ಯುಪಿ: ಇಂದು ಮೊದಲ ಸಂಪುಟ ಸಭೆ ನಡೆಸಲಿರುವ ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ ಮಾರ್ಚ್ 26: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ (ಮಾರ್ಚ್ 25) ಲಕ್ನೋದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆದಿತ್ಯನಾಥ್ ಅವರು ಶನಿವಾರ ಬೆಳಗ್ಗೆ 11:30 ಕ್ಕೆ ಲಕ್ನೋದ ಯೋಜನಾ ಭವನದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ತಮ್ಮ ಮೊದಲ ಕ್ಯಾಬಿನೆಟ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ಹಂಗಾಮಿ ಸ್ಪೀಕರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿನ್ನೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿದ ಬೆನ್ನಲ್ಲೇ ಶುಕ್ರವಾರದಂದು ರಾಜ್ಯದಲ್ಲಿ ಸಚಿವ ಸಂಪುಟದ ಮೊದಲ ಸಭೆ ನಡೆಸಿದರು. ಈ ಪ್ರಾಸ್ತಾವಿಕ ಸಭೆಯಲ್ಲಿ "ರಾಷ್ಟ್ರೀಯತೆ, ಸುರಕ್ಷತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ತಮ್ಮ ನಂಬಿಕೆಯನ್ನು ಪುನಃ ಸ್ಥಾಪಿಸಿದ್ದಕ್ಕಾಗಿ ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ಜನಸೇವೆಯೇ ಅತ್ಯಂತ ಪುಣ್ಯ ಕಾರ್ಯವಾಗಿದ್ದು, ಬದ್ಧತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವುದರಿಂದ ಸಂತೃಪ್ತಿ ದೊರೆಯುತ್ತದೆ" ಎಂದರು.
ಯುಪಿ: ಯೋಗಿ ಆದಿತ್ಯನಾಥ್ ಯಾರು? ಸನ್ಯಾಸಿ-ರಾಜಕಾರಣಿಯ ಪ್ರಯಾಣ
ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಅತ್ಯಂತ ಮುಖ್ಯವಾದುದನ್ನು ಗಮನಿಸಿದ ಮುಖ್ಯಮಂತ್ರಿಗಳು ಕಾರ್ಯಕ್ಷಮತೆ ಆಧಾರಿತ ಕೆಲಸಗಳತ್ತ ಗಮನ ಹರಿಸಬೇಕು ಎಂದು ಹೇಳಿದರು. ಸಚಿವರು ತಮ್ಮ ಖಾಸಗಿ ಸಿಬ್ಬಂದಿ ಮೇಲೆ ವಿಶೇಷ ನಿಗಾ ಇಡಬೇಕು. ಉಸ್ತುವಾರಿ ಸಚಿವರುಗಳು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಅಭಿವೃದ್ಧಿ ಕಾರ್ಯಗಳ ಭೌತಿಕ ಪರಿಶೀಲನೆ ಮಾಡಬೇಕು ಮತ್ತು ಜನರಿಂದ ಪ್ರತಿಕ್ರಿಯೆ ಪಡೆಯಬೇಕು ಎಂದು ಆದಿತ್ಯನಾಥ್ ಹೇಳಿದರು.
ಯೋಗಿ ಆದಿತ್ಯನಾಥ್ ಶುಕ್ರವಾರ ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಸಮಾರಂಭದಲ್ಲಿ ಇತರ 52 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 60 ಮಂತ್ರಿಗಳು ಇರಬಹುದು.
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಗೆಲ್ಲಲು ವಿಫಲರಾದ ಕೇಶವ್ ಪ್ರಸಾದ್ ಮೌರ್ಯ ಅವರು ಮತ್ತೆ ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದಿತ್ಯನಾಥ್ ಸಂಪುಟದಲ್ಲಿ ದಿನೇಶ್ ಶರ್ಮಾ ಬದಲಿಗೆ ಬ್ರಜೇಶ್ ಪಾಠಕ್ ಕೂಡ ಉಪ ಮುಖ್ಯಮಂತ್ರಿಯಾಗಿದ್ದಾರೆ. 50,000 ಜನರನ್ನು ಹೊಂದಬಹುದಾದ ಲಕ್ನೋ ಏಕನಾ ಕ್ರೀಡಾಂಗಣದಲ್ಲಿ ಈ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ. ಇದರಲ್ಲಿ ಕೇಂದ್ರದ ಉನ್ನತ ಸಚಿವರು, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ಉದ್ಯಮಿಗಳು ಮತ್ತು ಮನರಂಜನಾ ಪ್ರಪಂಚದ ಗಣ್ಯರು ಭಾಗವಹಿಸಿದ್ದರು.
ಇದರಿಂದಾಗಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮದ ವೇಳೆ ಉತ್ಸಾಹಿ ಬಿಜೆಪಿ ಬೆಂಬಲಿಗರು 'ಮೋದಿ, ಮೋದಿ' ಎಂದು ಘೋಷಣೆ ಕೂಗಿದರು. ಮುಖ್ಯಮಂತ್ರಿಯನ್ನು ಹೊರತುಪಡಿಸಿ, ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 18 ಕ್ಯಾಬಿನೆಟ್ ಸಚಿವರು, 14 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 20 ಇತರ ರಾಜ್ಯ ಸಚಿವರಿಗೆ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದರು.
Recommended Video
ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 403 ಸ್ಥಾನಗಳಲ್ಲಿ 273 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 255 ಸ್ಥಾನಗಳನ್ನು ಪಡೆದರೆ, ಅದರ ಮಿತ್ರಪಕ್ಷಗಳಾದ ನಿಶಾದ್ ಪಕ್ಷ ಮತ್ತು ಅಪ್ನಾ ದಳ (ಎಸ್) 18 ಸ್ಥಾನಗಳನ್ನು ಗಳಿಸಿದೆ. ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಯುಪಿಯಲ್ಲಿ ಪಕ್ಷವೊಂದು ಸತತ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಮರಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ.