Breaking: 'ಲಾಲೂ ಇಲ್ಲದೆ ಬಿಹಾರವನ್ನು ನಡೆಸಲಾಗುವುದಿಲ್ಲ' ಎಂದ ಮಗಳು!
ಪಾಟ್ನಾ, ಆಗಸ್ಟ್ 09: ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್, ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ನಂತರ, ಲಾಲೂ ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಅವರು "ಲಾಲೂ ಇಲ್ಲದೆ ಬಿಹಾರವನ್ನು ನಡೆಸಲಾಗುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಲಾಲೂ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಚುನಾವಣಾ ಚಿಹ್ನೆ ಲಾಟೀನ್ ಉಲ್ಲೇಖಿಸಿ, ಭೋಜ್ಪುರಿ ಹಾಡನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಲಾಲೂ ಪ್ರಸಾದ್ ಯಾದವ್ ಅವರ ಚಿತ್ರವನ್ನು ಕಿಂಗ್ ಮೇಕರ್ ಎಂದು ಹಂಚಿಕೊಂಡಿದ್ದಾರೆ. ಮೇವು ಹಗರಣದ ಆರೋಪಿ ಲಾಲೂ ಯಾದವ್ ಸದ್ಯ ಜಾಮೀನಿನ ಮೇಲೆ ಇದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಬಿಹಾರ ವಿಧಾನ ಪರಿಷತ್ ಚುನಾವಣೆಯ ಮೊದಲು ಬಿಡುಗಡೆಯಾದ ಭೋಜ್ಪುರಿ ಗಾಯಕ-ನಟ ಖೇಸರಿ ಲಾಲ್ ಯಾದವ್ ಅವರ ಹಾಡನ್ನು ಹಂಚಿಕೊಂಡಿದ್ದಾರೆ. ಅದು ನಿರ್ದಿಷ್ಟ RJD ಅಭ್ಯರ್ಥಿಗಾಗಿ ಮಾಡಲಾಗಿದ್ದರೂ, ಅದು ಮಾಜಿ ಮುಖ್ಯಮಂತ್ರಿ ಮತ್ತು ಅವರ ರಾಜಕೀಯ ಉತ್ತರಾಧಿಕಾರಿಯನ್ನು ಹೊಗಳುವ ಸಾಲುಗಳನ್ನು ಹೊಂದಿತ್ತು. ತೇಜಸ್ವಿ ಇಲ್ಲದೆ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ಹಾಡಿನಲ್ಲಿವೆ. ಜೊತೆಗೆ ನಿತೀಶ್ ಕುಮಾರ್ ಅವರನ್ನು ಟೀಕಿಸುವ ಕೆಲವು ಸಾಲುಗಳೂ ಇದ್ದವು.
ಲಾಲೂ ಯಾದವ್ ಮತ್ತು ರಾಬ್ರಿ ದೇವಿ ಅವರ ಮತ್ತೊಬ್ಬ ಪುತ್ರಿ ರಾಜ್ ಲಕ್ಷ್ಮಿ ಯಾದವ್ ಕೂಡ ತಮ್ಮ ತಂದೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಬಿಹಾರವು ತೇಜಸ್ವಿ ಅವರ ಸರ್ಕಾರವನ್ನು ಬಯಸುತ್ತದೆ" ಎಂದು ಬರೆದಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ತೇಜಸ್ವಿ ಯಾದವ್ ಅವರು 2015 ರ ಚುನಾವಣೆ ಬಳಿಕರ ಜೆಡಿಯು, ಆರ್ಜೆಡಿ ಮತ್ತು ಕಾಂಗ್ರೆಸ್ ಒಟ್ಟಿಗೆ ಗೆದ್ದಾಗ ನಿತೀಶ್ ಕುಮಾರ್ ಅವರಿಗೆ ಉಪಮುಖ್ಯಮಂತ್ರಿಯಾಗಿದ್ದರು. ಲಾಲು ಯಾದವ್ ಅವರ ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಸಚಿವರಾಗಿದ್ದರು. ಆದರೆ 2017 ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ನಿತೀಶ್ ಕುಮಾರ್ "ಮಹಾಮೈತ್ರಿಕೂಟ" ದಿಂದ ಹೊರನಡೆದಿದ್ದರಿಂದ ಆ ಸರ್ಕಾರ ಪತನವಾಯಿತು.
ಬಿಹಾರದ ಮುಖ್ಯಮಂತ್ರಿಯಾಗಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಎರಡು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ವದಂತಿಗಳ ನಡುವೆಯೇ ಬಿಜೆಪಿಯೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ.