ಕೇರಳದಲ್ಲಿ ಗರ್ಭಿಣಿ ಆನೆ ಸಾವು; ಪ್ರಾಥಮಿಕ ತನಿಖಾ ವರದಿ ಬಹಿರಂಗ
ತಿರುವನಂತಪುರಂ, ಜೂನ್ 08 : ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಕೇರಳದ ಗರ್ಭಿಣಿ ಆನೆ ಸಾವಿನ ಪ್ರಕರಣದ ಪ್ರಾಥಮಿಕ ತನಿಖಾ ವರದಿ ಬಂದಿದೆ. ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡು ಪೊಲೀಸರು, ಅರಣ್ಯ ಇಲಾಖೆ ಜಂಟಿಯಾಗಿ ತನಿಖೆ ಕೈಗೊಂಡಿವೆ.
ಕೇರದಳ ಪರಿಸರ ಇಲಾಖೆ ಸೋಮವಾರ ಆನೆ ಸಾವಿನ ಕುರಿತು ಮಾಹಿತಿ ನೀಡಿದೆ. "ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಆನೆ ಆಕಸ್ಮಿಕವಾಗಿ ಸ್ಫೋಟಕ ತುಂಬಿದ ಹಣ್ಣನ್ನು ತಿಂದಿದೆ ಎಂದು ಅಂದಾಜಿಸಲಾಗಿದೆ. ತನಿಖೆ ಇನ್ನೂ ನಡೆಯುತ್ತಿದೆ" ಎಂದು ಹೇಳಿದೆ.
ಗರ್ಭಿಣಿ ಆನೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ವ್ಯಕ್ತಿ ಆನೆ ಮೃತಪಟ್ಟ ಪ್ರದೇಶದ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ಎಂಬ ಆರೋಪಗಳಿವೆ.
15 ವರ್ಷದ ಆನೆ ಸ್ಫೋಟಕ ತುಂಬಿದ್ದ ಅನಾನಸ್ ಹಣ್ಣನ್ನು ತಿಂದು ಗಂಭೀರವಾಗಿ ಗಾಯಗೊಂಡಿತ್ತು. ಆಹಾರ ಸೇವಿಸಲು ಸಾಧ್ಯವಾಗದೇ, ನೋವು ತಾಳಲಾರೆ ನದಿಗೆ ಇಳಿದಿತ್ತು. ಮೇ 27ರಂದು ಆನೆ ಮೃತಪಟ್ಟಿತ್ತು. ಈ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು.

ಸ್ಫೋಟಕ ತುಂಬಿದ ಹಣ್ಣು
"ಕಾಡು ಪ್ರಾಣಿಗಳು ತೋಟಕ್ಕೆ ಬರದಂತೆ ತಡೆಯಲು ಮಾಲೀಕರು ಅಕ್ರಮವಾಗಿ ಸ್ಫೋಟಕ ತುಂಬಿದ ಹಣ್ಣುಗಳನ್ನು ತೋಟದ ಅಂಚಿನಲ್ಲಿ ಇಡುತ್ತಾರೆ. ಇದನ್ನು ಆಕಸ್ಮಿಕವಾಗಿ ತಿಂದು ಆನೆ ಮೃತಪಟ್ಟಿರಬಹುದು" ಎಂದು ಪರಿಸರ ಇಲಾಖೆ ಪ್ರಾಥಮಿಕ ತನಿಖಾ ವರದಿ ಅನ್ವಯ ಹೇಳಿದೆ.

ಗಂಭೀರವಾಗಿ ಪರಿಗಣನೆ
ಗರ್ಭಿಣಿ ಆನೆ ಹತ್ಯೆ ಪ್ರಕರಣವನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಇಲಾಖೆಗೆ ಸರ್ಕಾರ ಖಡಕ್ ಸೂಚನೆ ನೀಡಿದ್ದು, ಆರೋಪಿಗಳನ್ನು ಬಂಧಿಸಬೇಕು. ಇಲಾಖೆಯ ಅಧಿಕಾರಿಗಳು ಸಹ ಇಂತಹ ಕೃತ್ಯವನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.

ಒಬ್ಬ ವ್ಯಕ್ತಿಯ ಬಂಧನ
"ಗರ್ಭಿಣಿ ಆನೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ವನ್ಯ ಜೀವಿಗಳ ರಕ್ಷಣೆಗೆ ಇಲಾಖೆ ಬದ್ಧವಾಗಿದೆ" ಎಂದು ಪರಿಸರ ಇಲಾಖೆ ಹೇಳಿದೆ.

ಅಧಿಕಾರಿಗಳ ಜೊತೆ ಸಭೆ
ಭಾನುವಾರ ಅರಣ್ಯ ಇಲಾಖೆ ಮಹಾನಿರ್ದೇಶಕರು, ಸರ್ಕಾರದ ವಿಶೇಷ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಆನೆ ಹತ್ಯೆ ಪ್ರಕರಣದ ತನಿಖೆಯ ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.












Click it and Unblock the Notifications