ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದೇಕೆ?
ಮೈಸೂರು, ಮಾರ್ಚ್ 26:ಲೋಕಸಭಾ ಚುನಾವಣೆಗೆ ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿದ್ದ ಮೈಸೂರು - ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.
ಸೋಮವಾರವಷ್ಟೇ ಮೆರವಣಿಗೆ ಮೂಲಕ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರೊಂದಿಗೆ 2 ನಾಮಪತ್ರ ಸಲ್ಲಿಸಿದ್ದ ವಿಜಯ್ ಶಂಕರ್ ಇಂದು ಕೂಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮತ್ತೆರೆಡು ನಾಮಪತ್ರ ಸಲ್ಲಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದೇ ವೇಳೆ ಮಾತನಾಡಿದ ವಿಜಯ್ ಶಂಕರ್, ಚುನಾವಣೆಯ ಅಭ್ಯರ್ಥಿಗಳು ಎಷ್ಟು ಬಾರಿಯಾದರೂ ನಾಮಪತ್ರ ಸಲ್ಲಿಸಬಹುದು. ಈ ಹಿನ್ನಲೆಯಲ್ಲಿ ನಿನ್ನೆ ಎರಡು ನಾಮಪತ್ರ ಸಲ್ಲಿಸಿದ್ದೆ. ಇಂದು ಕೂಡ ಎರಡು ನಾಮಪತ್ರ ಸಲ್ಲಿಸಿದ್ದೇನೆ. ನಾವು ಸಂಪ್ರದಾಯಕ್ಕೆ ಬೆಲೆ ಕೊಡುತ್ತೇವೆ. ಒಂದು ಮದುವೆ ಮಾಡಬೇಕಾದರೆ ಶುಭ ಘಳಿಗೆ ನೋಡುವುದಿಲ್ಲವೇ, ಹಾಗೆಯೇ ಇಂದು ನಾಮಪತ್ರ ಸಲ್ಲಿಸಲು ಶುಭ ದಿನ ಎಂದು ಎರಡು ನಾಮಪತ್ರ ಸಲ್ಲಿಸಿದ್ದೇನೆ. ಆದರಿಂದ ಮತ್ತೆರಡು ನಾಮಪತ್ರ ಸಲ್ಲಿಸಲಾಗಿದೆ ಎಂದರು.
ಪ್ರತಾಪ್ ಸಿಂಹ ಪರ ಪ್ರಚಾರಕ್ಕೆ ಮೋದಿ ಆಗಮನ ವಿಚಾರ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಅವರವರಿಗೆ ಬಿಟ್ಟಿದ್ದು. ರಾಜಕೀಯ ನಿಂತ ನೀರಲ್ಲ. ಹಾಗೆಯೇ ರಾಜಕೀಯದಲ್ಲಿ ಕಾಲ ಕಾಲಕ್ಕೆ ಎಲ್ಲವೂ ಬದಲಾಗುತ್ತವೆ ಎಂದರು.

ನಾಮಪತ್ರ ವೇಳೆ ಸಚಿವ ಜಿ.ಟಿ.ದೇವೇಗೌಡ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಆ ಕಾರಣ ಅವರು ನಾಮಪತ್ರ ಸಲ್ಲಿಕೆ ವೇಳೆ ಬಂದಿಲ್ಲ. ನಮ್ಮ-ಅವರ ನಡುವೆ ಯಾವುದೇ ಮನಸ್ತಾಪ ಇಲ್ಲ. ಮುಂದಿನ ದಿನಗಳಲ್ಲಿ ಜಿ.ಟಿ.ದೇವೇಗೌಡ, ಎಚ್.ಸಿ.ಮಹದೇವಪ್ಪ ಜೊತೆಗೂಡಿ ಸಭೆ ನಡೆಸಲಿದ್ದೇವೆ ಎಂದರು.












Click it and Unblock the Notifications