Bengaluru Alert: ಇವತ್ತಿಂದ ಎತ್ಕೊಂಡು ಹೋಗ್ತಾರೆ! ಎಲ್ಲಿ ಆಯಿತೋ ಅಲ್ಲಿ ವೆಹಿಕಲ್ ನಿಲ್ಲಿಸಬೇಡಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ತಿಂಗಳು 30 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಹಳೇಯ ವಾಹನಗಳು ಎಲ್ಲೆಂದರಲ್ಲಿ ಕಾಣುತ್ತಿವೆ. ನಗರದ ಸಂಚಾರ ದಟ್ಟಣೆ ಪರಿಹಾರಕ್ಕೆ ಕ್ರಮ ಕೈಗೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಇಂದಿನಿಂದ (ಜುಲೈ 10) ಇಂತಹ ಅನಾಥ ವಾಹನಗಳ ತೆರವಿಗೆ, ಹರಾಜಿಗೆ ಮುಂದಾಗಿದೆ. ನೀವು ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ತೆರಳುವವರಿದ್ದರೆ ಇಂದಿನಿಂದಲೇ ಆ ತಪ್ಪು ಮಾಡಬೇಡಿ..
ಇಂದು ಶುಕ್ರವಾರ ಜಿಬಿಎ ಸಚಿವ ಕೃಷ್ಣ ಬೈರೇಗೌಡ ಅವರು ನಗರದ ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ ಬಳಿ ಅನಾಥ ವಾಹನಗಳ ತೆರವು ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಮೂಲಕ ಐದು ನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ವಿವಿಧ ನಗರ ಪಾಲಿಕೆಗಳಲ್ಲಿ ಕಾಯ್ದೆ 2024, ಸೆಕ್ಷನ್ 324ರ ಅನ್ವಯ ಜುಲೈ 10 ರಿಂದ ಅನಾಥ ವಾಹನಗಳ ತೆರವು ಕಾರ್ಯವನ್ನು ಆರಂಭಿಸಲಾಗಿದೆ. ಈ ಮೂಲಕ ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳು ಅನಾಥವಾಗಿ ನಿಲ್ಲಿಸಿದ್ದರಿಂದೂ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸುಗಮ ಸಂಚಾರದ ದೃಷ್ಟಿಯಿಂದ ಜುಲೈ 10ರಿಂದ ಅನಾಥ, ರಸ್ತೆ ಬದಿ ನಿಲ್ಲಿಸಿರುವ ವಾಹನಗಳ ತೆರುವ ಹಾಗೂ ಹರಾಜು ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಳಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಪಾಲಿಕೆ, ಟ್ರಾಫಿಕ್ ಪೊಲೀಸರಿಂದ ಕಾರ್ಯಾಚರಣೆ
ಸಮಸ್ತ ಸಾರ್ವಜನಿಕರ ಗಮನಕ್ಕೆ ತರುವುದೇನೆಂದರೆ ಇಂದಿನಿಂದ ಅನ್ವಯವಾಗುವಂತೆ, ರಸ್ತೆಗಳು, ತೆರೆದ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ದಿನಗಳಿಂದ ಅನಾಥವಾಗಿ ಬಿಡಲಾದ ವಾಹನಗಳನ್ನು ಗುರುತಿಸಿ 5 ನಗರ ಪಾಲಿಕೆಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಅವುಗಳ ವಿರುದ್ಧ ಜಂಟಿ ಕಾರ್ಯಾಚರಣೆಯ ಮಾಡಲಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತೆರವು-ಹರಾಜು ಪ್ರಕ್ರಿಯೆ ಹೇಗೆ ನಡೆಯುತ್ತೆ?
* ನೋಟಿಸ್ ಅವಧಿ: ಗುರುತಿಸಲಾದ ಅನಾಥ ವಾಹನಗಳಿಗೆ 7 ದಿನಗಳ ಕಾಲಾವಕಾಶ ನೀಡಿ ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅಂಟಿಸಲಾಗುತ್ತದೆ. ನೋಟಿಸ್ ಅಂಟಿಸಿದ ವಾಹನಗಳ ಚಕ್ರಕ್ಕೆ ವೀಲ್ ಕ್ಲಾಂಪ್ ಸಹ ಅಳವಡಿಸಲಾಗುತ್ತದೆ.
* ವಾಹನ ಜಪ್ತಿ(Towing): ನೋಟಿಸ್ ನೀಡಿದ 7 ದಿನಗಳ ಒಳಗಾಗಿ ವಾಹನಗಳ ಮಾಲೀಕರು ವಾಹನಗಳನ್ನು ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಟೋಯಿಂಗ್ ಮೂಲಕ ಜಪ್ತಿ ಮಾಡಲಾಗುವುದು.
* ಬಹಿರಂಗ ಹರಾಜು: ಜಪ್ತಿ ಮಾಡಲಾದ ಎಲ್ಲಾ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಲಾಗುವುದು.
ಸಾರ್ವಜನಿಕರು ನೀವು ರಸ್ತೆಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಯಾವುದೇ ವಾಹನಗಳನ್ನು ಬಿಟ್ಟಿದ್ದರೆ, ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ, ಸದರಿ ವಾಹನಗಳನ್ನು ನಿಮ್ಮ ಸ್ವಂತ ಜಾಗಕ್ಕೆ ಸ್ಥಳಾಂತರಿಸಿಕೊಳ್ಳಬೇಕು. ಇಲ್ಲವಾದರೆ ಆ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡಿದೆ.













Click it and Unblock the Notifications