ಮೂಲ ಸೌಕರ್ಯವಿಲ್ಲದ ಕೊಡಗಿನ ಚೆಕ್ಪೋಸ್ಟ್ಗಳು: ಗಡಿಭಾಗದ ಸಿಬ್ಬಂದಿ ಗೋಳು ಕೇಳುವವರು ಯಾರು..?
ಮಡಿಕೇರಿ, ಏಪ್ರಿಲ್ 06: ಪ್ರತಿ ಚುನಾವಣೆಗಳು ಬಂದಾಗಲೆಲ್ಲ ಕೊಡಗಿನ ಗಡಿಪ್ರದೇಶಗಳ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ನರಕಯಾತನೆ ಅನುಭವಿಸುವುದು ಮಾಮೂಲಿಯಾಗಿದೆ. ರಾತ್ರಿ ಹಗಲೆನ್ನದೆ, ಅರಣ್ಯ ಪ್ರದೇಶಗಳ ನಿರ್ಜನ ಪ್ರದೇಶದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದ ಪ್ರದೇಶದಲ್ಲಿ ಕೆಲಸ ಮಾಡುವುದು ಸುಲಭದ ಕೆಲಸವೇನಲ್ಲ. ಆದರೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೊಡಗು ಕೇರಳ ರಾಜ್ಯದೊಂದಿಗೆ ಸಂಪರ್ಕ ಹೊಂದಿದ್ದು, ಈ ಪ್ರದೇಶಗಳು ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಇಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವೇನಲ್ಲ. ವಿದ್ಯುತ್ ಸಂಪರ್ಕವಿಲ್ಲದೆ, ಕಾಡು ಪ್ರಾಣಿಗಳ ಭಯದಲ್ಲಿ ತಮ್ಮ ಕೆಲಸವನ್ನು ಮಾಡಬೇಕಾಗಿದೆ. ಇನ್ನು ಚುನಾವಣೆ ಹಿನ್ನಲೆಯಲ್ಲಿ ಹಲವು ದಿನಗಳಿಂದ ಸಿಬ್ಬಂದಿಗಳು ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಡಿನ ನಡುವೆ ಯಾವುದೇ ಸೌಲಭ್ಯವಿಲ್ಲದೆ ಕೆಲಸ ಮಾಡುವುದು ಅವರಿಗೆ ಅಷ್ಟು ಸುಲಭವಾಗಿ ಉಳಿದಿಲ್ಲ.

ಕೆಲವು ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಗೆ ಮೂಲ ಸೌಕರ್ಯವೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಕೊಡಗು ಅತ್ತ ದಕ್ಷಿಣಕನ್ನಡ ಜಿಲ್ಲೆ, ಇತ್ತ ಮೈಸೂರು ಮತ್ತು ಹಾಸನ ಜಿಲ್ಲೆಗಳೊಂದಿಗೆ ಗಡಿಯನ್ನು ಹೊಂದಿದೆ. ಈ ಪ್ರದೇಶಗಳ ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಕೇರಳೊಂದಿಗೆ ಸಂಪರ್ಕ ಹೊಂದಿರುವ ಪ್ರದೇಶಗಳ ಚೆಕ್ ಪೋಸ್ಟ್ ಗಳಾದ ಕರಿಕೆ, ಪೆರುಂಬಾಡಿ, ಕಾರ್ಮಾಡು, ಕುಟ್ಟ ಮತ್ತು ಆನೆಚೌಕೂರು ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ.
ಕಾಡು ಪ್ರಾಣಿಗಳ ಹಾವಳಿಯ ಭಯ
ಈ ಎಲ್ಲ ಚೆಕ್ ಪೋಸ್ಟ್ ಗಳು ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ಕಾಡು ಪ್ರಾಣಿಗಳ ಹಾವಳಿ ಇಲ್ಲದಿಲ್ಲ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಜತೆಗೆ ಅಗತ್ಯ ಸಿಬ್ಬಂದಿಗಳನ್ನು ಕೂಡ ನಿಯೋಜನೆ ಮಾಡಬೇಕಾಗುತ್ತದೆ. ಅಂತರ್ ರಾಜ್ಯಗಳ ತಪಾಸಣಾ ಕೇಂದ್ರದಲ್ಲಿ ವಾಹನ ತಪಾಸಣೆ ಮಾಡಿ ವಾಹನಗಳನ್ನು ಕಳುಹಿಸುವುದು ಸುಲಭದ ಕೆಲಸವಲ್ಲ. ಸಿಬ್ಬಂದಿ ಸ್ವಲ್ಪ ಯಾಮಾರಿದರೂ ಚಳ್ಳೆಹಣ್ಣು ತಿನ್ನಿಸಿ ಬಿಡುವ ಸಾಧ್ಯತೆ ಇಲ್ಲದಿಲ್ಲ.
ಇನ್ನು ಗಡಿಭಾಗದ ಪ್ರದೇಶಗಳಿಗೆ ತೆರಳುವುದು ಕೂಡ ಕಷ್ಟವೇ. ಇಲ್ಲಿ ಪಾಳಿಯನುಸಾರ ಕೆಲಸ ಮಾಡಬೇಕಾಗುತ್ತದೆ. ಒಬ್ಬರು ಎಂಟುಗಂಟೆಗಳ ಕಾಲ ಕೆಲಸ ಮಾಡಲೇ ಬೇಕು. ಆದರೆ ಈ ಅವಧಿಯಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡದೆ ಹೋದರೆ ಖಿನ್ನತೆಗೆ ಒಳಗಾಗುವ ಸಾಧ್ಯೆತೆ ಇಲ್ಲದಿಲ್ಲ. ಬಹುತೇಕ ಚೆಕ್ ಪೋಸ್ಟ್ ಗಳಲ್ಲಿ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಜತೆಗೆ ವಾಹನಗಳನ್ನು ತಪಾಸಣೆ ಮಾಡಬೇಕು. ಅವುಗಳ ಸಂಖ್ಯೆ ಸೇರಿದಂತೆ ವಿವರಗಳನ್ನು ಬರೆದುಕೊಳ್ಳಬೇಕು. ಹೀಗೆ ಸಾಕಷ್ಟು ಕೆಲಸಗಳಿರುತ್ತವೆ. ಇದು ಸಿಬ್ಬಂದಿಗೆ ಒತ್ತಡ ತರುತ್ತಿದೆ.

