ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ಅಬ್ಬರ; ಶಿವಮೊಗ್ಗದಲ್ಲಿ ಮರ ಬಿದ್ದು ಓರ್ವ ಸಾವು
ಶಿವಮೊಗ್ಗ, ಏಪ್ರಿಲ್ 19: ರಾಜ್ಯಾದ್ಯಂತ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರದಿಂದಲೇ ಶಿವಮೊಗ್ಗದಲ್ಲಿ ಗಾಳಿ, ಗುಡುಗು ಸಮೇತ ಮಳೆ ಶುರುವಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೊರೆಬೈಲು ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಭಾರಿ ಗಾಳಿ, ಮಳೆಗೆ ಅಕೇಶಿಯಾ ಮರ ಬಿದ್ದು ಜಯಂತ್ ಭಟ್(64) ಎಂಬುವವರು ಸಾವನ್ನಪ್ಪಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಏಪ್ರಿಲ್ 20ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೀದರ್ನ ಭಾಲ್ಕಿಯಲ್ಲಿ ಕೂಡ ಗುರುವಾರ ಮಳೆಯಾಗಿದೆ.
ಇನ್ನೂ ದಾವಣಗೆರೆ ಜಿಲ್ಲೆಯಲ್ಲಿ ಆನಗೋಡು ಸಮೀಪದ ಈಚಘಟ್ಟದಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆ, ಸಿಡಿಲಿಗೆ 25 ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಅಂದಾಜು ಐದು ಲಕ್ಷ ರೂ. ನಷ್ಟವಾಗಿದೆ. ಇನ್ನು ರೈತ ಮಹಿಳೆ ರೇವಣಿಭಾಯಿ ಪಾಪ್ಯಾನಾಯ್ಕ ಅವರಿಗೆ ಸೇರಿದ ಮೇಕೆಗಳು ಆಗಿದ್ದು, ಸ್ಥಳೀಯ ಶಾಸಕ ಕೆಎಸ್ ಬಸವಂತಪ್ಪ, ಕಂದಾಯ ಅಧಿಕಾರಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಪರಿಹಾರ ಕೊಡಿಸುವ ಭರವಸೆ ಕೊಟ್ಟಿದ್ದಾರೆ.
ಬಾಗಲಕೋಟೆ, ಬಳ್ಳಾರಿ, ವಿಜಯನಗರ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದಯ, ಹಲವೆಡೆ ಧಾರಾಕಾರ ವರುಣನ ಅಬ್ಬರ ಜೋರಾಗಿದ್ದು,. ಇದರಿಂದ ವಾಹನ ಸವಾರರಿಗೆ ತೊಂದರೆ ಅನುಭವಿಸಿದ್ದಾರೆ. ಬಿಸಿಲಿನ ಧಗೆಗೆ ಬೆಂದಿದ್ದ ಜನರಿಗೆ ವರುಣ ತಂಪೇರಿದಿದ್ದಾನೆ. ವರುಣನ ಕೃಪೆಗೆ ಜನ ಪುಲ್ ಖುಷ್ ಆಗಿದ್ದಾರೆ. ಅದರಲ್ಲೂ ನಲಕ್ಕೆ ಬಿದ್ದ ಆಲಿಕಲ್ಲು ಆರಿಸಿಕೊಳ್ಳು ಜನ ಮುಗಿಬಿದ್ದಿದ್ದಾರೆ.












Click it and Unblock the Notifications