E-Bus: 'ಸೋಮಾರಿ-ಕಮಿಷನ್' ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿಗೆ 4,500 ಇ-ಬಸ್ ಕೈತಪ್ಪುವ ಸಾಧ್ಯತೆ! ಜೆಡಿಎಸ್
ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜಿಸುವ ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ದೇಶದ ವಿವಿಧ ನಗರಗಳಿಗೆ ಎಲೆಕ್ಟ್ರಿಕ್ ಬಸ್ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಅದರಲಲ್ಲಿ ಬೆಂಗಳೂರಿಗೆ ಹೆಚ್ಚು ಇ-ಬಸ್ಗಳು ಮಂಜೂರಾಗಿವೆ. ರಾಜ್ಯ ಸರ್ಕಾರ ಅನುಮೋದನೆ ನೀಡುವಲ್ಲಿ ತಿಂಗಳುಗಳಿಂದಲೂ ವಿಳಂಬ ಧೋರಣೆ ಅನುರಿಸಿದೆ. ಕಡತ ಧೂಳು ಹಿಡಿದಿದ್ದು, ಅಗತ್ಯವಾದ ಬಸ್ಗಳು ಬೆಂಗಳೂರಿಗೆ ಕೈ ತಪ್ಪಿದರೆ ಯಾರು ಹೊಣೆ? ಎಂದು ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಜೆಡಿಎಸ್ ಕೆಂಡಾಮಂಡಲವಾಗಿದೆ
ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಬೇಕಿರುವ 4500 ಇ-ಬಸ್ಗಳಿಗೆ ಸಂಬಂಧಿಸಿದಂತೆ ಜೆಡಿಎಸ್ ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ಹೊರ ಹಾಕಿದೆ. ಸರ್ಕಾರದ ಈ ಧೋರಣೆಯನ್ನು ಕಟುವಾಗಿ ಟೀಕಿಸಿದೆ. 'ಮಂಜೂರಾದ ಬಸ್ಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿಲ್ಲ. ಶೇ.60 'ಕಮಿಷನ್' ಖ್ಯಾತಿಯ ಕಾಂಗ್ರೆಸ್ ಸರ್ಕಾರಕ್ಕೆ ಸಾರ್ವಜನಿಕ ಸಾರಿಗೆಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ' ಎಂದು ದೂರಿದೆ.

'ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ
ಪಿಎಂ ಇ-ಡ್ರೈವ್ ಯೋಜನೆ ಅಡಿ ಬೆಂಗಳೂರಿಗೆ 1,505 ಕೋಟಿ ರೂಪಾಯಿ ಸಹಾಯಧನದೊಂದಿಗೆ ಬರೋಬ್ಬರಿ 4,500 ಎಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಲಾಗಿತ್ತು. 2025ರಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡದೆ ದಿನದೂಡುತ್ತಿರುವುದು ಯಾಕೆ? ಬೇರೆ ರಾಜ್ಯಗಳಿಗೆ ಬಸ್ಸುಗಳು ಹಂಚಿಕೆಯಾದರೆ ಕನ್ನಡಿಗರಿಗೆ ಉತ್ತರಿಸುವವರು ಯಾರು? ಎಂದು ಪ್ರಶ್ನಿಸಿದೆ.
'ಸೋಮಾರಿ' ಸರ್ಕಾರದಿಂದ ಹಳ್ಳ ಹಿಡಿದ ಸಾರಿಗೆ..!
ಈಗಾಗಲೇ ಕೇಂದ್ರದಿಂದ ಮಂಜೂರಾದ ಹೈದರಾಬಾದ್, ಸೂರತ್, ಅಹಮದಾಬಾದ್ ನಗರಗಳ ಬಸ್ಗಳಿಗೆ ಅಲ್ಲಿನ ರಾಜ್ಯ ಸರ್ಕಾರಗಳು ಈಗಾಗಲೇ ಕಾರ್ಯಾದೇಶ ನೀಡಿವೆ. ಯೋಜನೆಯಡಿ ಬಸ್ ನಿಯೋಜನೆ ಕೆಲಸದಲ್ಲಿ ಆಯಾ ರಾಜ್ಯ ಸರ್ಕಾರಗಳು ಮುನ್ನುಗ್ಗುತ್ತಿವೆ. ಆದರೆ ನಮ್ಮ 'ಸೋಮಾರಿ' ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನೂ ಫೈಲ್ ಧೂಳು ಹಿಡಿಸಿಕೊಂಡು. ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸುತ್ತಿದೆ' ಎಂದು ಜೆಡಿಎಸ್ ಕಿಡಿ ಕಾರಿದೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಬೆಂಗಳೂರಿಗೆ ಹೆಚ್ಚಿನ ಬಸ್ಗಳನ್ನು ನೀಡಲಾಗಿದೆ. ಆದರೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಆ ಬಸ್ಗಳನ್ನು ಬಳಸಲು ಆಗುತ್ತಿಲ್ಲ ಎಂಬುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸಚಿವರಾದ ಕುಮಾರಸ್ವಾಮಿ ಬೆಂಗಳೂರು ಸೇರಿದಂತೆ ರಾಜ್ಯದ ಜನರಿಗೆ ಹೆಚ್ಚುವರಿ ಬಸ್ ಸಿಗುವಂತೆ ಶ್ರಮಿಸಿದರೆ, ರಾಜ್ಯ ಕಾಂಗ್ರಸ್ ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರ ದ್ವೇಷ ಸಾಧನೆ ಮುಂದುವರಿಸಿರುವುದಕ್ಕೆ ಇದು ಮತ್ತೊಂದು ನಿದರ್ಶನ.
ಮಂಜೂರಾದ ಬಸ್ಗಳು ಕೈ ತಪ್ಪಿದರೆ ಯಾರು ಹೊಣೆ?
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಬೆಂಗಳೂರಿನ ಜನರಿಗೆ ಬಸ್ಸುಗಳು ಬೇಡವೇ? ಎಲೆಕ್ಟ್ರಿಕ್ ಬಸ್'ಗಾಗಿ ಕೇಂದ್ರ ಸರ್ಕಾರ ನೀಡಿರುವ ಸಹಾಯಧನವನ್ನೂ ಬಳಸಿಕೊಳ್ಳದ ನಿಮ್ಮ ಆಡಳಿತ ವೈಫಲ್ಯಕ್ಕೆ ಏನನ್ನಬೇಕು?. ಬಸ್ಸುಗಳು ಬೇರೆ ರಾಜ್ಯಗಳ ಪಾಲಾದರೆ ಬೆಂಗಳೂರಿಗರು ನಿಮ್ಮನ್ನು ಕ್ಷಮಿಸಲ್ಲ! ನಿಮ್ಮ ಸರ್ಕಾರದ ಈ ನಿರಾಸಕ್ತಿ ಮತ್ತು ವಿಳಂಬ ನೀತಿಗೆ ಕನ್ನಡಿಗರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಬಹಿರಂಗ ಎಚ್ಚರಿಕೆ ನೀಡಿದೆ.













Click it and Unblock the Notifications