ಕರ್ನಾಟಕ ಪೊಲೀಸರಿಗೆ ಹೊಸ ಮೀಡಿಯಾ ರೂಲ್ಸ್! ಅನುಮತಿ ಇಲ್ಲದೆ ಈ ವಿಷಯ ಮಾಡುವಂತಿಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕದ ಪೊಲೀಸರಿಗೆ ಹಾಗೂ ಮಾಧ್ಯಮಗಳು, ಪತ್ರಕರ್ತರಿಗೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಕ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದು 30 ದಿನಗಳಾಗಿವೆ. ಹೊಸ ಸರ್ಕಾರ ಬಂದ ಮೇಲೆ ವಿವಿಧ ಇಲಾಖೆಗಳ ಸಚಿವರು ಸಹ ಬದಲಾಗಿದ್ದಾರೆ. ಈ ರೀತಿ ಸಚಿವ ಸ್ಥಾನ ಬದಲಾದವರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹವೊಬ್ಬರು. ಇದೀಗ ಗೃಹ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ.
ಪೊಲೀಸ್ ಸಿಬ್ಬಂದಿಯ ಹೊಣೆಗಾರಿಕೆಯನ್ನು ಹೆಚ್ಚಿಸಲು, ತನಿಖೆಯ ಗೌಪ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಹಾಗೂ ಸಾರ್ವಜನಿಕರಿಗೆ ಅಧಿಕೃತ ಮೂಲಗಳ ಮೂಲಕವೇ ನಿಖರ ಮಾಹಿತಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಇಲಾಖೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಳ್ಳುವ ಕುರಿತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಬರಹವನ್ನು ಹಂಚಿಕೊಂಡಿದ್ದಾರೆ. ಈ ಬರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ರಾಜ್ಯ, ರೇಂಜ್, ಕಮಿಷನರೇಟ್, ಜಿಲ್ಲೆ ಹಾಗೂ ವಿಶೇಷ ಘಟಕಗಳ ಮಟ್ಟದಲ್ಲಿ ನೇಮಕಗೊಂಡಿರುವ ಅಧಿಕಾರಿಗಳಿಗೆ ಮಾತ್ರ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡುವ ಅಧಿಕಾರ ಇರುತ್ತದೆ. ಯಾವುದೇ ಪೊಲೀಸ್ ಸಿಬ್ಬಂದಿ ಲಿಖಿತ ಅನುಮತಿ ಇಲ್ಲದೆ ಸ್ವತಂತ್ರವಾಗಿ ಹೇಳಿಕೆ ನೀಡುವುದು, ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವುದು, ತನಿಖೆಗೆ ಸಂಬಂಧಿಸಿದ ಮಾಹಿತಿ, ಆಂತರಿಕ ದಾಖಲೆಗಳು, ಅಪರಾಧ ಸ್ಥಳದ ಫೋಟೋಗಳು, ವಿಡಿಯೊಗಳು ಅಥವಾ ಅಧಿಕೃತ ದಾಖಲೆಗಳನ್ನು ಹಂಚಿಕೊಳ್ಳುವುದು ನಿಷೇಧಿಸಲಾಗಿದೆ.
ಈ ನಿಯಮಗಳು ಸಾಮಾಜಿಕ ಜಾಲತಾಣಗಳಿಗೂ ಅನ್ವಯವಾಗುತ್ತವೆ. ನಡೆಯುತ್ತಿರುವ ತನಿಖೆ, ಗುಪ್ತಚರ ಮಾಹಿತಿ ಹಾಗೂ ಸೂಕ್ಷ್ಮ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅನುಮತಿ ಇಲ್ಲದೆ ಪೋಸ್ಟ್ ಮಾಡುವುದು ಅಥವಾ ಹಂಚಿಕೊಳ್ಳುವುದಕ್ಕೂ ಅವಕಾಶ ಇರುವುದಿಲ್ಲ. ಸ್ಪಷ್ಟ, ವಿಶ್ವಾಸಾರ್ಹ ಮತ್ತು ಹೊಣೆಗಾರಿಕೆಯುತ ಮಾಹಿತಿ ವಿನಿಮಯವೇ ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳಲು ಅತ್ಯಂತ ಅಗತ್ಯವಾಗಿದೆ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಇನ್ನು ಈ ಪೋಸ್ಟ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಯಾವುದೇ ವ್ಯಕ್ತಿಗಳು/ಸಂಸ್ಥೆಗಳು ಅಥವಾ ಸಾಮಾಜಿಕ ಕಾರ್ಯಕರ್ತರು ಅಧಿಕೃತ ಪರಿಶೀಲನೆಯಿಲ್ಲದೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು (ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು!).ಒಂದು ವೇಳೆ ಹಾಗೆ ಮಾಡಿದರೆ, ಸಂಬಂಧಿತ ಪೊಲೀಸ್ ಇಲಾಖೆಯನ್ನು ಪರಿಶೀಲಿಸಬೇಕು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಆಡಳಿತಾತ್ಮಕ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮ ಬೆಳವಣಿಗೆ. ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳಲು ಸ್ಪಷ್ಟ, ವಿಶ್ವಾಸಾರ್ಹ ಮತ್ತು ಕೇಂದ್ರೀಕೃತ ಸಂವಹನವು ನಿಜಕ್ಕೂ ಅವಶ್ಯವಾಗಿದೆ. ಮಾಹಿತಿ ಹಂಚಿಕೊಳ್ಳುವ ಸ್ವಾತಂತ್ರ್ಯ ಮುಖ್ಯವಾದರೂ, ಸೂಕ್ಷ್ಮ ಕಾರ್ಯಾಚರಣೆಗಳು ಹಾಗೂ ಗುಪ್ತಚರ ಮಾಹಿತಿಯ ಗೌಪ್ಯತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.












Click it and Unblock the Notifications