ಮನೆಗೆ ಹೋಗುವ ದಾರಿಯಲ್ಲೇ ಬಂತು ಲೇಆಫ್ ಇಮೇಲ್: ಯುವಕನ ಕಣ್ಣೀರಿನ ಕಥೆ ವೈರಲ್
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಎಂಬುದು ಎಷ್ಟು ಅನಿಶ್ಚಿತ ಎಂಬುದಕ್ಕೆ ಈ ಘಟನೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ತಂದೆ-ತಾಯಿಯನ್ನು ಭೇಟಿಯಾಗಲು ಉತ್ಸಾಹದಿಂದ ಊರಿಗೆ ಮರಳುತ್ತಿದ್ದ ಯುವಕನೊಬ್ಬ, ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ತನ್ನ ಉದ್ಯೋಗ ಕಳೆದುಕೊಂಡಿರುವ ಘಟನೆಯೊಂದು ಈಗ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಸಹಪ್ರಯಾಣಿಕರೊಬ್ಬರು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಪೋಸ್ಟ್ ಓದಿ ಭಾವುಕರಾಗಿದ್ದು, ಕಾರ್ಪೊರೇಟ್ ಬದುಕಿನ ಅನಿಶ್ಚಿತತೆಯ ಬಗ್ಗೆ ವ್ಯಾಪಕ ಚರ್ಚೆ ನಡೆಸುತ್ತಿದ್ದಾರೆ.
ಪಲ್ಲಬಿ ಮಲ್ಲಿಕ್ ಎಂಬುವವರು ಲಿಂಕ್ಡ್ಇನ್ನಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದಾರೆ. ಕಳೆದ ಶುಕ್ರವಾರ ರೈಲಿನಲ್ಲಿ ಪ್ರಯಾಣಿಸುವಾಗ ಈ ಯುವಕನ ಪರಿಚಯವಾಯಿತು ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಹೊಸ ಮನೆ, ಇಎಂಐ, ಪೋಷಕರ ಪ್ರವಾಸ: ಕಮರಿದ ಕನಸುಗಳು
ಪ್ರಯಾಣದ ಆರಂಭದಲ್ಲಿ ಆ ಯುವಕ ಬಹಳ ಉತ್ಸಾಹದಲ್ಲಿದ್ದ. ಆತನ ಕಣ್ಣುಗಳಲ್ಲಿ ಭವಿಷ್ಯದ ಬಗ್ಗೆ ನೂರಾರು ಕನಸುಗಳಿದ್ದವು. "ನಾವು ಸುಮಾರು ಎರಡು ಗಂಟೆಗಳ ಕಾಲ ಜೀವನದ ಬಗ್ಗೆ ಮಾತನಾಡಿದೆವು. ಅವನು ತಾನು ಹೊಸದಾಗಿ ಖರೀದಿಸಿದ ಮನೆಯ ಬಗ್ಗೆ, ಅದಕ್ಕಾಗಿ ಕಟ್ಟುತ್ತಿರುವ ದೊಡ್ಡ ಮೊತ್ತದ ಇಎಂಐ ಬಗ್ಗೆ ಹೇಳಿಕೊಂಡ. ಅಷ್ಟೇ ಅಲ್ಲದೆ, ಈ ವರ್ಷ ತನ್ನ ವಯಸ್ಸಾದ ತಂದೆ-ತಾಯಿಯನ್ನು 'ಚಾರ್ ಧಾಮ್ ಯಾತ್ರೆ'ಗೆ ಕರೆದುಕೊಂಡು ಹೋಗುವ ತನ್ನ ಬಹುದೊಡ್ಡ ಆಸೆಯ ಬಗ್ಗೆಯೂ ಆತ ಬಹಳ ಸಂತೋಷದಿಂದ ಹಂಚಿಕೊಂಡಿದ್ದ," ಎಂದು ಪಲ್ಲಬಿ ವಿವರಿಸಿದ್ದಾರೆ. ಅವನಿಗೆ ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿದೆ, ಜೀವನ ಒಂದು ಹಾದಿಗೆ ಬಂದಿದೆ ಎಂಬ ನೆಮ್ಮದಿ ಇತ್ತು.
ರೈಲಿನಲ್ಲಿ ಲೇಆಫ್ ಇಮೇಲ್
ಆದರೆ, ಈ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಯುವಕನ ಮೊಬೈಲ್ ಫೋನ್ಗೆ ಒಂದು ನೋಟಿಫಿಕೇಶನ್ ಬಂತು. "ಅವನು ತನ್ನ ಫೋನ್ ತೆಗೆದು ಆ ಇಮೇಲ್ ನೋಡಿದ ತಕ್ಷಣ, ಅವನ ಮುಖ ಸಂಪೂರ್ಣವಾಗಿ ಕಳೆಗುಂದಿತು. ಏನಾಯಿತು, ಎಲ್ಲವೂ ಸರಿಯಾಗಿದೆಯೇ? ಎಂದು ನಾನು ಕೇಳಿದೆ. ಅದಕ್ಕವನು ನನ್ನ ಕಡೆ ನೋಡಿ, 'ನನ್ನ ಕೆಲಸ ಹೋಯಿತು ಎಂದು ಅನಿಸುತ್ತಿದೆ' ಎಂದು ಗದ್ಗದಿತನಾಗಿ ನುಡಿದ," ಎಂದು ಪಲ್ಲಬಿ ಬರೆದುಕೊಂಡಿದ್ದಾರೆ. ಆ ಒಂದು ಇಮೇಲ್ ಅವನ ಭವಿಷ್ಯದ ಕನಸುಗಳನ್ನೆಲ್ಲಾ ಕ್ಷಣಾರ್ಧದಲ್ಲಿ ನುಚ್ಚುನೂರು ಮಾಡಿತ್ತು.
ಕ್ಷಣದ ಹಿಂದಷ್ಟೇ ತನ್ನ ತಂದೆ-ತಾಯಿಯನ್ನು ಭೇಟಿಯಾಗಲು ತುದಿಗಾಲಿನಲ್ಲಿ ನಿಂತಿದ್ದ ಆತ, ಈಗ ಅವರನ್ನು ಎದುರಿಸುವುದು ಹೇಗೆ ಎಂಬ ದೊಡ್ಡ ಚಿಂತೆಗೆ ಜಾರಿದ್ದ. "ಹೊಸ ಮನೆ ಹಾಗೇ ಇದೆ, ಕಟ್ಟಬೇಕಾದ ಇಎಂಐ ಹಾಗೇ ಇದೆ, ಮನೆಯ ಜವಾಬ್ದಾರಿಗಳೆಲ್ಲವೂ ಹಾಗೇ ಇವೆ. ಆದರೆ, ಇವೆಲ್ಲವನ್ನೂ ನಿಭಾಯಿಸಲು ಆಧಾರವಾಗಿದ್ದ ಉದ್ಯೋಗ ಮಾತ್ರ ಈಗಿಲ್ಲ. ತಾನು ಯಾರನ್ನು ಭೇಟಿಯಾಗಲು ಅತಿ ಹೆಚ್ಚು ಇಷ್ಟಪಟ್ಟಿದ್ದನೋ, ಈಗ ಅವರನ್ನೇ ಎದುರಿಸಲು ಆತ ಅತಿ ಹೆಚ್ಚು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು," ಎಂದು ಅವರು ಮಾರ್ಮಿಕವಾಗಿ ಬರೆದಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಉದ್ಯೋಗ ಕಡಿತದಿಂದ ಆಗುವ ಮಾನಸಿಕ ಹಿಂಸೆಯ ಬಗ್ಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಒಬ್ಬ ಬಳಕೆದಾರರು, "ಕೇವಲ ಒಂದು ಇಮೇಲ್ ನಿಮ್ಮ ಸಂತೋಷದ ಪ್ರಯಾಣವನ್ನು ಜೀವನದ ಅತ್ಯಂತ ಸುದೀರ್ಘ ಹಾಗೂ ನೋವಿನ ಪ್ರಯಾಣವನ್ನಾಗಿ ಪರಿವರ್ತಿಸಬಲ್ಲದು," ಎಂದು ಬರೆದಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, "ಜವಾಬ್ದಾರಿಗಳು ದೀರ್ಘಕಾಲದವರೆಗೆ ಇರುತ್ತವೆ, ಆದರೆ ಆದಾಯವು ಅನಿರೀಕ್ಷಿತವಾಗಿ ನಿಂತುಹೋಗಬಹುದು ಎಂಬುದಕ್ಕೆ ಇದೊಂದು ನೋವಿನ ನೆನಪು. ಸಮಸ್ಯೆ ಎದುರಾದಾಗ ಆರ್ಥಿಕ ಭದ್ರತೆ ಸಾಧ್ಯವಿಲ್ಲ. ಮುಂಚಿತವಾಗಿಯೇ ಸರಿಯಾದ ಯೋಜನೆ ಮತ್ತು ತುರ್ತು ನಿಧಿಯನ್ನು ಕಾಯ್ದಿರಿಸಿಕೊಳ್ಳುವ ಮೂಲಕ ಮಾತ್ರ ಆರ್ಥಿಕ ಭದ್ರತೆ ಪಡೆಯಬಹುದು," ಎಂದು ಸಲಹೆ ನೀಡಿದ್ದಾರೆ. ಕಷ್ಟದ ಹಂತಗಳು ಜೀವನದ ಒಂದು ಭಾಗವಷ್ಟೇ, ಆ ಯುವಕ ಶೀಘ್ರದಲ್ಲೇ ಮತ್ತೊಂದು ಉತ್ತಮ ಉದ್ಯೋಗವನ್ನು ಕಂಡುಕೊಂಡು ತನ್ನ ಕಾಲ ಮೇಲೆ ತಾನು ನಿಲ್ಲುತ್ತಾನೆ ಎಂದು ಹಲವರು ಆಶಿಸಿದ್ದಾರೆ.














Click it and Unblock the Notifications