ಸಿಬ್ಬಂದಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯಬೇಕು
ಆನೆ ಚೌಕೂರು ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ ವಿಲ್ಲ ಎಂಬ ಆರೋಪವಿದೆ. ಇಲ್ಲಿ ಕುಳಿತುಕೊಳ್ಳಲು ಕುರ್ಚಿ, ಬರೆಯಲು ಮೇಜು, ಕುಡಿಯಲು ನೀರು ಮತ್ತು ಬೆಳಕಿಲ್ಲ. ಶೌಚಾಲಯಕ್ಕೆ ಕಾಡನ್ನೇ ಅವಲಂಬಿಸಬೇಕಾಗಿದೆ. ಚೆಕ್ ಪೋಸ್ಟ್ ಸುತ್ತಲೂ ಅರಣ್ಯವಾಗಿರುವ ಕಾರಣ ಕಾಡು ಪ್ರಾಣಿಗಳು ಅಡ್ಡಾಡುತ್ತಿರುತ್ತವೆ. ಹೀಗಾಗಿ ಸಿಬ್ಬಂದಿ ಸ್ವಲ್ಪ ಎಚ್ಚರ ತಪ್ಪಿದರೂ ಸಂಕಷ್ಟ ಎದುರಿಸಬೇಕಾಗುತ್ತದೆ.
ಕಾರ್ಮಾಡ್ ಗೇಟ್ ನ್ನು ಸಂಜೆ 6 ಗಂಟೆಯ ನಂತರ ಅರಣ್ಯ ಇಲಾಖೆ ಮುಚ್ಚುವುದರಿಂದ ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ರಾತ್ರಿ ಪಾಳಿಯ ಸಿಬ್ಬಂದಿಗಳು ಸಮೀಪದ ಬಸು ತಂಗುದಾಣವನ್ನೇ ಆಶ್ರಯಿಸಬೇಕಾಗಿದೆ. ಆದರೆ ಆನೆಚೌಕೂರು ಚೆಕ್ ಪೋಸ್ಟ್ ನಾಗರಹೊಳೆ ಅಭಯಾರಣ್ಯದಲ್ಲಿದ್ದು, ಕೊಡಗು ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಹಗಲು ರಾತ್ರಿ ವಾಹನ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಇಲ್ಲಿ ಚುನಾವಣೆ ಸಂದರ್ಭ ಮಾತ್ರವಲ್ಲದೆ, ಪ್ರತಿದಿನವೂ ಸಿಬ್ಬಂದಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯಬೇಕಾಗುತ್ತದೆ.
ಚೆಕ್ ಪೋಸ್ಟ್ಗಳ ಸಿಬ್ಬಂದಿಯತ್ತ ಗಮನಹರಿಸಿ
ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಜೀವ ಪಣಕ್ಕಿಟ್ಟು ಕೆಲಸ ಮಾಡಬೇಕಾಗಿದೆ. ಹೀಗಾಗಿ ಇಲ್ಲಿ ಶಾಶ್ವತ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಗತ್ಯವಿದೆ. ಉಳಿದಂತೆ ಕುಟ್ಟ ಚೆಕ್ ಪೋಸ್ಟ್ ಕೂಡ ವನ್ಯ ಪ್ರಾಣಿಗಳು ಓಡಾಡುವ ಈ ಪ್ರದೇಶವಾಗಿದೆ. ಇಲ್ಲಿಯೂ ಭಯದಿಂದ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿಯಿದೆ. ಒಟ್ಟಾರೆ ಕೊಡಗು ಮತ್ತು ಕೇರಳ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ ಗಳು ದುಸ್ಥಿತಿಯಲ್ಲಿದ್ದು, ಇತ್ತ ಸಂಬಂಧಿಸಿದವರು ಗಮನಹರಿಸುವುದು ಬಹು ಮುಖ್ಯವಾಗಿದೆ.












Click it and Unblock the Notifications