RainFall: ಭಾರತದಲ್ಲಿ ನೈಋತ್ಯ ಮುಂಗಾರು ಮಳೆ ಕೊರತೆ: ಎರಡು ತಿಂಗಳು ಮಳೆ ಆಗದಿದ್ದರೆ ಭಾರೀ ಸಂಕಷ್ಟ, ಈ ವಸ್ತುಗಳ ಬೆಲೆ ಏರಿಕೆ
ಭಾರತದಲ್ಲಿ ನೈಋತ್ಯ ಮುಂಗಾರು ಮಳೆ ದುರ್ಬಲಗೊಂಡಿದ್ದು, ದೇಶದಾದ್ಯಂತ ವಾಡಿಕೆಗಿಂತ ಶೇಕಡಾ 30ರಷ್ಟು ಮಳೆಯ ಕೊರತೆ ಉಂಟಾಗಿದೆ. ವಿಶೇಷವಾಗಿ ಜೂನ್ ತಿಂಗಳಲ್ಲಿ ಮಳೆಯ ಕೊರತೆ ತೀವ್ರವಾಗಿದ್ದು, ಎಲ್ ನಿನೋ (El Nino) ಪರಿಣಾಮದಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಬರ ಪರಿಸ್ಥಿತಿಯ ಆತಂಕ ಶುರುವಾಗಿದೆ. ಜುಲೈ ಮತ್ತು ಆಗಸ್ಟ್ ಮಳೆಯು ದೇಶದ ಕೃಷಿ ಹಾಗೂ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದುರ್ಬಲ ಮಾನ್ಸೂನ್ ಪರಿಣಾಮವಾಗಿ ಅಕ್ಕಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಬಿತ್ತನೆ ವಿಳಂಬವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಸಂಕಷ್ಟವಾಗಲಿದ್ದು, ವಿವಿಧ ಬೆಳೆಗಳ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ. ಮಳೆ ಇಲ್ಲದೆ ನೀರಿನ ಕೊರತೆ, ಅಂತರ್ಜಲ ಬತ್ತುವಿಕೆ ಸೇರಿದಂತೆ ಹಲವು ಆತಂಕಗಳು ಇವೆ.
ಈ ವರ್ಷ ನೈಋತ್ಯ ಮಾನ್ಸೂನ್ ನಿಧಾನವಾಗಿ ಪ್ರವೇಶಿಸಿದೆ. ನೈಋತ್ಯ ಮಾನ್ಸೂನ್ ಪ್ರವೇಶವಾದ ಮೊದಲ ವಾರ ಸಾಮಾನ್ಯವಾಗಿ ಭಾರೀ ಮಳೆ ಆಗುತ್ತದೆ. ಆದರೆ ಈ ಬಾರಿ ನೈಋತ್ಯ ಮಾನ್ಸೂನ್ ಅತ್ಯಂತ ದುರ್ಬಲವಾಗಿದೆ. ಹೀಗಾಗಿ, ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಮಳೆ ಕೊರತೆಯಿಂದ ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯವಾಗಿ ಪ್ರಮುಖ ಖಾರಿಫ್ ಬೆಳೆಗಳ ಬಿತ್ತನೆ ವಿಳಂಬವಾಗಿದೆ.

ಇದು ಆಹಾರ ಬೆಲೆಗಳು ಮತ್ತು ಕೃಷಿ ಉತ್ಪಾದನೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಆದರೆ, ಮುಂದಿನ ಕೆಲವು ವಾರಗಳು ಅತ್ಯಂತ ನಿರ್ಣಾಯಕವಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದೆ ಇದ್ದರೆ, ಈ ವರ್ಷ ಭಾರೀ ಸಂಕಷ್ಟ ಎದುರಾಗಲಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಪ್ರಕಾರ, ಜೂನ್ ಅಂತ್ಯದ ವೇಳೆಗೆ ಭಾರತದಲ್ಲಿ ಶೇ 40% ರಷ್ಟು ಒಟ್ಟಾರೆ ಮಳೆ ಕೊರತೆ ಆಗಿದೆ. ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಜಲಾಶಯಗಳಲ್ಲಿನ ನೀರಿನ ಮಟ್ಟವು ಕಳೆದ ವರ್ಷದ ಮಟ್ಟಕ್ಕಿಂತ ಕಡಿಮೆಯಾಗಿದೆ.
