ರಸ್ತೆಯಲ್ಲಿ ಮೀನಿನ ತ್ಯಾಜ್ಯ ಚೆಲ್ಲುವ ಲಾರಿಗಳ ವಿರುದ್ಧ ಪೊಲೀಸರ ಕ್ರಮ
ಮಂಗಳೂರು ಮೇ 04: ಮಂಗಳೂರಿನ ರಸ್ತೆಗಳಲ್ಲಿ ತಾಜ್ಯ ನೀರು ಚೆಲ್ಲುತ್ತಾ ಸಾಗುವ ಮೀನು ಸಾಗಾಟ ಲಾರಿಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಕರಿತು ಸೂಕ್ತ ಆದೇಶ ಹೊರಡಿ ಸುವಂತೆ ಕೋರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ನಗರ ಪೊಲೀಸ್ ಇಲಾಖೆ ಕರಡು ಪ್ರಸ್ತಾವನೆ ಕಳುಹಿಸಿದೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರಿನ ರಸ್ತೆಗಳಲ್ಲಿ ಎಲ್ಲೆಲ್ಲೂ ಮೀನಿನ ದುರ್ವಾಸನೆ ಹರಡಿತ್ತು. ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀನು ಸಾಗಾಟದ ವಾಹನಗಳ ಬೇಕಾ ಬಿಟ್ಟಿ ಚಾಲನೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರಸ್ತೆಗಳಲ್ಲಿ ಮೀನಿನ ದುರ್ನಾತ ಬೀರಲಾರಂಭಿಸಿತ್ತು. ರಾತ್ರಿ ಹಗಲೆನ್ನದೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮಂಗಳೂರು ನಗರದ ಎಲ್ಲಾ ರಸ್ತೆಗಳಲ್ಲೂ ಮೀನಿನ ನೀರನ್ನು ಚೆಲ್ಲುತ್ತಾ ಸಾಗುತ್ತಿರುವ ಈ ಲಾರಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿತ್ತು.
ಎಲ್ಲೆಲ್ಲೂ ಮೀನಿನ ನೀರು, ದುರ್ವಾಸನೆಗೆ ಬೇಸತ್ತ ಮಂಗಳೂರಿಗರು
ಅದರಲ್ಲೂ ಮಂಗಳೂರಿನ ಮಂಗಳಾದೇವಿ, ಮೋರ್ಗನ್ಸ್ ಗೇಟ್, ಜಪ್ಪಿನಮೊಗರು, ಮಾರ್ಗವಾಗಿ ಸಂಚರಿಸುವ ಈ ಮೀನಿನ ಲಾರಿಗಳು ಮಂಗಳೂರು-ಕಣ್ಣೂರು ರಾಷ್ಟ್ರೀಯ ಹೆದ್ದಾರಿಯನ್ನು ದುರ್ನಾತ ಬೀರುವ ರಸ್ತೆಯನ್ನಾಗಿ ಪರಿವರ್ತಿಸಿದ್ದವು. ಮೀನಿನ ದುರ್ನಾತ ಬೀರುವ ಈ ಮೀನಿನ ತ್ಯಾಜ್ಯದ ನೀರು ಜನರ ಆರೋಗ್ಯದ ಮೇಲೆ ಮಾತ್ರವಲ್ಲದೇ ಜನರ ಪ್ರಾಣಕ್ಕೂ ಕಂಟಕವಾಗುತ್ತಿವೆ.
ರಸ್ತೆಯಲ್ಲಿ ಲಾರಿಗಳು ಚೆಲ್ಲಿಕೊಂಡು ಬರುವ ಮೀನಿನ ತ್ಯಾಜ್ಯ ನೀರು ರಸ್ತೆಯಲ್ಲಿ ಸಾಗಿ ಬರುವ ಬೈಕ್ ಸವಾರರಿಗೆ ಮಾರಕವಾಗಿ ಪರಿಣಮಿಸುತ್ತಿದ್ದವು. ರಸ್ತೆಯಲ್ಲಿ ಚೆಲ್ಲಿದ ಮೀನಿನ ನೀರು ಬೈಕ್ ಗಳು ಸ್ಕಿಡ್ ಆಗಲು ಕಾರಣವಾಗಿದ್ದವು. ಹಲವಾರು ರಸ್ತೆ ಅಪಘಾತಗಳಿಗೆ ಈ ಮೀನಿನ ನೀರು ಕಾರಣವಾಗಿದದ್ದು. ಈ ಮೀನಿನ ಲಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆ ಇರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಉಡುಪಿ : ಮಹಿಳೆ ಪ್ರಾಣ ತೆಗೆದ ಮೀನಿನ ಲಾರಿ
ಈ ಮೀನಿನ ಲಾರಿಗಳ ವಿರುದ್ದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿಎಚ್ಚೆತು ಕೊಂಡ ಪೊಲೀಸ್ ಇಲಾಖೆ ರಸ್ತೆಯಲ್ಲಿ ಮೀನಿನ ತ್ಯಾಜ್ಯವನ್ನು ರಸ್ತೆಯಲ್ಲಿ ಸಾಗುವ ಲಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಈ ಸಮಸ್ಯೆಗಳ ಬಗ್ಗೆ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಲಾಗಿದೆ. ಅದರ ಪ್ರಕಾರ ಏಪ್ರಿಲ್ 29ರಂದು ಮೀನು ಸಾಗಾಟ ಲಾರಿ ಮಾಲಕರು, ಸಾರಿಗೆ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜತೆ ಪೊಲೀಸ್ ಕಮಿಷನರ್ ಅವರು ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಒಂದು ಟನ್ ಮೀನು ಸಾಗಾಟ ಮಾಡುವುದಿದ್ದರೆ, 50 ಲೀಟರ್ ಐಸ್ ನೀರು ಸಂಗ್ರಹಕ್ಕೆ ಪ್ರತ್ಯೇಕ ಕ್ಯಾನ್ ಅಳವಡಿಸಬೇಕು. ಕಂಪಾರ್ಟ್ಮೆಂಟ್ ವ್ಯವಸ್ಥೆಯನ್ನು ಮೀನು ಸಾಗಾಟ ವಾಹನಗಳು ಹೊಂದಿರಬೇಕು. ಕೆಲವು ಲಾರಿಗಳು ಶುಚಿತ್ವವನ್ನು ಹೊಂದಿರುವುದಿಲ್ಲ. ಇದು ಕೂಡ ವಾತಾವರಣ ಕಲುಷಿತ ಗೊಳ್ಳಲು ಕಾರಣವಾಗುತ್ತದೆ. ಇವೆಲ್ಲವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಮಂಗಳೂರು : ಮೀನಿನ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ
ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ಪ್ರಥಮ ಬಾರಿಗೆ 5,000 ರೂಪಾಯಿ ದಂಡಶುಲ್ಕ, ಅನಂತರವೂ ನಿಯಮ ಉಲ್ಲಂಘನೆ ಕಂಡುಬಂದರೆ ಲಾರಿಯ ಪರವಾನಿಗೆ ಅಮಾನತು ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಈಗಾಗಲೇ ಲಾರಿ ಮಾಲಕರಿಗೆ ಸೂಚನೆ ನೀಡಲಾಗಿದೆ.