ನಾನಿದ್ದೀನಿ ಮಚ್ಚಾ.. ಹೆದರಬೇಡ: ವೈಭವ್ ಸೂರ್ಯವಂಶಿ ಪರ ನಿಂತು ದೊಡ್ಡತನ ಮೆರೆದ ತಿಲಕ್ ವರ್ಮಾ
Vaibhav Sooryavanshi: ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಭಾನುವಾರ (ಜೂನ್ 21) ಅಂದರೆ ಇನ್ನೂ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಅವರು 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಬಗ್ಗೆ ಮಹತ್ವದ ಹೇಳಿಕೆ ನೀಡಿ ದೊಡ್ಡತನ ಮೆರೆದಿದ್ದಾರೆ. ಇದು ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಭಾರತ 'ಎ' ತಂಡದ ನಾಯಕರಾಗಿರುವ ತಿಲಕ್ ವರ್ಮಾ ಅವರು, ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಬೆಂಬಲಕ್ಕೆ ನಿಂತಿದ್ದಾರೆ. 15 ವರ್ಷದ ವೈಭವ್ ಅವರ ಪ್ರಸ್ತುತ ಫಾರ್ಮ್ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ನಡುವೆಯೂ, ಅವರು ತಮ್ಮ ಸ್ವಾಭಾವಿಕ ಮತ್ತು ಆಕ್ರಮಣಕಾರಿ ಆಟವನ್ನು ಮುಂದುವರಿಸಬೇಕು ಎಂದು ತಿಲಕ್ ವರ್ಮಾ ಹೇಳಿದ್ದಾರೆ.

ಟೀಕೆಗಳನ್ನ ಎದುರಿಸಿದ್ದ ವೈಭವ್ ಸೂರ್ಯವಂಶಿ
ದಂಬುಲ್ಲಾದ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ 'ಎ' ವಿರುದ್ಧ ನಡೆದ ಲೀಗ್ ಹಂತದ ರೋಚಕ ಪಂದ್ಯವು ಟೈ ಆಗಿತ್ತು. ನಂತರ ನಡೆದ ಸೂಪರ್ ಓವರ್ನಲ್ಲಿ ಭಾರತ 'ಎ' ತಂಡ ಸೋಲನುಭವಿಸಿತು. ಪಂದ್ಯ ಮುಗಿದ ತಕ್ಷಣ ತೀವ್ರ ಒತ್ತಡದ ಕ್ಷಣಗಳಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ವಿಶೇನ್ ಹಾಲಂಬಾಗೆ ಅವರ ನಡುವೆ ಮೈದಾನದಲ್ಲೇ ತೀವ್ರ ವಾಗ್ವಾದ ಹಾಗೂ ತಳ್ಳಾಟ ನಡೆದಿತ್ತು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹಿರಿಯರ ಕ್ರಿಕೆಟ್ಗೆ ಈ ಬಾಲಕ ಇನ್ನೂ ಮಾನಸಿಕವಾಗಿ ಪಕ್ವಗೊಂಡಿಲ್ಲವೇ ಎಂಬ ಚರ್ಚೆಗಳು ಆರಂಭವಾಗಿದ್ದವು.
ನಾಯಕ ತಿಲಕ್ ವರ್ಮಾ ಹೇಳಿದ್ದೇನು?
