Heavy Rain: ಜಾತ್ರೆ ಖುಷಿ ಹೆಚ್ಚಿಸಿದ ಮಳೆ; ಕುಣಿದು ಸಂಭ್ರಮಿಸಿದ ಜನ!
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲದೇ ಇದ್ದರೂ, ಹಲವು ಜಿಲ್ಲೆಗಳಿಗೆ ವರುಣನ ಕೃಪೆ ಸಿಕ್ಕಿದೆ. ಭಾರಿ ಬಿಸಿಲಿನಿಂದ ಕಂಗಾಲಾಗಿದ್ದ ಜನಕ್ಕೆ ಯುಗಾದಿ ಹಬ್ಬದ ದಿನದಿಂದ ಸುರಿಯುತ್ತಿರುವ ಮಳೆ ನೆಮ್ಮದಿ ಮೂಡಿಸಿದೆ. ಶುಕ್ರವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೂಡ ಉತ್ತಮ ಮಳೆಯಾಗುತ್ತಿದ್ದು, ಶುಕ್ರವಾರ ಜನ ಮಳೆಯಲ್ಲಿ ಕುಣಿದು ಸಂಭ್ರಮಿಸಿದ್ದಾರೆ. ಮಾರಿಯಮ್ಮ ಮತ್ತು ಕೊರಗಜ್ಜ ದೇವರ ವಾರ್ಷಿಕ ಉತ್ಸವ ಮಾಡುವ ಸಂದರ್ಭದಲ್ಲಿ ಮಳೆ ಶುರುವಾಗಿದ್ದು, ಜನರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು.

ಉತ್ಸವದಲ್ಲಿ ಪಾಲ್ಗೊಂಡ ಜನ ಮಳೆ ಬಂದರೂ ಅಲ್ಲಿಂದ ಕದಲಿಲ್ಲ ಬದಲಾಗಿ ವಾಲಗದ ಸ್ವರಕ್ಕೆ ಹೆಜ್ಜೆ ಹಾಕುವ ಮೂಲಕ ಖುಷಿಪಟ್ಟರು. ಕಾವೇರಿ ನದಿಯ ತವರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಸದ್ಯ ತಾತ್ಕಾಲಿಕವಾಗಿ ನೆಮ್ಮದಿ ತರಿಸಿದೆ.
ಈ ಬಾರಿ ರಾಜ್ಯಕ್ಕೆ ಭಾರಿ ಮಳೆ ಬೇಕಾಗಿದೆ. ಭೀಕರ ಬರದ ಪರಿಣಾಮ ಕೆರೆ, ನದಿ, ಹೊಳೆಗಳು ಬತ್ತಿ ಹೋಗಿವೆ, ಜಲಾಶಯಗಳಲ್ಲಿ ಕೂಡ ನೀರಿನ ಪ್ರಮಾಣ ದಾಖಲೆ ಮಟ್ಟದಲ್ಲಿ ಕಡಿಮೆಯಾಗಿದೆ. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.
ಮುಂಗಾರು ಆಗಮನಕ್ಕೆ ಇನ್ನೂ ಎರಡು ತಿಂಗಳು ಇದ್ದರೂ, ಯುಗಾದಿ ವೇಳೆಯಲ್ಲೇ ಬೇಸಿಗೆ ಮಳೆ ಆರಂಭವಾಗಿದೆ. ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ.
ಮಾರಿಯಮ್ಮ ಮತ್ತು ಕೊರಗಜ್ಜ ದೇವರ ವಾರ್ಷಿಕ ಉತ್ಸವ ಮಾಡುವ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಕುಣಿದು ಕುಪ್ಪಳಿಸಿದ ಜನತೆ. #ಮಳೆ #ಕೊಡಗುಮಳೆ #kodagurain pic.twitter.com/fZEqVcdcek
— Naveen Navi (@IamNavinaveen) April 13, 2024
ಕೊಡಗಿನಲ್ಲಿ ಮಳೆ
ರಾಜ್ಯದಲ್ಲಿ ವರ್ಷದ ಮೊದಲ ಮಳೆ ಶುರುವಾಗಿದ್ದೇ ಕೊಡಗು ಜಿಲ್ಲೆಯಲ್ಲಿ. ಏಪ್ರಿಲ್ ಆರಂಭದಿಂದಲೂ ಕೊಡಗು ಜಿಲ್ಲೆಯಲ್ಲಿ ಆಗಾಗ್ಗೆ ಮಳೆರಾಯ ದರ್ಶನ ಕೊಡುತ್ತಿದ್ದಾನೆ.
ಶುಕ್ರವಾರ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ನೆಲ್ಯಹುದಿಕೇರಿ, ಮೂರ್ನಾಡು ಸಮೀಪದ ಹೊದ್ದೂರು ವಾಟೆಕಾಡು, ನಾಪೋಕ್ಲು, ಕೊಳಕೇರಿಯಲ್ಲಿ ವ್ಯಾಪಕ ಮಳೆಯಾಗಿದೆ.
ಕುಂಬಳದಾಳು, ಮೇಕೇರಿ, ಮಡಿಕೇರಿ ತಾಲೂಕು ಅರ್ವತೋಕ್ಲು, ಬಿಳಿಗೇರಿ, ಕಗ್ಗೊಡ್ಲು, ಬಲ್ಲಮಾವಟಿ, ನೆಲಜಿ, ಕುಂಜಿಲ, ವಿರಾಜಪೇಟೆ ತಾಲೂಕಿನ ನಾಂಗಲ ಸೇರಿದಂತೆ ಹಲವು ಕಡೆ ಭರ್ಜರಿ ಮಳೆಯಾಗಿದೆ.
ತನ್ನ ತಂಗಿ ಪನ್ನಂಗಾಲ್ತಮ್ಮೆಯ ಉತ್ಸವದ ದಿನವೇ ಮಾಗುರು ಇಗ್ಗುತ್ತಪ್ಪ ಮಳೆ ತರುತ್ತಾರೆ ಎನ್ನುವ ಕೊಡಗು ಜನತೆಯ ನಂಬಿಕೆಯಂತೆ ಶುಕ್ರವಾರ ಮಳೆಯಾಗಿದೆ.
ವಾರಾಂತ್ಯದಲ್ಲಿ ಕೂಡ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.












Click it and Unblock the Notifications