ದೇವಸ್ಥಾನದಲ್ಲಿ ಕರ್ಣ ನಿಧಿ ರೊಮ್ಯಾನ್ಸ್, ಸುಮತಿ ಅಹಂಕಾರಕ್ಕೆ ಕರ್ಣ ತಿರುಗೇಟು!
ಕರ್ಣ ಸೀರಿಯಲ್ನ ಕರ್ಣ ಮತ್ತು ನಿಧಿ ಜೋಡಿ ದೇವಸ್ಥಾನಕ್ಕೆ ಬಂದಿದ್ದಾರೆ. ಅಲ್ಲಿ ನಿಧಿಯ ತಾಳಿಶಾಸ್ತ್ರಕ್ಕೆ ಸಿದ್ಧತೆ ನಡೀತಿದೆ. ಅದರ ನಡುವೆ ಮುದ್ದಾದ ಜೋಡಿಯ ರೊಮ್ಯಾನ್ಸ್ ಗಮನ ಸೆಳೀತಿದೆ. ಜೊತೆಗೆ ಸುಮತಿ ಆಡಿದ ಕೆಟ್ಟ ಮಾತಿಗೆ ಕರ್ಣನ ಉತ್ತರವೂ ಸಿಕ್ಕಿದೆ.
ಜೀ ಕನ್ನಡದಲ್ಲಿ ರಾತ್ರಿ ೮ಕ್ಕೆ ಪ್ರೈಮ್ ಟೈಮ್ನಲ್ಲಿ ಪ್ರಸಾರವಾಗೋ ʼಕರ್ಣʼ ಸೀರಿಯಲ್ ಟಿಆರ್ಪಿಯಲ್ಲೂ ಕಮಾಲ್ ಮಾಡ್ತಿದೆ. ಸಾಮಾನ್ಯವಾಗಿ ಸೀರಿಯಲ್ಗಳಲ್ಲೆಲ್ಲ ನಾಯಕಿಯೇ ಪ್ರಧಾನವಾಗಿದ್ದರೆ ಅಪರೂಪಕ್ಕೆ ನಾಯಕ ಪ್ರಧಾನ ಧಾರಾವಾಹಿಗಳೂ ಬಂದು ಸದ್ದು ಮಾಡುತ್ತವೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ʼರಾಮಾಚಾರಿʼ ಸಕ್ಸಸ್ ಆಗಿತ್ತು. ಇದೀಗ ʼಕರ್ಣʼ ಸೀರಿಯಲ್ಲೂ ಸಿಕ್ಕಾಪಟ್ಟೆ ಹೈಪ್ ಪಡ್ಕೊಳ್ತಿದೆ. ಈ ಸೀರಿಯಲ್ ಶುರುವಾದ ಟೈಮ್ನಿಂದಲೂ ಇದಕ್ಕೆ ಉತ್ತಮ ರೆಸ್ಪಾನ್ಸ್ ಹರಿದುಬರ್ತಿದೆ. ಇದರಲ್ಲಿ ಕರ್ಣ ಹೆರಿಗೆ ಮಾಡ್ಸೋ ಡಾಕ್ಟರ್. ಸಾಮಾನ್ಯವಾಗಿ ಸೀರಿಯಲ್ ಹೀರೋಗಳೆಲ್ಲ ದೊಡ್ಡ ಬ್ಯುಸಿನೆಸ್ಮೆನ್ಗಳಾಗಿರೋದು ರೂಢಿ. ಇದಕ್ಕೆ ಅಪವಾದದ ಹಾಗೆ ಈ ಕರ್ಣ ಇದ್ದಾನೆ.