ಇನ್ನೂ ಶ್ರೀಲಂಕಾ 'ಎ' ತಂಡದ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ತಿಲಕ್ ವರ್ಮಾ ಅವರು, ಯುವ ಆಟಗಾರರ ಬೆಳವಣಿಗೆಗೆ ಮುಕ್ತ ವಾತಾವರಣ ಮುಖ್ಯ ಎಂದು ಹೇಳಿದರು. 'ಅಂಡರ್-19 ಕ್ರಿಕೆಟ್ ಮತ್ತು ಐಪಿಎಲ್ ಮುಗಿಸಿ ನೇರವಾಗಿ ಹಿರಿಯರ ತಂಡವನ್ನು ಪ್ರತಿನಿಧಿಸುವುದು ಯಾವುದೇ ಆಟಗಾರನಿಗಾದರೂ ದೊಡ್ಡ ಸವಾಲಾಗಿರುತ್ತದೆ. ಆದರೆ ವೈಭವ್ ಅಸಾಧಾರಣ ಆಟಗಾರ. ಒಮ್ಮೆ ಅವರು ಲಯಕ್ಕೆ ಮರಳಿದರೆ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲರು. ಇಂತಹ ಯುವ ಆಟಗಾರರಿಗೆ ಸದ್ಯದ ಪರಿಸ್ಥಿತಿಯಲ್ಲಿ ತಂಡದ ಮ್ಯಾನೇಜ್ಮೆಂಟ್ನಿಂದ ಸಂಪೂರ್ಣ ಬೆಂಬಲ ಮತ್ತು ಸ್ವಾತಂತ್ರ್ಯದ ಅಗತ್ಯವಿದೆ,' ಎಂದು ಹೇಳಿದ್ದಾರೆ.
ವೈಭವ್ ಬೆನ್ನಿಗೆ ನಿಂತ ತಿಲಕ್ ವರ್ಮಾ
ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಶೈಲಿ ಬಗ್ಗೆ ಮಾತನಾಡಿದ ತಿಲಕ್ ವರ್ಮಾ, 'ನಾನು ಅವರಿಗೆ ಸರಳವಾದ ಸಂದೇಶ ನೀಡಿದ್ದೇನೆ. ಯಾವುದೇ ಒತ್ತಡವನ್ನು ತೆಗೆದುಕೊಳ್ಳದೆ, ನಿನ್ನ ಆಟವನ್ನು ಆನಂದಿಸು, ಬದಲಾಯಿಸಿಕೊಳ್ಳುವುದು ಬೇಡ. ನೀನು ಇಲ್ಲಿಯವರೆಗೆ ಸಾಧಿಸಿರುವುದೆಲ್ಲವೂ ನಿನ್ನ ಸಕಾರಾತ್ಮಕ ಆಟದ ಶೈಲಿಯಿಂದಲೇ ಬಂದಿದೆ. ಆದ್ದರಿಂದ ಅದನ್ನು ಬದಲಾಯಿಸಿಕೊಳ್ಳುವ ಯಾವುದೇ ಅಗತ್ಯವಿಲ್ಲ. ನಾಯಕನಾಗಿ ನಾನು ಮತ್ತು ಇಡೀ ಡ್ರೆಸ್ಸಿಂಗ್ ರೂಮ್ ಸದಾ ನಿನ್ನ ಬೆನ್ನಿಗೆ ಇರಲಿದ್ದೇವೆ.' ಎಂದು ಭರವಸೆ ನೀಡಿದ್ದಾರೆ
ಎಲ್ಲರ ಕಣ್ಣು ವೈಭವ್ ಆಟದತ್ತ
ಪ್ರಸಕ್ತ ಸರಣಿಯಲ್ಲಿ ಅಫ್ಘಾನಿಸ್ತಾನ 'ಎ' ವಿರುದ್ಧ 44 ರನ್ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ವೈಭವ್ ಅವರಿಗೆ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಿಲ್ಲ. ಆದರೆ ಭಾನುವಾರ ನಡೆಯಲಿರುವ ಶ್ರೀಲಂಕಾ 'ಎ' ವಿರುದ್ಧದ ಮಹತ್ವದ ಫೈನಲ್ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್ ಮೂಲಕವೇ ಟೀಕಾಕಾರರಿಗೆ ಉತ್ತರಿಸಲಿದ್ದಾರೆ ಎಂಬ ಬಲವಾದ ವಿಶ್ವಾಸವನ್ನು ನಾಯಕ ತಿಲಕ್ ವರ್ಮಾ ಅವರು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ವೈಭವ್ ಆಟ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಅವರು ಈ ವೇಳೆ ಯಾವ ರೀತಿ ಬ್ಯಾಟಿಂಗ್ ಪ್ರದರ್ಶನ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.












Click it and Unblock the Notifications