ಅಯೋಧ್ಯೆ ಬಳಿಕ ಬದರಿನಾಥ ದೇಣಿಗೆ ವಿವಾದ! ಅವ್ಯವಹಾರ ಆರೋಪದ ಬೆನ್ನಲ್ಲೇ ತನಿಖೆಗೆ ಸಮಿತಿ ರಚನೆ
ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಬೆಳಕಿಗೆ ಬಂದಿದೆ. ದೇಶದ ಪ್ರಮುಖ ದೇವಾಲಯದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವ ವಿಚಾರವು ತಣ್ಣಗಾಗುವ ಮೊದಲೇ ದೇಶದ ಮತ್ತೊಂದು ಪ್ರಮುಖ ಹಿಂದೂ ದೇವಾಲಯದಲ್ಲಿ ಭಾರೀ ದೊಡ್ದ ಮಟ್ಟದಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ದೇಣಿಗೆಗಳ ದುರುಪಯೋಗದ ಆರೋಪಗಳ ನಡುವೆ, ಉತ್ತರಾಖಂಡದ ಬದರಿನಾಥ - ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ)ಯು ಬದರಿನಾಥ ಧಾಮದಲ್ಲಿನ ದೇಣಿಗೆಗಳಿಗೆ ಸಂಬಂಧಿಸಿದ ಅಯೋಧ್ಯೆ ಮಾದರಿಯ ಅವ್ಯವಹಾರದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ. ಬದರಿನಾಥ ಧಾಮದಲ್ಲಿನ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಭಾರೀ ಆಕ್ರೋಶಕ್ಕೂ ಕಾರಣವಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಆರೋಪಗಳನ್ನು ದೇವಾಲಯ ಸಮಿತಿ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲು ಆದೇಶಿಸಿದೆ ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಉದ್ಯೋಗಿಗಳಿಂದ ವಿವರಣೆಗಳನ್ನು ಸಹ ಕೇಳಲಾಗಿದೆ. ಭೈರವ ಸೇನಾ ಎಂಬ ಸಂಘಟನೆಯು ಬದರಿನಾಥ ಧಾಮದಲ್ಲಿ ಹಣಕಾಸಿನ ಅಕ್ರಮ ಅಥವಾ ಅಕ್ರಮ ಹಣಕಾಸಿನ ವಹಿವಾಟು ನಡೆದಿದೆ ಎಂದು ಆರೋಪಿಸಿದೆ. ದೇವಾಲಯ ಸಮಿತಿ ಅಧ್ಯಕ್ಷರ ವೈಯಕ್ತಿಕ ಸಹಾಯಕರಿಗೆ ಸಂಬಂಧಿಸಿದ ಆರ್ಥಿಕ ದುರುಪಯೋಗ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಉದ್ಯೋಗಿಯನ್ನು ತಮ್ಮ 'ವೈಯಕ್ತಿಕ ಕಾರ್ಯದರ್ಶಿ' ಎಂದು ಗುರುತಿಸುವ ಹೇಳಿಕೆಗಳನ್ನು ದ್ವಿವೇದಿ ನಿರಾಕರಿಸಿದರು. ಆ ವ್ಯಕ್ತಿಯು ತಮ್ಮ ವೈಯಕ್ತಿಕ ಕಾರ್ಯದರ್ಶಿಯಲ್ಲ ಆದರೆ ಬಿಕೆಟಿಸಿಯ ನಿಯಮಿತ ಸರ್ಕಾರಿ ಉದ್ಯೋಗಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ದೇವಾಲಯ ಸಮಿತಿಯ ಮೂವರು ಮಾಜಿ ಅಧ್ಯಕ್ಷರೊಂದಿಗೆ ವೈಯಕ್ತಿಕ ಸಹಾಯಕರಾಗಿ ಕೆಲಸ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ತನಿಖೆ ಪೂರ್ಣಗೊಂಡ ನಂತರ, ಯಾವುದೇ ಉದ್ಯೋಗಿ ತಪ್ಪಿತಸ್ಥರೆಂದು ಕಂಡುಬಂದರೆ, ನಿಯಮಗಳ ಪ್ರಕಾರ ಅವರ ವಿರುದ್ಧ ಕಠಿಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ದ್ವಿವೇದಿ ಭರವಸೆ ನೀಡಿದ್ದಾರೆ. ಆದರೆ ಅಯೋಧ್ಯೆ ವಿಚಾರವು ಇನ್ನೂ ತಣ್ಣಗಾಗುವ ಮೊದಲೇ ದೇಶದ ಪವಿತ್ರ ಹಾಗೂ ಮತ್ತೊಂದು ಪ್ರಮುಖ ದೇವಾಲಯದಲ್ಲೂ ಇದೇ ಆರೋಪ ಕೇಳಿ ಬಂದಿದೆ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದ ಆರೋಪಗಳ ನಂತರ, ಬದರಿನಾಥ ದೇವಾಲಯದ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎಂದು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಹನ್ ಸಿಂಗ್ ರಂಗದ್ ತಿಳಿಸಿದ್ದಾರೆ. ಮುಂದುವರಿದು ಈಗ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟತೆ ಇಲ್ಲ. ಆದಾಗ್ಯೂ, ಸಮಸ್ಯೆಯ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಂಡು ಅಧ್ಯಕ್ಷರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದೂ ಹೇಳಿದ್ದಾರೆ.
ತನಿಖೆಗೆ ಸಮಿತಿ ರಚನೆ
ಬದರಿನಾಥ ಧಾಮದಲ್ಲಿನ ದೇಣಿಗೆ ಅವ್ಯವಹಾರಗಳ ತನಿಖೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ರಚನೆಯಾದ ನಂತರ, ಅದು ಎಲ್ಲಾ ಸಂಗತಿಗಳು, ಲಭ್ಯವಿರುವ ಪುರಾವೆಗಳು ಮತ್ತು ಸಂಬಂಧಪಟ್ಟವರ ಹೇಳಿಕೆಗಳ ಆಧಾರದ ಮೇಲೆ ವಿವರವಾದ ತನಿಖೆ ನಡೆಸಿ ತನ್ನ ವರದಿಯನ್ನು ಸಲ್ಲಿಸುತ್ತದೆ. ತನಿಖೆಯ ಸಮಯದಲ್ಲಿ ಯಾವುದೇ ಅಕ್ರಮಗಳು ಬೆಳಕಿಗೆ ಬಂದರೆ, ತಪ್ಪಿತಸ್ಥರ ವಿರುದ್ಧ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯ್ದೆ, 1939 ಮತ್ತು ನೌಕರರ ನಡವಳಿಕೆ ನಿಯಮಗಳ ಪ್ರಕಾರ ಅಗತ್ಯ ಶಾಸನಬದ್ಧ ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಈ ವಿಷಯವು ಲಕ್ಷಾಂತರ ಭಕ್ತರ ನಂಬಿಕೆಗೆ ಸಂಬಂಧಿಸಿರುವುದರಿಂದ, ಜನರು ಆಧಾರರಹಿತ ಅಥವಾ ದಾರಿತಪ್ಪಿಸುವ ಆರೋಪಗಳನ್ನು ಮಾಡುವುದನ್ನು ತಡೆಯಬೇಕು ಎಂದು ಸಿಇಒ ಎಚ್ಚರಿಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications