ಲಂಚ ಪಡೆದು ಅಡ್ಡ ಮತದಾನವಾಗಿದೆ, ಯಾವ ನಂಬರ್ಗೆ ಕರೆ ಮಾಡಿ ಕೇಳಲಿ: ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ಲೇವಡಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ಪ್ರಕ್ರಿಯೆಯು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಲ್ಲಿ ಯಾವುದೇ ಬಿರುಕು ಮೂಡಿಸುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಮೈತ್ರಿಕೂಟದ ನಡುವೆ ಗೊಂದಲ ಸೃಷ್ಟಿಸಲು ನಡೆಸುತ್ತಿರುವ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದಿದ್ದಾರೆ. ಇದರೊಂದಿಗೆ, ಚುನಾವಣೆಯಲ್ಲಿ ನಡೆದಿರುವ ಭಾರಿ ಹಣಕಾಸಿನ ಆಮಿಷಗಳು ಹಾಗೂ ಭ್ರಷ್ಟಾಚಾರದ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿ ಘೋಷಣೆಗಳನ್ನು ಲೇವಡಿ ಮಾಡಿದ ಕುಮಾರಸ್ವಾಮಿ, "ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಸ್ವಂತ ಕಿಸೆಗೆ ₹50 ಕೋಟಿ ನೀಡುವುದಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ₹100 ಕೋಟಿ ಅನುದಾನ ಕೊಡುವುದಾಗಿ ಶಾಸಕರಿಗೆ ಆಮಿಷ ಒಡ್ಡಲಾಗಿತ್ತು. ಈ ಚುನಾವಣೆಯಲ್ಲಿ ಕೋಟಿ ಕೋಟಿ ರೂಪಾಯಿ ಕೈಬದಲಾವಣೆಯಾಗಿದೆ" ಎಂದು ನೇರ ಆರೋಪ ಮಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು. ಯಾರಾದರೂ ಹತ್ತು ರೂಪಾಯಿ ಕೇಳಿದರೆ ಈ ನಂಬರ್ಗೆ ಕಾಲ್ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಚುನಾವಣೆಯಲ್ಲಿ ಕೋಟಿ ಕೋಟಿ ಕೈ ಬದಲಾಗಿದೆ. ಇಲ್ಲಿ ಯಾರಿಗೆ ದೂರು ಕೊಡಬೇಕು? ಇಲ್ಲಿ ಹಣ ಕೊಟ್ಟವರನ್ನು, ಹಣ ಪಡೆದುಕೊಂಡವರನ್ನು ಈ ನಂಬರ್ನಿಂದ ಹೊರಗೆ ಇಟ್ಟಿದ್ದಾರೆಯೇ? ಅದಕ್ಕೆ ಪ್ರತ್ಯೇಕ ನಿಯಮ ಎಂದರೂ ಮಾಡಿದ್ದಾರಾ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ಮೈತ್ರಿ ಗಟ್ಟಿಯಾಗಿದೆ
ಪರಿಷತ್ ಚುನಾವಣೆಯ ಫಲಿತಾಂಶವು ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂದು ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮುನ್ನ ಬಿಜೆಪಿ ರಾಷ್ಟ್ರೀಯ ನಾಯಕರಾದ ನಿತಿನ್ ನಬೀನ್, ರಾಜ್ಯ ಅಧ್ಯಕ್ಷ ಬಿ.ವೈ. ವಿಜೇಯಂದ್ರ ಹಾಗೂ ಆರ್. ಅಶೋಕ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಎಲ್ಲರ ಒಪ್ಪಿಗೆಯ ಮೇರೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಹೀಗಾಗಿ ಮೈತ್ರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. 2028ರ ಚುನಾವಣೆಯೇ ಗುರಿ: ಈ ಚುನಾವಣೆ ಮುಂದಿನ ವಿಧಾನಸಭೆಗೆ ದಿಕ್ಸೂಚಿಯಲ್ಲ. 2017ರ ರಾಜ್ಯಸಭೆ ಚುನಾವಣೆಯಲ್ಲೂ ಜೆಡಿಎಸ್ನ ಶಾಸಕರು ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಸೇರಿದ್ದರು. ಆದರೆ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಪಕ್ಷಾಂತರಿ ಶಾಸಕರಿಬ್ಬರೂ ಸೋತು ಸುಣ್ಣವಾದರು. ನಮ್ಮ ಗುರಿ 2028ರ ವಿಧಾನಸಭಾ ಚುನಾವಣೆ ಹಾಗೂ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ಆಗಿದೆ ಎಂದು ಹೇಳಿದರು.
ಅಡ್ಡ ಮತದಾನದ ಹಿಂದಿನ ಆಂತರಿಕ ಕಾರಣಗಳನ್ನು ಕೊಟ್ಟ ಅವರು, ಶಾಸಕರ ಗಟ್ಟಿತನವನ್ನು ಪರೀಕ್ಷಿಸಲು ಈ ರಿಸ್ಕ್ ತೆಗೆದುಕೊಳ್ಳಲಾಗಿತ್ತು ಎಂದರು. ಕಳೆದ ಮೂರು ವರ್ಷಗಳಿಂದ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಮೂರೂ ಪಕ್ಷಗಳ (ಬಿಜೆಪಿ, ಕಾಂಗ್ರೆಸ್, ಜೆಡಿಎಸ್) ಶಾಸಕರು ಅಸಮಾಧಾನ ಹೊಂದಿದ್ದರು. ಇದು ಸಹ ಚುನಾವಣೆಯ ಮೇಲೆ ಪರಿಣಾಮ ಬೀರಿದೆ. ಶಾಸಕರು ಅನುದಾನಕ್ಕಾಗಿ ಚಂಚಲರಾಗಿದ್ದಾರೆ. ಗೆಲುವಿಗಿಂತ ಹೆಚ್ಚಾಗಿ ಪಕ್ಷದ ಅಸ್ತಿತ್ವ ಮತ್ತು ಶಾಸಕರು ಎಷ್ಟು ದೃಢವಾಗಿದ್ದಾರೆ ಎಂಬುದನ್ನು ಪರೀಕ್ಷಿಸಲು ಅಭ್ಯರ್ಥಿಯನ್ನು ನಿಲ್ಲಿಸಲಾಯಿತು ಎಂದರು.
ಶಾಸಕರ ಸಭೆಯಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ 17 ಶಾಸಕರು ಭಾಗವಹಿಸಿದ್ದರು. ಯಾರಿಗೆ ಬೇರೆ ಕಡೆ ಅನುಕೂಲವಿದೆಯೋ ಅವರು ಧೈರ್ಯವಾಗಿ ಹೇಳಿ ಹೋಗಬಹುದು, ಆದರೆ ಬೆನ್ನಿಗೆ ಇರಿಯಬೇಡಿ ಎಂದು ಮುಕ್ತವಾಗಿ ತಿಳಿಸಿದ್ದೇನೆ. ಅಡ್ಡ ಮತದಾನ ಮಾಡಿದವರ ಪತ್ತೆಗೆ ಬಿಜೆಪಿ ಈಗಾಗಲೇ ಸಿ.ಟಿ. ರವಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ನಾನು ದೆಹಲಿಗೆ ಹೋದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪೂರ್ಣ ಮಾಹಿತಿ ನೀಡಲಿದ್ದೇನೆ ಹಾಗೂ 2028ರ ಟಿಕೆಟ್ ಹಂಚಿಕೆ ವೇಳೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಿಡದಿ ಟೌನ್ಶಿಪ್ ಬಗ್ಗೆ ಪ್ರತ್ಯೇಕವಾಗಿ ಮಾತಾಡ್ತೇನೆ
ಬಿಡದಿ ಟೌನ್ಶಿಪ್ ಯೋಜನೆಯ ಕುರಿತು ವಿರೋಧಿಗಳ ಟೀಕೆಗೆ ಉತ್ತರಿಸಿದ ಅವರು, ರೈತರ ಹಿತರಕ್ಷಣೆಗೆ ಬದ್ಧವಾಗಿರುವುದಾಗಿ ತಿಳಿಸಿದರು. ಐದು ಟೌನ್ಶಿಪ್ಗಳ ಕುರಿತು ನನ್ನ ಮುಖ್ಯಮಂತ್ರಿ ಅವಧಿಯಲ್ಲೇ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ರೈತರ ಒಂದಿಂಚೂ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ನಾನು ಅಂದೇ ಸ್ಪಷ್ಟಪಡಿಸಿದ್ದು, ಅದು ಸದನದ ದಾಖಲೆಯಲ್ಲಿದೆ. ಈ ಕುರಿತು ಶೀಘ್ರದಲ್ಲೇ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಸತ್ಯಾಂಶ ಬಿಚ್ಚಿಡುತ್ತೇನೆ. ಭೂ ಮಾಲೀಕರಿಗೆ ರಾಜಕಾರಣಿಗಳು ಪರಿಹಾರದ ಚೆಕ್ ನೀಡುತ್ತಿರುವುದನ್ನು ಟೀಕಿಸಿದ ಅವರು, ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ರೈತರಿಗೆ ₹2.30 ಕೋಟಿಯ ಚೆಕ್ ನೀಡಿ ಆಸೆ ಹುಟ್ಟಿಸುತ್ತಿದ್ದಾರೆ. ಆದರೆ ಆ ಹಣವನ್ನು ಬ್ಯಾಂಕಿನಲ್ಲಿಟ್ಟರೆ ಬರುವ ಬಡ್ಡಿಗಿಂತ, ಜಮೀನನ್ನು ಹಾಗೇ ಉಳಿಸಿಕೊಂಡರೆ ಭವಿಷ್ಯದಲ್ಲಿ ಅದರ ಮೌಲ್ಯ ₹20 ಕೋಟಿಗೂ ಅಧಿಕವಾಗುತ್ತದೆ ಎಂದು ರೈತರಿಗೆ ಕಿವಿಮಾತು ಹೇಳಿದರು.













Click it and Unblock the Notifications