ನೈಋತ್ಯ ಮಾನ್ಸೂನ್ ಭಾರತಕ್ಕೆ ಅತ್ಯಂತ ಅಗತ್ಯ ಯಾಕೆ
ಇನ್ನು ನೈಋತ್ಯ ಮಾನ್ಸೂನ್ ಭಾರತಕ್ಕೆ ಅತ್ಯಂತ ಅಗತ್ಯವಾಗಿದೆ. ಭಾರತದ ಕೃಷಿಕರು ನೈಋತ್ಯ ಮಾನ್ಸೂನ್ನ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ. ಏಕೆಂದರೆ ಇದು ಅಕ್ಕಿ, ಹತ್ತಿ, ದ್ವಿದಳ ಧಾನ್ಯಗಳು, ರಾಗಿ ಮತ್ತು ಎಣ್ಣೆಕಾಳುಗಳಂತಹ ಖಾರಿಫ್ ಬೆಳೆಗಳ ಬಿತ್ತನೆಗೆ ಅವಶ್ಯವಾಗಿದೆ. ರೈತರು ಸಾಮಾನ್ಯವಾಗಿ ಜೂನ್ ಮಳೆಯ ಆಗಮನದೊಂದಿಗೆ ಬಿತ್ತನೆ ಕೆಲಸವನ್ನು ಪ್ರಾರಂಭಿಸುತ್ತಾರೆ. ಆದರೆ ಈ ಬಾರಿ ಮಳೆ ವಿಳಂಬವಾಗಿರುವುದು ಮತ್ತು ದುರ್ಬಲ ಮಾನ್ಸೂನ್ ಮಳೆ ಭಾರತದ ವಿವಿಧ ರಾಜ್ಯಗಳಲ್ಲಿ ಪರಿಣಾಮ ಬೀರಿದೆ. ಕರ್ನಾಟಕದಲ್ಲೂ ನಾಟಿ ಮಾಡುವುದು ನಿಧಾನವಾಗಿದೆ. ಜುಲೈನಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇದು ದೀರ್ಘಾವಧಿಯ ಸರಾಸರಿ ಶೇ. 94% ಕ್ಕಿಂತ ಕಡಿಮೆಯಾಗಿದೆ. ಆದಾಗ್ಯೂ, ಜುಲೈ ಮತ್ತು ಆಗಸ್ಟ್ ಎರಡು ತಿಂಗಳು ಸಹ ಜೂನ್ಗಿಂತ ಹೆಚ್ಚು ಮಳೆ ಆಗುವುದು ಅತ್ಯಂತ ಮುಖ್ಯವಾಗಿದೆ. ಮುಂಬರುವ ವಾರಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಕೃಷಿಗೆ ಅನುಕೂಲವಾಗಲಿದೆ. ಜೂನ್ 25 ರವರೆಗೆ ಖಾರಿಫ್ ಬಿತ್ತನೆ ಸುಮಾರು 18.27 ಮಿಲಿಯನ್ ಹೆಕ್ಟೇರ್ಗಳನ್ನು ಒಳಗೊಂಡಿದೆ, ಇದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ. 23% ಕಡಿಮೆಯಾಗಿದೆ.
ಪ್ರಮುಖ ಬೆಳೆಗಳಲ್ಲಿ, ಭತ್ತ ಬಿತ್ತನೆ 25% ಕ್ಕಿಂತ ಕಡಿಮೆಯಾಗಿ 2.57 ಮಿಲಿಯನ್ ಹೆಕ್ಟೇರ್ಗಳಿಗೆ ತಲುಪಿದೆ. ದ್ವಿದಳ ಧಾನ್ಯಗಳ ಬಿತ್ತನೆ ಸುಮಾರು 30% ಕ್ಕಿಂತ ಕಡಿಮೆಯಾಗಿ 1.49 ಮಿಲಿಯನ್ ಹೆಕ್ಟೇರ್ಗಳಿಗೆ ತಲುಪಿದೆ. ಎಣ್ಣೆಬೀಜ ಬಿತ್ತನೆ 53% ಕ್ಕಿಂತ ಹೆಚ್ಚು ಕುಸಿದು 1.69 ಮಿಲಿಯನ್ ಹೆಕ್ಟೇರ್ಗಳಿಗೆ ತಲುಪಿದೆ. ಬೆಳೆಯ ನೀರಿನ ಅವಶ್ಯಕತೆ ಕಡಿಮೆ ಇದ್ದರೂ ರಾಗಿ ವಿಸ್ತೀರ್ಣ ಸುಮಾರು 12% ರಷ್ಟು ಕಡಿಮೆಯಾಗಿದೆ. ಜೂನ್ ತಿಂಗಳಿನಲ್ಲಿ ಸಾಮಾನ್ಯವಾಗಿ ಒಟ್ಟು ಖಾರಿಫ್ ಬಿತ್ತನೆಯ ಒಂದು ಭಾಗವನ್ನು ಮಾತ್ರ ಇರುತ್ತದೆ. ಆದರೆ ಜುಲೈ ನಾಟಿ ಮಾಡುವವರ ಸಂಖ್ಯೆ ಹೆಚ್ಚು. ಮುಂದಿನ ಕೆಲವು ವಾರಗಳಲ್ಲಿ ಸಕಾಲಿಕ ಮಳೆಯು ಪರಿಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಬಹುದು ಎಂದು ಹೇಳಲಾಗಿದೆ.
ಬ್ಲೂಮ್ಬರ್ಗ್ ಪ್ರಕಾರ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣ ಸೇರಿದಂತೆ ಮಧ್ಯ ಭಾರತ ಮತ್ತು ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಭಾರೀ ಮಳೆ ಕೊರತೆ ಎದುರಾಗಿದೆ. ಈ ರಾಜ್ಯಗಳು ಒಟ್ಟಾಗಿ ಭಾರತದ ಸೋಯಾಬೀನ್, ಕಬ್ಬು, ಹತ್ತಿ, ನೆಲಗಡಲೆ ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ.












Click it and Unblock the Notifications