ಕರ್ಣ ನಿಧಿ ಎಂಬ ಮುದ್ದಾದ ಜೋಡಿ
ಕರ್ಣ ಸೀರಿಯಲ್ನಲ್ಲಿ ಕರ್ಣ ಮೊದಲು ಮದುವೆಯಾದದ್ದು ಅಕ್ಕ ನಿತ್ಯಾಳನ್ನು. ತನ್ನ ಲವರ್ ಜೊತೆ ಮದುವೆಗೂ ಮುಂಚೆಯೇ ಕ್ಲೋಸ್ ಆಗಿದ್ದ ಈ ನಿತ್ಯಾ ಆತನನ್ನು ವಿವಾಹವಾಗುವ ಮೊದಲೇ ಗರ್ಭವತಿಯಾಗಿದ್ದಳು. ಈ ನಡುವೆ ಆ ಪ್ರೇಮಿ ಎಲ್ಲೋ ನಾಪತ್ತೆಯಾಗಿದ್ದ. ನಿತ್ಯಾಳ ಮಾನ ಉಳಿಸಲು ಕರ್ಣನೇ ಅವಳನ್ನು ಮೊದಲು ಮದುವೆಯಾಗಿದ್ದ. ಇನ್ನೊಂದೆಡೆ ತಂಗಿ ನಿಧಿ ಜೊತೆಗೆ ಕರ್ಣನಿಗೆ ಪ್ರೀತಿ. ಶುರುವಿಗೆ ತನ್ನ ಕಷ್ಟದ ಬಗ್ಗೆ ನೆನೆಸಿಕೊಂಡು ಇದನ್ನು ವಿರೋಧಿಸಿದರೂ ವಿಧಿಯೇ ಇವರಿಬ್ಬರನ್ನು ಸಮೀಪಕ್ಕೆ ತರುತ್ತೆ. ಏನೇನೆಲ್ಲ ಡ್ರಾಮಾಗಳಾಗಿ ಕೊನೆಗೂ ಕರ್ಣ ಮತ್ತು ನಿಧಿ ಹಸೆಮಣೆ ಏರೋ ಹಾಗಾಗಿತ್ತು. ಕರ್ಣ ಮತ್ತು ನಿಧಿ ಲವ್ಸ್ಟೋರಿ ನೋಡಿ ಆ ಮುದ್ದು ಜೋಡಿಯನ್ನು ಕಣ್ತುಂಬಿಸಿಕೊಂಡು ಎನ್ಜಾಯ್ ಮಾಡ್ತಿದ್ದ ಪ್ರೇಕ್ಷಕರಿಗೆ ಇದೊಂದು ಬಿಗ್ ರಿಲೀಫ್ ಆಗಿತ್ತು.
ದೇವಸ್ಥಾನದಲ್ಲಿ ರೊಮ್ಯಾನ್ಸ್
ಈ ಹಿಂದೆಯೂ ಕರ್ಣ ಮತ್ತು ನಿಧಿ ಈ ದೇವಸ್ಥಾನಕ್ಕೆ ಬಂದಿದ್ದರು. ಆಗ ನಿಧಿಗೆ ದೇವಸ್ಥಾನದ ಗಂಟೆ ಹೊಡೆಯುವ ಉತ್ಸಾಹ. ಆದರೆ ಆಕೆಯ ಎತ್ತರ ಕಡಿಮೆ ಇದ್ದ ಕಾರಣ ಗಂಟೆ ಎಟಕುತ್ತಿರಲಿಲ್ಲ. ಗಂಟೆ ಹೊಡೆಯಲು ಮೇಲೆ ಜಿಗಿಯುತ್ತಿದ್ದ ಅವಳನ್ನು ಕರ್ಣ ಅನಾಮತ್ತಾಗಿ ಎತ್ತಿ ಅವಳು ಗಂಟೆ ಬಾರಿಸುವ ಹಾಗೆ ಮಾಡಿದ್ದ. ಇದೀಗ ಈ ಜೋಡಿ ಮತ್ತೆ ಅದೇ ದೇವಸ್ಥಾನಕ್ಕೆ ಬಂದಿದೆ. ನಿಧಿ ಮತ್ತು ಕರ್ಣನಿಗೆ ಹಿಂದಿನ ಘಟನೆ ನೆನಪಾಗಿದೆ. ಆ ನೆನಪಲ್ಲಿ ನಿಧಿ ಮತ್ತೆ ಕರ್ಣನತ್ತ ನೋಡಿದ್ದಾಳೆ. ಕರ್ಣ ಅವಳ ಕಾಲೆಳೆದಿದ್ದಾನೆ. ಆಮೇಲೆ ಹಿಂದಿನಂತೆಯೇ ಅಥವಾ ಅದಕ್ಕಿಂತಲೂ ರೊಮ್ಯಾಂಟಿಕ್ ಆಗಿ ಎತ್ತಿ ಹಿಡಿದಿದ್ದಾನೆ. ನಿಧಿ ಗಂಟೆ ಬಾರಿಸಿದ್ದಾಳೆ.
ಮುದ್ದಾದ ಜೋಡಿಗೆ ವೀಕ್ಷಕರು ಫಿದಾ
ಕರ್ಣ ಮತ್ತು ನಿಧಿ ಜೋಡಿಯನ್ನ ಆರಂಭದಿಂದ ಮೆಚ್ಚಿಕೊಂಡು ಬಂದಿದ್ದ ವೀಕ್ಷಕರಿಗೆ ಈ ಜೋಡಿ ಸಣ್ಣ ಸಣ್ಣ ರೊಮ್ಯಾಂಟಿಕ್ ಕ್ಷಣಗಳು ಇಷ್ಟ ಆಗುತ್ತದೆ. ಇದೀಗ ಈ ಸೀನ್ಗೂ ಬಹಳ ಮಂದಿ ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಕರ್ಣ ನಿಧಿಯ ನಡುವೆ ಇಂಥಾ ಕ್ಯೂಟ್ ಸೀನ್ಗಳು ಮತ್ತೆ ಬರಲಿ ಅಂತ ಹಾರೈಸಿದ್ದಾರೆ.
