ವಿಶ್ಲೇಷಣೆ : ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಸಕಾಲವಲ್ಲ!
Recommended Video

ಬೆಂಗಳೂರು, ನವೆಂಬರ್ 16 : ಐದು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಆರಂಭವಾಗಿದೆ. 2019ರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ನಾಯಕತ್ವ ಬದಲಾವಣೆ ಹೈಕಮಾಂಡ್ ನಾಯಕರು ಮುಂದಾಗಲಿದ್ದಾರೆಯೇ?.
ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ನಾಯಕರು ಸ್ಪಷ್ಟಪಡಿಸಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಹಲವು ನಾಯಕರ ಹೆಸರುಗಳನ್ನು ಪಕ್ಷದವಲಯದಿಂದಲೇ ತೇಲಿ ಬಿಡಲಾಗುತ್ತಿದೆ.
ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ಬೇರೆ ನಾಯಕರು ಯಾರು? ಎಂಬ ಪ್ರಶ್ನೆಗೆ ಬಿಜೆಪಿ ನಾಯಕರ ಬಳಿಯಲ್ಲಿಯೇ ಉತ್ತರವಿಲ್ಲ. ಲೋಕಸಭೆ ಚುನಾವಣೆ ಹತ್ತಿರವಿರುವಾಗ ಪ್ರಬಲ ಸಮುದಾಯಕ್ಕೆ ಸೇರಿದ ನಾಯಕನನ್ನು ಬದಲಾವಣೆ ಮಾಡುವುದು ಪಕ್ಷ ಮಾಡುವ ದೊಡ್ಡ ತಪ್ಪು.
ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾಡಲು ಇದು ಸಕಾಲವಲ್ಲ. ಪಕ್ಷದ ಯಾವುದೇ ಗುಂಪು ಬೇರೆ ನಾಯಕರ ಹೆಸರನ್ನು ತೇಲಿ ಬಿಡುತ್ತಿದ್ದರೆ ಅದು ಅವರು ಮಾಡುತ್ತಿರುವ ತಪ್ಪಾಗಿದೆ. ಹೈಕಮಾಂಡ್ ಈ ವಿಚಾರದಲ್ಲಿ ಏನು ಹೇಳುತ್ತದೆ? ಎಂದು ಕಾದು ನೋಡಬೇಕಿದೆ. ನಾಯಕತ್ವ ಬದಲಾವಣೆ ಏಕೆ ಬೇಡ ಎಂದು ಚಿತ್ರಗಳಲ್ಲಿ ನೋಡಿ....

ವಿಧಾನಸಭೆ ಚುನಾವಣೆ ಹಿನ್ನಡೆ
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನುಗಳಿಸುವ ಗುರಿ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿತ್ತು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ಕೊಟ್ಟು ಪ್ರಚಾರ ಮಾಡಿದರು. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೂ ಬಂದಿದ್ದು 104 ಸೀಟುಗಳು ಮಾತ್ರ. ಸ್ಪಷ್ಟ ಬಹುಮತವನ್ನು ಪಡೆಯಲು ಪಕ್ಷ ವಿಫಲವಾಯಿತು.

ಸರ್ಕಾರ ರಚನೆ ಕಸರತ್ತು
104 ಸೀಟು ಪಡೆದರೂ ಬಿಜೆಪಿ ಸರ್ಕಾರ ರಚನೆ ಮಾಡಿತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ, ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ ಇಲ್ಲದೇ ಸರ್ಕಾರ 2 ದಿನದಲ್ಲಿ ಪತನಗೊಂಡಿತು. ಈ ಬೆಳವಣಿಗೆ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿತು.

ಜಯನಗರ, ಆರ್.ಆರ್.ನಗರ ಸೋಲು
ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಜಯನಗರ ಮತ್ತು ರಾಜರಾಜೇಶ್ವರಿ ನಗರ ಚುನಾವಣೆ ನಡೆಯಿತು. ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಸೋಲು ಕಂಡಿತು. ತನ್ನ ವಶದಲ್ಲಿದ್ದ ಜಯನಗರ ಕ್ಷೇತ್ರವನ್ನು ಬಿಜೆಪಿ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿತು. ಈ ಫಲಿತಾಂಶ ಪ್ರಕಟವಾದ ತಕ್ಷಣ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಗಳು ಆರಂಭವಾಯಿತು.

ಐದು ಕ್ಷೇತ್ರಗಳ ಉಪ ಚುನಾವಣೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಿವೆ. ನವೆಂಬರ್ನಲ್ಲಿ 3 ಲೋಕಸಭಾ ಕ್ಷೇತ್ರ ಮತ್ತು 2 ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ನಡೆಯಿತು. ಶಿವಮೊಗ್ಗ ಹೊರತು ಪಡಿಸಿ ಯಾವ ಕ್ಷೇತ್ರದಲ್ಲಿಯೂ ಬಿಜೆಪಿಗೆ ಗೆಲಲ್ಲು ಸಾಧ್ಯವಾಗಲಿಲ್ಲ. ಅದರಲ್ಲೂ ಭಾರೀ ಪೈಪೋಟಿ ಇದ್ದ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಪಕ್ಷ ವಿಫಲವಾಯಿತು.

ಈಗ ಬದಲಾವಣೆ ಬೇಡ
ವಿಧಾನಸಭೆ ಚುನಾವಣೆ ಬಳಿಕ ಪಕ್ಷ ರಾಜ್ಯದಲ್ಲಿ ಸಾಲು-ಸಾಲು ಹಿನ್ನಡೆ ಕಂಡಿದೆ. ಆದ್ದರಿಂದ, ಈಗ ನಾಯಕತ್ವ ಬದಲಾವಣೆ ಬೇಡ ಎಂಬುದು ಕೆಲವು ನಾಯಕರು ನಿಲುವು. 2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನದಲ್ಲಿ ಜಯಗಳಿಸಬೇಕು ಎಂಬುದು ಬಿಜೆಪಿಯ ಗುರಿ. ಅದನ್ನು ಸಾಧಿಸಬೇಕಾದರೆ ನಾಯಕತ್ವ ಬದಲಾವಣೆಯಂತಹ ಕಾರ್ಯಕ್ಕೆ ಬಿಜೆಪಿ ಸದ್ಯಕ್ಕೆ ಕೈ ಹಾಕಬಾರದು. ಬಿಜೆಪಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕು.












Click it and Unblock the Notifications