ಶಿವಮೊಗ್ಗ; ಕಲುಷಿತ ಕುಡಿಯುವ ನೀರು ಸೇವನೆ, ಆಸ್ಪತ್ರೆ ಸೇರಿದ ಜನ
ಶಿವಮೊಗ್ಗ, ಜೂ 14: ಶಿವಮೊಗ್ಗ ಜಿಲ್ಲೆಯ ಮೈದೊಳಲು ಗ್ರಾಮದ ಎರಡು ಬೀದಿಯಲ್ಲಿ ಒಂದೆರಡು ದಿನದಿಂದ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಎಂ. ವಿ. ಅಶೋಕ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮದ ಕುಡಿಯುವ ನೀರಿನ ಮೂಲವನ್ನು ಆರೋಗ್ಯಾಧಿಕಾರಿಗಳು ಪರಿಶೀಲಿಸಿದರು. ರಾಜಭಕ್ಷವಾಲಿ ದೇವಸ್ಥಾನದ ಹಿಂಭಾಗದ ಟ್ಯಾಂಕಿನಿಂದ ಸರಬರಾಜು ಆಗುತ್ತಿರುವ ನೀರು ಕುಡಿದ ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಟ್ಯಾಂಕಿನ ಬಳಿ ಪರಿಶೀಲಿಸಿದಾಗ ವಾಲ್ ಹಾನಿಗೊಳಗಾಗಿದ್ದು ತ್ಯಾಜ್ಯ ನೀರು ಟ್ಯಾಂಕಿಗೆ ಸೇರಿರಬಹುದು ಎಂದು ಶಂಕಿಸಲಾಗಿದೆ.
ಕುವೆಂಪು ವಿವಿ ಘಟಿಕೋತ್ಸವ: ಮಾರ್ಕ್ಸ್ ಕಾರ್ಡ್ ಇಲ್ಲದೆ ಕಂಗಾಲಾದ ವಿದ್ಯಾರ್ಥಿಗಳು ನಿಟ್ಟುಸಿರು
ಇನ್ನೆರಡು ದಿನ ಟ್ಯಾಂಕಿನಿಂದ ನಲ್ಲಿಗಳಿಗೆ ನೀರು ಪೂರೈಸದಂತೆ ತಿಳಿಸಲಾಗಿದೆ. ಅಲ್ಲದೆ ಗ್ರಾಮದ ನೀರಿನ ಮೂಲಗಳ ಕೊಳವೆ ಬಾವಿಗಳ ನೀರು ಸಂಗ್ರಹಿಸಿ ಪರೀಕ್ಷೆಗೆ ಕಳಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒಗೆ ಸೂಚಿಸಲಾಗಿದೆ. ರೋಗಿಗಳ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಆರೋಗ್ಯ ಸಿಬ್ಬಂದಿಯಿಂದ ಮಾಹಿತಿಯನ್ನು ತಂಡ ಪಡೆಯಿತು.
ಅಸ್ವಸ್ಥರಾದವರ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ಹೊಟ್ಟೆ ನೋವು, ಭೇದಿಯಿಂದ ಸುಮಾರು 65ಕ್ಕೂ ಹೆಚ್ಚು ಜನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಲ್ಲಾಪುರ ಹಾಗೂ ಆನವೇರಿಯ ಖಾಸಗಿ ಕ್ಲಿನಿಕ್ಗಳಲ್ಲಿ 250ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದಿದ್ದಾರೆ. ತೀರಾ ಅಸ್ವಸ್ಥಗೊಂಡ 3-4 ಜನ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶರಾವತಿ ಹಿನ್ನೀರಿನ ಮಟ್ಟ ಇಳಿಕೆಯಾಗಿ ಲಾಂಚ್ ಸ್ಥಗಿತ: ಸಿಗಂದೂರು ಪ್ರವಾಸಿಗರಿಗೆ ಸಂಕಷ್ಟ
ಎರಡು ಕೊಳವೆ ಬಾವಿ ನೀರು; ಕಳೆದ ವಾರ ಗ್ರಾಮದಲ್ಲಿ ಹಬ್ಬ ನಡೆದಿದ್ದು ಗ್ರಾಮ ಪಂಚಾಯಿತಿ ಎರಡೂ ಕೊಳವೆ ಬಾವಿಗಳ ನೀರನ್ನು ಒಟ್ಟಿಗೆ ಸೇರಿಸಿ ಸರಬರಾಜು ಮಾಡಿದ್ದರಿಂದ ಅನಾರೋಗ್ಯ ಉಂಟಾಗಿದೆ ಎಂದು ಶಂಕಿಸಲಾಗಿದೆ. ಗ್ರಾಮ ಪಂಚಾಯಿತಿ ಆಡಳಿತದ ಅಸಮರ್ಪಕ ನಿರ್ವಹಣೆಯಿಂದ ಅನಾರೋಗ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಗ್ರಾಮಸ್ಥರು ತಾಲೂಕು ವೈದ್ಯಾಧಿಕಾರಿಗಳಿಗೆ ದೂರಿದರು. ಅಲ್ಲದೆ ಪರಿಶೀಲನೆಗೆ ಬಂದ ಪಂಚಾಯಿತಿ ಸಿಬ್ಬಂದಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 3 ವರ್ಷದ ಹಿಂದೆ ಕಲುಷಿತ ನೀರು ಸೇವನೆಯಿಂದ ಜನರು ಕಾಲರಾಕ್ಕೆ ತುತ್ತಾಗಿ, ಅನೇಕ ಸಾವು ನೋವುಗಳು ಸಂಭವಿಸಿತ್ತು.
ಕಲುಷಿತ ನೀರು ಪೂರೈಕೆ: ಸಾವಿನ ಸಂಖ್ಯೆ 5ಕ್ಕೇ ಏರಿಕೆ; ರಾಯಚೂರು ನಗರದ 35 ವಾರ್ಡ್ಗಳಿಗೆ ಕಲುಷಿತ ನೀರು ಪೂರೈಕೆಯಾದ ಪರಿಣಾಮ ಮೇ 31ರಂದು ವಾಂತಿ ಬೇಧಿ ಉಲ್ಭಣಗೊಂಡು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಹಲವಾರು ಮಂದಿ ಗಂಭೀರ ಪರಿಸ್ಥಿತಿಯಲ್ಲಿ ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವಾರದ ಅಂತರದಲ್ಲಿ ಸಾವಿನ ಸಂಖ್ಯೆ 5ಕ್ಕೇ ಏರಿಕೆಯಾಗಿದೆ.
ಕಳೆದ 15 ವರ್ಷಗಳಿಂದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಕಾರಣ ನಗರದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೆ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ ನಗರಕ್ಕೆ ಇದೇ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಲುಷಿತ ನೀರು ಕುಡಿದು ಐವರು ಸಾವನ್ನಪ್ಪಿದ್ದು, ನೂರಾರು ಮಂದಿ ಕಲುಷಿತ ನೀರು ಕುಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.