Leopard Spotted: ಬೆಂಗಳೂರಿನ ಜನತೆಗೆ ನಡುಕ ಹುಟ್ಟಿಸಿದ ಚಿರತೆ
ಬೆಂಗಳೂರು, ಜುಲೈ 10: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಹಲವಾರು ಬಾರಿ ಚಿರತೆ ಪ್ರತ್ಯಕ್ಷವಾಗಿರುವ ಘಟನೆಗಳು ನಡೆದಿವೆ. ಇದೀಗ ನಗರದ ಬ್ಯಾಡರಹಳ್ಳಿ ವ್ಯಾಪ್ತಿಯ ಸ್ಥಳೀಯರಿಗೆ ಮತ್ತೊಂದು ಚಿರತೆ ಭಯ ಹುಟ್ಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಚಿರತೆಗಳು ಪ್ರತ್ಯಕ್ಷ ಆಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಇದೀಗ ಸಿಲಿಕಾನ್ ಸಿಟಿಯ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಈ ಹಿನ್ನೆಲೆ ಇಲ್ಲಿನ ಸ್ಥಳೀಯರು ಜೀವವನ್ನು ಕೈಯಲ್ಲಿ ಹಿಡಿದು ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಬ್ಯಾಡರಹಳ್ಳಿಯ ಭಾರತ್ ನಗರದ ಜನವಸತಿ ಪ್ರದೇಶದಲ್ಲಿ ಗುರುವಾರ (ಜುಲೈ 09) ರಾತ್ರಿ ಹಾಗೂ ಮುಂಜಾನೆ ಚಿರತೆಯೊಂದು ಓಡಾಡಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಮೊದಲಿಗೆ ಚಿರತೆ ಸುಳಿವು ಸಿಕ್ಕಾಗ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಆ ಸಮಯದಲ್ಲಿ ಕೇವಲ ಸಿಡಿಮದ್ದುಗಳನ್ನು ಸಿಡಿಸಿ ಸ್ಥಳೀಯರಿಗೆ ಅಭಯ ನೀಡಿ ವಾಪಾಸ್ ಆಗಿದ್ದರು.
ಸಿಸಿಟಿವಿಯಲ್ಲಿ ಚಿರತೆ ಪ್ರತ್ಯಕ್ಷ ದೃಶ್ಯಗಳು ಸೆರೆ
ಅರಣ್ಯ ಅಧಿಕಾರಿಗಳು ಹೋದ ಬಳಿಕ ಚಿರತೆ ಮತ್ತೆ ಗುರುವಾರ ರಾತ್ರಿ ಸುಮಾರು 9 ಗಂಟೆ ಹಾಗೂ ಮುಂಜಾನೆ 4 ಗಂಟೆಯ ಸುಮಾರಿಗೆ ಅದೇ ಜಾಗದಲ್ಲಿ ಮತ್ತೆ ಅಡ್ಡಾಡಿದೆ. ಚಿರತೆಯು ರಸ್ತೆಯಲ್ಲಿ ಓಡಾಡಿರುವ ದೃಶ್ಯಗಳು ಅಲ್ಲಿನ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಈ ದೃಶ್ಯಗಳನ್ನ ಕಂಡ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಆತಂಕ ವ್ಯಕ್ತಪಡಿಸಿದ ಸ್ಥಳೀಯರು
'ಚಿರತೆ ಕಾಣಿಸಿಕೊಂಡಿರುವ ಭಾರತ್ ನಗರವು ಸಂಪೂರ್ಣವಾಗಿ ಜನವಸತಿ ಪ್ರದೇಶವಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ನಮಗೆ ಮನೆಯಿಂದ ಹೊರಬರಲು ಭಯವಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ವೃದ್ಧರನ್ನು ಹೊರಗೆ ಕಳುಹಿಸಲು ಆತಂಕವಾಗುತ್ತಿದೆ,' ಎಂದು ಅಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ ಬೆಳಗಿನ ವೇಳೆ ವಾಕಿಂಗ್ ಹೋಗುವವರು ಹಾಗೂ ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ವಾಪಸಾಗುವ ಸಾರ್ವಜನಿಕರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಪೋಷಕರು ತಮ್ಮ ಮಕ್ಕಳನ್ನು ಶಾಲೆ ಮತ್ತು ಆಟವಾಡಲು ಹೊರಗೆ ಕಳುಹಿಸಲು ಭಯಪಡುವಂತಹ ಪರಿಸ್ಥತಿ ನಿರ್ಮಾಣವಾಗಿದೆ.
ಚಿರತೆ ಅಡ್ಡಾಡುತ್ತಿರುವ ಸಿಸಿಟಿವಿ ದೃಶ್ಯಗಳು ಲಭ್ಯವಾದ ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆಯು ಚಿರತೆ ಸೆರೆಗೆ ಮುಂದಾಗಿದೆ. ಶುಕ್ರವಾರ (ಜುಲೈ 10) ಬೆಳಗ್ಗೆಯಿಂದಲೇ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜಂಟಿ ತಂಡಗಳು ಸ್ಥಳದಲ್ಲಿ ಬೃಹತ್ ಕಾರ್ಯಾಚರಣೆ ಆರಂಭಿಸಿವೆ. ಮೊದಲು ಚಿರತೆ ಪ್ರತ್ಯಕ್ಷವಾಗಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಿ ಕಾರ್ಯಾವರಣೆ ನಡೆಸಲಾಗುತ್ತಿದೆ.
ಅರಣ್ಯ ಇಲಾಖೆಯಿಂದ ಮಹತ್ವದ ಮನವಿ
ದಟ್ಟವಾಗಿ ಗಿಡ ಬೆಳೆದಿರುವಂತಹ ಭಾಗಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಿಡಲಾಗುತ್ತಿದೆ. ಒಂದು ವೇಳೆ ಕಾರ್ಯಾಚರಣೆಯ ವೇಳೆ ಚಿರತೆ ಪತ್ತೆ ಆಗದಿದ್ದರೆ ಅದು ಓಡಾಡುವ ಪ್ರಮುಖ ಮಾರ್ಗಗಳನ್ನು ಗುರುತಿಸಿ ಆ ಸ್ಥಳಗಳಲ್ಲಿ ಬೋನುಗಳನ್ನು ಇಟ್ಟು ಸೆರೆಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು ಅನಗತ್ಯವಾಗಿ ಮನೆಯಿಂದ ಹೊರಬರದೆ ಜಾಗರೂಕರಾಗಿರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications