ಬಿಜೆಪಿ ಭದ್ರಕೋಟೆ ಕೊಡಗು, ಹಾಲಿ ಶಾಸಕರಿಗಿಲ್ಲ ಟಿಕೆಟ್ ಚಿಂತೆ!
ಮಡಿಕೇರಿ, ನವೆಂಬರ್ 08; ಸದ್ಯ ಬಿಜೆಪಿಯ ಭದ್ರಕೋಟೆಯಾಗಿರುವ ಕಾರಣದಿಂದ ಮತ್ತು ಹಲವು ವರ್ಷಗಳಿಂದ ಇಲ್ಲಿ ಬಿಜೆಪಿಯೇ ಗೆಲುವು ಸಾಧಿಸಿಕೊಂಡು ಬರುತ್ತಿರುವುದರಿಂದ ಆ ಕೋಟೆಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಹೊಂದಿರುವ ನಾಯಕರ ಹುಡುಕಾಟದಲ್ಲಿ ಕಾಂಗ್ರೆಸ್ ಇದ್ದರೆ, ಸಂಘಟನೆಗೊಳ್ಳದ ಜೆಡಿಎಸ್ನಿಂದ ಸ್ಪರ್ಧಿಸಲು ಯಾರು ಮುಂದೆ ಬರಬಹುದು? ಎಂಬ ಕುತೂಹಲ ಕಾಡುತ್ತಿದೆ.
ಕೊಡಗಿನಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ಎಂಬ ಕ್ಷೇತ್ರವಷ್ಟೆ ಇರುವುದರಿಂದ ಆ ಕ್ಷೇತ್ರಗಳಲ್ಲಿ ಶಾಸಕರಾಗಿ ಅಪ್ಪಚ್ಚುರಂಜನ್, ಕೆ. ಜಿ. ಬೋಪಯ್ಯ ಪಾರುಪತ್ಯ ಸಾಧಿಸಿರುವುದರಿಂದ ಹಾಗೂ ಅವರು ಪ್ರತಿಬಾರಿಯೂ ಗೆಲ್ಲುವ ಕುದುರೆಗಳು ಆಗಿರುವುದರಿಂದ ಅವರನ್ನು ಹೊರತುಪಡಿಸಿ ಬೇರೆ ನಾಯಕರಿಗೆ ಬಿಜೆಪಿಯ ವರಿಷ್ಠರು ಟಿಕೆಟ್ ನೀಡುವುದು ಕಷ್ಟಸಾಧ್ಯ. ಹೀಗಾಗಿ ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನಗಳಿದ್ದರೂ ಕೊನೆಗಳಿಗೆಯಲ್ಲಿ ಚುನಾವಣೆ ವಿಚಾರ ಬಂದಾಗ ಒಟ್ಟಾಗಿ ಕಾರ್ಯನಿರ್ವಹಿಸುವುದರಿಂದ ಬಿಜೆಪಿ ಗೆಲುವು ಸಾಧಿಸಿಕೊಂಡು ಬರಲು ಸಾಧ್ಯವಾಗಿದೆ.
ಕೊಡಗಿನಲ್ಲಿ ಬಿಜೆಪಿ ಎದುರು ಮಂಕಾದ ಕಾಂಗ್ರೆಸ್
ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಬೆಂಗಳೂರಿನಿಂದ ಬಿಫಾರಂ ತರಬೇಕಾದರೆ ಆಕಾಂಕ್ಷಿಗಳಿಗೆ ಗಾಢ್ ಫಾದರ್ಗಳ ಆಶೀರ್ವಾದ ಮತ್ತು ಕಪ್ಪ ಕಾಣಿಕೆ ಸಲ್ಲಿಕೆಯೂ ಅನಿವಾರ್ಯವಾಗಿರುವುದರಿಂದ ಕಾಂಗ್ರೆಸ್ಗೆ ಹೋಲಿಸಿದರೆ ಬಿಜೆಪಿಯಲ್ಲಿ ಜಿಲ್ಲೆಯ ಮಟ್ಟಿಗೆ ಆ ರಗಳೆಗಳು ಇಲ್ಲ ಎನ್ನಬಹುದು.
ಶಾಸಕರ ಮೌಲ್ಯ ಮಾಪನ; ಕೊಡಗು ಜಿಲ್ಲೆಯ ಶಾಸಕರಿಗೆ ಅಂಕ ನೀಡಿ
ಈಗಿರುವ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಮುಖ್ಯವಾಗಿದೆ. ಆದ್ದರಿಂದ ಗೆಲುವಿನ ಕುದುರೆಯಾಗಿರುವ ಶಾಸಕರಾದ ಕೆ. ಜಿ. ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರನ್ನು ಹೊರತು ಪಡಿಸಿ ಬೇರೆ ನಾಯಕರಿಗೆ ಪಕ್ಷದಿಂದ ಟಿಕೆಟ್ ನೀಡುತ್ತಾರೆ ಎಂಬುದನ್ನು ಕನಸಿನಲ್ಲೂ ಯೋಚಿಸಲು ಸಾಧ್ಯವಿಲ್ಲದಂತಾಗಿದೆ.
ಬಿಜೆಪಿಯನ್ನು ಗೆಲ್ಲಿಸುತ್ತಿರುವ ಮತದಾರರು
ಜಿಲ್ಲೆಯ ಬಿಜೆಪಿ ಶಾಸಕಾದ ಕೆ. ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಸಚಿವ ಸ್ಥಾನದ ನಿರೀಕ್ಷೆ ಮಾಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹಾಗೆಂದು ಅಸಮಾಧಾನವಿದ್ದರೂ ಅದನ್ನು ಬಹಿರಂಗವಾಗಿ ತೋರ್ಪಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಕೊನೆ ಪಕ್ಷ ನಿಗಮ ಮಂಡಳಿಗೂ ಲಾಬಿ ಮಾಡಿಲ್ಲ. ಮೌನವಾಗಿಯೇ ಉಳಿದಿದ್ದಾರೆ.
ಇದರ ನಡುವೆ ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಮಡಿಕೇರಿ ಕ್ಷೇತ್ರದಲ್ಲಿ ಕೊಡವೇತರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಜಾತಿ ಮತ ಮರೆತು ಒಟ್ಟಾಗಿ ಪಕ್ಷವನ್ನಷ್ಟೆ ನೋಡಿ ಮತಹಾಕುವವರ ಸಂಖ್ಯೆ ಹೆಚ್ಚು ಇರುವ ಕಾರಣದಿಂದ ಬಿಜೆಪಿ ಗೆಲ್ಲುತ್ತಾ ಬಂದಿದೆ.
ಬಿಜೆಪಿ ಬಳಿ ಇರುವ ಬ್ರಹ್ಮಾಸ್ತ್ರ ಯಾವುದು?
ಬಿಜೆಪಿ ಗೆಲುವಿಗೆ ಅಭಿವೃದ್ಧಿಕ್ಕಿಂತಲೂ ಭಾವನಾತ್ಮಕ ವಿಚಾರ ಹೆಚ್ಚಿನ ಕೆಲಸ ಮಾಡಿದೆ. ಜತೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟಿಪ್ಪು ಜಯಂತಿ ಮಾಡಿದ್ದರಿಂದ ಆದ ಹಿಂಸಾಚಾರಗಳು ಕಾಂಗ್ರೆಸ್ ವಿರುದ್ಧದ ಪ್ರಬಲ ಅಸ್ತ್ರವಾಗಿ ಜಿಲ್ಲೆಯಲ್ಲಿ ಉಳಿದು ಹೋಗಿದೆ. ಅದು ಯಾವುದೇ ಚುನಾವಣೆ ನಡೆದರೂ ಬಿಜೆಪಿಗೆ ಬ್ರಹ್ಮಾಸ್ತ್ರವಾಗಿ ಬತ್ತಳಿಕೆಯಲ್ಲಿ ಉಳಿಯುವಂತಾಗಿದೆ. ಈ ಅಸ್ತ್ರದ ಮುಂದೆ ಕಾಂಗ್ರೆಸ್ ಯಾವುದೇ ಅಸ್ತ್ರ ಬಳಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಜತೆಗೆ ಬಿಜೆಪಿ ತಳಮಟ್ಟದಿಂದಲೇ ಭದ್ರಗೊಂಡಿರುವುದರಿಂದ ಅದನ್ನು ಅಲುಗಾಡಿಸುವುದು ಕಾಂಗ್ರೆಸ್ ಗೆ ಕಷ್ಟವಾಗಿದೆ.
ಟಿಕೆಟ್ ಗಾಗಿ ಪಟ್ಟು ಹಿಡಿಯುವವರಿಲ್ಲ
ಹಾಗೆ ನೋಡಿದರೆ ಶಾಸಕರಾದ ಅಪ್ಪಚ್ಚುರಂಜನ್ ಮತ್ತು ಕೆ. ಜಿ. ಬೋಪಯ್ಯ ಅವರೊಂದಿಗೆ ರಾಜಕೀಯ ಮಾಡಿಕೊಂಡು ಬಂದಿರುವ ಕೆಲವು ನಾಯಕರಿದ್ದಾರೆ. ಇನ್ನು ಎರಡನೇ ಹಂತದ ಯುವ ನಾಯಕರು ಜಿಲ್ಲೆಯ ಮಟ್ಟಿಗೆ ಬೇರೆ ಬೇರೆ ವಿಭಾಗಗಳಲ್ಲಿ ಪಾರುಪತ್ಯ ಸಾಧಿಸಿದ್ದಾರೆ. ಆದರೆ ಹಾಲಿ ಶಾಸಕರಿಬ್ಬರನ್ನು ದೂರವಿಟ್ಟು ನಮಗೆ ಟಿಕೆಟ್ ನೀಡಿ ಎಂದು ಪಟ್ಟು ಹಿಡಿಯುವಷ್ಟು ಪ್ರಭಾವಿ ನಾಯಕರು ಸದ್ಯಕ್ಕೆ ಕಾಣುತ್ತಿಲ್ಲ. ಹೀಗಾಗಿ ಬಹುಶಃ ಯಾವುದೇ ಗೊಂದಲಗಳಿಲ್ಲದೆ ಮುಂದಿನ ವಿಧಾನಸಭಾ ಚುನಾವಣೆಗೆ ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ತಳಮಟ್ಟದಿಂದ ಸಂಘಟನೆಗೆ ಒತ್ತು
ಬಿಜೆಪಿ ತಳಮಟ್ಟದಿಂದ ಸಂಘಟನೆಗೆ ಒತ್ತುಕೊಡುವುದರಿಂದ ಚುನಾವಣೆ ನಡೆದ ಮಾರನೆಯ ದಿನದಿಂದಲೇ ತನ್ನ ಕಾರ್ಯ ಆರಂಭಿಸುತ್ತದೆ. ಈ ಹಿಂದೆ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದ್ದ ಕಾಲದಿಂದ ಆರಂಭವಾಗಿ ಇಲ್ಲಿವರೆಗೆ ಅದು ಮುಂದುವರೆದಿದೆ. ಆದರೆ ಕಾಂಗ್ರೆಸ್ ಹಾಗಿಲ್ಲ. ಅದು ಎಚ್ಚೆತ್ತುಕೊಳ್ಳುವುದು ಚುನಾವಣೆ ಘೋಷಣೆಯಾದಾಗ ಮಾತ್ರ. ಅದರಲ್ಲೂ ಹಳ್ಳಿ ಹಳ್ಳಿಯ ಮನೆ ಮನೆಗೆ ಕಾಂಗ್ರೆಸ್ ಹೋಗುವುದೇ ಇಲ್ಲ. ಜತೆಗೆ ಕಾರ್ಯಕರ್ತರ ಕೊರತೆಯೂ ಹೆಚ್ಚಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಚುನಾವಣೆ ಮುನ್ನವೇ ಗೆಲುವಿನ ನಿರೀಕ್ಷೆ
ಕಾಂಗ್ರೆಸ್ ತನ್ನ ಸೋಲಿಗೆ ಕಾರಣವೇನು ಎಂಬುದನ್ನು ಕಳೆದ 2018ರ ವಿಧಾನಸಭಾ ಚುನಾವಣೆ ಸೋಲಿನ ವೇಳೆ ಅರಿತುಕೊಂಡು ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಬಹುದಿತ್ತು. ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಸಲುವಾಗಿ ಪಕ್ಷದಿಂದ ನಾಯಕರನ್ನು ಉಚ್ಛಾಟಿಸುವ ಕಾರ್ಯಕ್ಕೆ ಮುಂದಾಯಿತೇ ವಿನಃ ಒಟ್ಟಾಗಿಸುವ ಪ್ರಯತ್ನ ಮಾಡಲಿಲ್ಲ. ಇದರ ಪರಿಣಾಮ ಕೊಡಗಿನಲ್ಲಿ ಬಿಜೆಪಿ ನಾಯಕರು ನೆಮ್ಮದಿಯಾಗಿದ್ದಾರೆ. ಜತೆಗೆ ಚುನಾವಣೆಗೆ ಮುನ್ನವೇ ಕಾರ್ಯಕರ್ತರು ಸೇರಿದಂತೆ ನಾಯಕರು ಗೆಲುವು ತಮ್ಮದೇ ಎಂದು ಬೀಗುವಂತಾಗಿದೆ.