ತಾಳಿ ಶಾಸ್ತ್ರಕ್ಕೆ ಸುಮತಿ ಕೊಂಕು
ಸದಾ ಕೊಂಕನ್ನೇ ನುಡಿಯುವ ಕರ್ಣನ ಚಿಕ್ಕಮ್ಮ ಸುಮತಿ ತಾಳಿ ಶಾಸ್ತ್ರಕ್ಕೂ ಬಂದಿದ್ದಾಳೆ. ಇಲ್ಲೂ ತನ್ನ ವರಸೆ ತೋರಿಸಿದ್ದಾಳೆ. ತಾಳಿ ಪೋಣಿಸಲು ಕರ್ಣನ ಬಂಗಾರಿ ಅಜ್ಜಿ ತನ್ನ ಗೆಳತಿ ಮತ್ತು ನಿಧಿ, ನಿತ್ಯಾರನ್ನು ಕಷ್ಟದಲ್ಲಿ ಸಾಕಿ ಬೆಳೆಸಿದ ಶಾಂತಿ ಅಜ್ಜಿಯ ಬಳಿ ಕೇಳುತ್ತಾಳೆ. ಆದರೆ ಇದಕ್ಕೆ ಶಾಂತಿ ಅಜ್ಜಿ ಒಪ್ಪೋದಿಲ್ಲ. ಕರ್ಣನ ತಾಯಿ ಮಾಲತಿ ಕೈಯಲ್ಲಿ ಮಾಡಿಸಲು ಹೇಳುತ್ತಾಳೆ. ಮಾಲತಿ, ಅಜ್ಜಿ ಎಲ್ಲ ಒತ್ತಾಯಿಸಿದಾಗ ಸುಮತಿ ಎಂದಿನಂತೆ ತನ್ನ ಕೊಂಕು ತೆಗೆಯುತ್ತಾಳೆ. ಗಂಡನನ್ನು ಕಳೆದುಕೊಂಡು, ಇದೀಗ ದೊಡ್ಡ ಮೊಮ್ಮಗಳಾದ ನಿತ್ಯಾಳ ಬದುಕೂ ದಿಕ್ಕೆಟ್ಟು ನಿಂತಿರುವಾಗ ಇವರ ಕೈಯಲ್ಲಿ ತಾಳಿ ಪೋಣಿಸಲು ಕೊಡುತ್ತೀರ ಅಂತ ಕೇಳಿ ಹರ್ಟ್ ಮಾಡಲು ಮುಂದಾಗುತ್ತಾರೆ.
ಕರ್ಣನ ತಿರುಗೇಟು
ಸದಾ ನ್ಯಾಯ, ಮಾನವೀಯತೆಯ ಪರವಾಗಿ ನಿಲ್ಲುವ ಕರ್ಣ ಇಲ್ಲಿಯೂ ಶಾಂತಿ ಅಜ್ಜಿಯ ಪರವಾಗಿ ನಿಂತಿದ್ದಾನೆ. ʼಬಂಗಾರ ಬೆಂಕಿಯಲ್ಲಿ ಕಾದು ಅಪರಂಜಿ ಆಗುವಂತೆ ಹೆಣ್ಣಿನ ಜೀವನವೂ ಕಷ್ಟಗಳ ಬೆಂಕಿಯಲ್ಲಿ ಸಿಕ್ಕಿ ಅಪ್ಪಟ ಚಿನ್ನವಾಗುತ್ತಿರುತ್ತದೆ. ತಂದೆ ತಾಯಿ ಕಳೆದುಕೊಂಡ ಇಬ್ಬರು ಹೆಣ್ಮಕ್ಕಳನ್ನು ಬಹಳ ಕಷ್ಟದಿಂದ ಸಾಕಿ ದೊಡ್ಡವರನ್ನಾಗಿ ಮಾಡಿರುವ ಈ ಮಹಾತಾಯಿ ತಾಯಿ ದೇವರಿಗಿಂತ ದೊಡ್ಡವಳಾಗುತ್ತಾಳೆʼ ಎಂದು ಸ್ಟ್ರಾಂಗ್ ಡೈಲಾಗ್ ಹೊಡೆದು ಸುಮತಿಯ ಬಾಯಿ ಮುಚ್ಚಿಸುತ್ತಾನೆ. ಈ ತಾಳಿ ಪೋಣಿಸಲು ಅವರಿಗಿಂತ ಒಳ್ಳೆಯವರು ಈ ಜಗತ್ತಲ್ಲೇ ಮತ್ಯಾರೂ ಸಿಗುವುದಿಲ್ಲ ಎಂದು ಆಕೆಯ ಪರವಾಗಿ ಗಟ್ಟಿ ದನಿ ಎತ್ತುತ್ತಾನೆ. ಇದು ವೀಕ್ಷಕರೆಲ್ಲರ ಮೆಚ್ಚುಗೆ ಪಡೆದಿದೆ.
(ಬರಹ: ಭವಾನಿ ಭಟ್)














Click it and Unblock the Notifications