರಾಹುವಿನಿಂದ ಹಣಕಾಸು ಸ್ಥಿತಿಗೆ ಕೊಂಚ ಸಹಾಯವಾದರೂ ಕೌಟುಂಬಿಕವಾಗಿ ನೆಮ್ಮದಿಗೆ ಭಂಗ ಇದೆ. ನೀವು ಈ ವ್ಯತಿರಿಕ್ತ ಗ್ರಹಗಳ ಉಪಶಮನಕ್ಕಾಗಿ ಒಂದು ನವಗ್ರಹ ಹೋಮ ಮಾಡಿಸುವುದು ಒಳ್ಳೆಯದು.

ಮೀನ ರಾಶಿಯ ಮಾಸ ಭವಿಷ್ಯ
ನಿಮಗೂ ಈ ವರ್ಷ ಪೂರ್ತಿ ಶನಿ ವ್ಯಯಸ್ಥಾನದಲ್ಲಿ ಇದ್ದು ಖರ್ಚುಗಳನ್ನು ಹೆಚ್ಚಿಸುತ್ತಾನೆ. ಇದುವರೆಗೂ ಗುರುಬಲ ನಿಮ್ಮ ರಾಶಿಗೆ ಇತ್ತು. ಈಗ ಯುಗಾದಿಯ ನಂತರ ಗುರುಬಲ ಕಡಿಮೆಯಾಗುತ್ತದೆ. ಇದುವರೆಗೂ ಧನಸ್ಥಾನದಲ್ಲಿ ಇದ್ದ ಗುರು ಈಗ ಮೂರನೇ ಮನೆಗೆ ಪ್ರವೇಶವಾಗುತ್ತಾನೆ. ಸಹೋದರಿಂದ ಸಹಾಯ ಸಿಗುತ್ತದೆ. ಬೆಂಬಲ ಸಹಕಾರ ಸಿಗುತ್ತದೆ. ಆದರೆ ನೀವು ಸಾಡೆಸಾತಿಯ ತೀಕ್ಷ್ಣ ಪ್ರಭಾವದಲ್ಲಿ ಇದ್ದೀರಿ. ಹಾಗಾಗಿ ನಿಮಗೆ ಈಗ ಯಾವುದೇ ಸಹಾಯ ಸಹಕಾರ ಸಿಕ್ಕರೂ ಅದು ಸಾಲುವುದಿಲ್ಲ. ಏನೋ ಒಂದು ಕೊರತೆ ಕಾಡಿಸುತ್ತದೆ.
ಏಪ್ರಿಲ್ 14 ನಂತರ ಸೂರ್ಯ ಉಚ್ಛನಾಗಿ ಎರಡನೇ ಮನೆಗೆ ಪ್ರವೇಶ ಮಾಡಿದಾಗ ನಿಮಗೆ ಕೊಂಚ ಹಣಕಾಸಿನ ನೆರವು ಸಿಗಬಹುದು. ನಿಮಗೂ ಈಗ ವೃತ್ತಿಯಲ್ಲಿ ಒತ್ತಡ, ಮನೆಯಲ್ಲಿ ಅಸಹಕಾರ ಮೇಲಧಿಕಾರಿಗಳ ಕಿರುಕುಳ ಎಲ್ಲವೂ ಇರುತ್ತದೆ. ಆದರೆ ಯಾವುದಕ್ಕೂ ಹೆದರಬೇಡಿ. ನಿಮ್ಮ ಕೆಲಸವನ್ನು ಸತ್ಯ ನಿಷ್ಠೆಯಿಂದ ಮಾಡಿ. ಸತ್ಯ ಮತ್ತು ಧರ್ಮವನ್ನು ಬಿಡಬೇಡಿ. ನಿಮ್ಮ ಕೈಲಾದಷ್ಟು ದಾನಧರ್ಮ ಮಾಡಿ. ಪ್ರತಿ ಶನಿವಾರ ಆಂಜನೇಯನ ಗುಡಿಗೆ ಹೋಗಿಬನ್ನಿ. ಹನುಮಾನ್ ಚಾಲೀಸಾ ಪ್ರತಿದಿನ ಹೇಳಿಕೊಳ್ಳಿ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications