ದೇಹದ ಆ ಭಾಗಕ್ಕೆ ಸಾಕ್ಷಾತ್ ಲಕ್ಷ್ಮಿಯ ಹೋಲಿಕೆ: ಆರ್ಯವರ್ಧನ್ ಗುರೂಜಿ ವಿರುದ್ಧ ದಾಖಲಾಯ್ತು ಕೇಸ್
ಬಿಗ್ಬಾಸ್ ಖ್ಯಾತಿಯ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ತಮ್ಮ ಮಾತುಗಳಿಂದಲೇ ಹೆಚ್ಚು ವಿವಾದಕ್ಕೆ ಸಿಲುಕುತ್ತಾರೆ. ಸದ್ಯ ಲಕ್ಷ್ಮಿದೇವರ ವಿಚಾರ ಮಾತನಾಡುತ್ತಾ ಮಹಿಳೆಯರ ಘನತೆಗೆ ಕುಂದು ತರುವ ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆರ್ಯವರ್ಧನ್ ಗುರೂಜಿ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಗುರೂಜಿಗೆ ಸದ್ಯ ಬಂಧನದ ಭೀತಿ ಎದುರಾಗಿದೆ.
ದೂರಿನಲ್ಲಿ ಏನಿದೆ?
ಖಾಸಗಿ ವಾಹಿನಿಯೊಂದರಲ್ಲಿ ಆರ್ಯವರ್ಧನ್ ಗುರೂಜಿ ಅವರು ಮಾತನಾಡುತ್ತಾ, "ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ತಿ*ದ ಭಾಗದಲ್ಲಿ ನೆಲೆಸಿದ್ದಾಳೆ, ಅದನ್ನು ಪೂಜಿಸಬೇಕು" ಎಂಬರ್ಥದಲ್ಲಿ ಅಶ್ಲೀಲವಾಗಿ ಹಾಗೂ ಕೀಳುಮಟ್ಟದ ಶಬ್ದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಗೋವು ರಕ್ಷಕರ ಸೇನೆಯ ಅಧ್ಯಕ್ಷ ಎಸ್.ಜಿ. ಸುಮನ್ಕುಮಾರ್ ಅವರು ಶಂಕರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುರೂಜಿ ಅವರ ಈ ಹೇಳಿಕೆ ಕೇವಲ ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ ತಂದಿಲ್ಲ, ಬದಲಿಗೆ ಕೋಟ್ಯಂತರ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಅಣಕಿಸಿದಂತಿದೆ. ಸಮಾಜದಲ್ಲಿ ಶಾಂತಿ ಕದಡುವ ಮತ್ತು ಧಾರ್ಮಿಕ ವೈಮನಸ್ಸು ಸೃಷ್ಟಿಸುವ ಉದ್ದೇಶದಿಂದಲೇ ಇಂತಹ ವಿವಾದಾತ್ಮಕ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಅವರ ವಿಡಿಯೋ ಪರಿಶೀಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಸುಮನ್ಕುಮಾರ್ ನೀಡಿದ ದೂರನ್ನು ಸ್ವೀಕರಿಸಿದ ಶಂಕರಪುರ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ವಿವಾದಿತ ವಿಡಿಯೋ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಬಳಿಕ, ಕಾನೂನು ತಜ್ಞರಿಂದ ಸೂಕ್ತ ಸಲಹೆ ಹಾಗೂ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಲಭ್ಯವಿರುವ ಸಾಕ್ಷ್ಯಗಳು ಮತ್ತು ಕಾನೂನು ತಜ್ಞರ ಮಾಹಿತಿ ಆಧರಿಸಿ ಪೊಲೀಸರು ಆರ್ಯವರ್ಧನ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರ್ಯವರ್ಧನ್ ಗುರೂಜಿ ಅವರ ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ತನಿಖೆಯ ಮುಂದಿನ ಹಂತವಾಗಿ ಗುರೂಜಿಗೆ ನೋಟಿಸ್ ನೀಡುವುದು ಅಥವಾ ನೇರ ಬಂಧನಕ್ಕೆ ತಜ್ಞರ ತಂಡ ರಚಿಸುವ ಸಾಧ್ಯತೆ ಇದೆ.
ಟ್ರೆಂಡ್ ಆಗಿರುವ ಗುರೂಜಿ ಡೈಲಾಗ್
ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್ ಎನ್ನುತ್ತಾ ಆರ್ಯವರ್ಧನ್ ಗುರೂಜಿ ಕಮಾಲ್ ಮಾಡಿದ್ದರು. ಇದೇ ಕಾರಣಕ್ಕೆ ಅವರು ಬಿಗ್ಬಾಸ್ ಮನೆಗೆ ಸ್ಪರ್ಧಿಯಾಗಿಯೂ ಎಂಟ್ರಿ ಕೊಟ್ಟಿದ್ದರು. ಸದಾ ತಮ್ಮ ಜ್ಯೋತಿಷ್ಯ ಭವಿಷ್ಯವಾಣಿಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಆರ್ಯವರ್ಧನ್ ಅವರಿಗೆ ಈಗ ಮಹಾಲಕ್ಷ್ಮಿಯ ಬಗ್ಗೆ ನೀಡಿರುವ ಹೇಳಿಕೆ ಸಂಕಷ್ಟ ತಂದಿಟ್ಟಿದೆ. ಇನ್ನು ಇವರ ಈ ಡೈಲಾಗ್ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ರೀಲ್ ಕೂಡ ಮಾಡುತ್ತಿದ್ದಾರೆ.













Click it and Unblock the Notifications