ಮೈತ್ರಿಯಲ್ಲಿ ಭಿನ್ನಮತ:ದೇವೇಗೌಡರನ್ನು ಭೇಟಿಯಾದ ಸಿಎಚ್ ವಿಜಯ್ ಶಂಕರ್
ಮೈಸೂರು, ಏಪ್ರಿಲ್ 1: ಮೈಸೂರಿಗೆ ಏಪ್ರಿಲ್ 7ರಂದು ಪ್ರಚಾರಕ್ಕೆ ಬರುತ್ತಿದ್ದೇನೆ. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಕೂಡ ಜೊತೆಗಿರುತ್ತಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸಿ.ಎಚ್. ವಿಜಯ್ ಶಂಕರ್ ಗೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರು ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ದಳದ ಕಾರ್ಯಕರ್ತರಿಂದ ತಮಗೆ ಸಹಕಾರ ಸಿಗುತ್ತಿಲ್ಲ. ನೀವು ಬಂದು ಕ್ಷೇತ್ರದಲ್ಲಿನ ಗೊಂದಲವನ್ನು ಸರಿಪಡಿಸಬೇಕೆಂದು ಕೇಳಿಕೊಂಡಿದ್ದಾರೆ.
ವಿಜಯ್ ಶಂಕರ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಬರಲಿಲ್ಲವೇಕೆ?
ಇದಕ್ಕೆ ಪ್ರತಿಕ್ರಿಯಿಸಿರುವ ದೇವೇಗೌಡರು, ಮೈಸೂರಿಗೆ ಪ್ರಚಾರಕ್ಕೆ ಬಂದು ಗೊಂದಲಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದ್ದಾರೆ. ವಿಜಯಶಂಕರ್ ಅವರು ಮೈತ್ರಿ ಅಭ್ಯರ್ಥಿಯಾದ ಬಳಿಕ ಕೆಲವು ದಳದ ಮುಖಂಡರನ್ನು ಹೊರತುಪಡಿಸಿ ಉಳಿದವರಿಂದ ಸೂಕ್ತ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ವಿಜಯಶಂಕರ್ ಅವರು ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ನಡೆದ ಜಾ.ದಳ - ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಸಚಿವ ಸಾ. ರಾ ಮಹೇಶ್ ಹಾಗೂ ಜಿ ಟಿ ದೇವೇಗೌಡ ಅವರು ಗೈರಾಗಿದ್ದರು. ಅಲ್ಲದೇ ಪ್ರಚಾರದ ಕರಪತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಫೋಟೋ ಮಾತ್ರ ಬಳಕೆ ಮಾಡಿದ್ದು, ಸ್ಥಳೀಯ ನಾಯಕರ ಫೋಟೋಗಳು ಇಲ್ಲದಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಹಿಂದುಳಿದ ವರ್ಗದವರಿಗೆ ಲೋಕಸಭಾ ಟಿಕೆಟ್ ಕೊಟ್ಟಿಲ್ಲ:ವಿಜಯ್ ಶಂಕರ್
ಇನ್ನು ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದ ಕಡೆ ಕಾಂಗ್ರೆಸ್ ಜಾ.ದಳ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಘೋಷಿಸಿದೆ.
ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದೇಕೆ?
ಎಸ್ಡಿಪಿಐ, ಮೈಸೂರು ಘಟಕ ಸಹ ವಿಜಯಶಂಕರ್ ರನ್ನು ಬೆಂಬಲಿಸುವುದಾಗಿ ಪ್ರಕಟಿಸಿದೆ. ಈ ಸಂಬಂಧ ಅಬ್ದುಲ್ ಮಜೀದ್ ಪಕ್ಷದ ಮುಖಂಡ ಮಾತನಾಡಿ, ಈ ಚುನಾವಣೆಯಲ್ಲಿ ಕೋಮುಶಕ್ತಿಗಳನ್ನು ಸೋಲಿಸಲು ದೇಶವ್ಯಾಪಿ ಜಾತ್ಯತೀತ ಶಕ್ತಿಗಳಿಗೆ ಎಸ್ಡಿಪಿಐ ಬೆಂಬಲ ನೀಡುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ. ಬಿಜೆಪಿ ಸ್ವಾಯತ್ತ ಸಂಸ್ಥೆಗಳಾದ ಸಿಬಿಐ ಆರ್ ಬಿಐ ಭಾರತೀಯ ಸೇನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.