ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು?
ಬೆಂಗಳೂರು, ನವೆಂಬರ್ 07 : 2019ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ವಿಧಾನಸಭೆ ಚುನಾವಣೆ ಬಳಿಕ ನಡೆದ ಸಾಕಷ್ಟು ಬೆಳವಣಿಗೆಗಳು ನಾಯಕತ್ವ ಬದಲಾವಣೆ ಮಾಡಿ ಎಂಬ ಸಂದೇಶವನ್ನು ಹೈಕಮಾಂಡ್ಗೆ ರವಾನೆ ಮಾಡಿದೆ.
5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಬಿಜೆಪಿ ನಾಯಕರಿಗೆ ಮುಖಭಂಗ ಉಂಟಾಗಿದೆ. ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ರಾಮನಗರದಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು, ಸೋಲಾಗಿದೆ.
2019ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಹೀಗೆ ಕೆಲಸ ಮಾಡಿದರೆ ಸಾಲದು ಎಂಬದು ಹೈಕಮಾಂಡ್ ನಾಯಕರ ಸಂದೇಶವಾಗಿದೆ. ಮತ್ತೊಂದು ಕಡೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೆಸ್-ಜೆಡಿಎಸ್ ಒಂದಾಗಿವೆ.
ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಹಳೆಯ ಸುದ್ದಿ. 2018ರ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯ ಘಟಕ ಹಲವಾರು ವಿಚಾರಗಳಲ್ಲಿ ವಿಫಲವಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ನಾಯಕತ್ವ ಬದಲಾವಣೆ ಮಾಡಿ ಎಂಬ ಬೇಡಿಕೆ ಮುಂದಿಡಲಾಗುತ್ತಿದೆ.

ಭಾನುಪ್ರಕಾಶ್ ಅಸಮಾಧಾನ
ಬಿ.ಎಸ್.ಯಡಿಯೂರಪ್ಪ ವಿರುದ್ಧ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ ಅಸಮಾಧಾನವಿದೆ. ಬಿಜೆಪಿ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಎಂ.ಬಿ.ಭಾನುಪ್ರಕಾಶ್ ನಿರಾಕರಿಸಿದ್ದಾರೆ. 'ಕೆಜೆಪಿಯಿಂದ ಬಂದ ಯಡಿಯೂರಪ್ಪ ಅವರನ್ನು ಒಪ್ಪಿಕೊಂಡೆವು. ಯಡಿಯೂರಪ್ಪ ಅವರಿಗೆ ವರ್ತನೆ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದೆವು. ಸಲಹೆ ಕೊಟ್ಟವರನ್ನು ಕೆಟ್ಟವರಾಗಿ ಮಾಡಿದ್ದಾರೆ' ಎಂದು ಭಾನುಪ್ರಕಾಶ್ ಆರೋಪ ಮಾಡಿದ್ದಾರೆ.

ಏಕಪಕ್ಷೀಯವಾದ ನಿರ್ಧಾರ
ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಡಾ.ಸಿದ್ದರಾಮಯ್ಯ, ರಾಮನಗರ ಉಪ ಚುನಾವಣೆಗೆ ಎಲ್.ಚಂದ್ರಶೇಖರ್ ಅವರನ್ನು ಅಭ್ಯರ್ಥಿಗಳಾಗಿ ಮಾಡುವಾಗ ಯಡಿಯೂರಪ್ಪ ಅವರು ಪಕ್ಷದ ಇತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಚುನಾವಣೆಗೆ ಎರಡು ದಿನಗಳು ಇರವಾಗ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರಿದರು. ಈ ಬೆಳವಣಿಗೆಗಳಿಗೆ ಯಡಿಯೂರಪ್ಪ ಅವರೇ ಹೊಣೆ ಎಂದು ಆರೋಪ ಮಾಡಲಾಗುತ್ತಿದೆ.

ಸಮಿತಿಯಲ್ಲಿ ತೀರ್ಮಾನ ಕೈಗೊಂಡಿಲ್ಲ
ಬಿಜೆಪಿಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮುಖರ ಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಗೋವಿಂದ ಕಾರಜೋಳ, ಆರ್.ಅಶೋಕ, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಸಿ.ಟಿ.ರವಿ ಇದ್ದಾರೆ. ಆದರೆ, ಈ ಸಮಿತಿಯಲ್ಲಿ ಚರ್ಚಿಸದೇ ಏಕ ಪಕ್ಷೀಯವಾಗಿ ಹಲವು ತೀರ್ಮಾನಗಳನ್ನು ಯಡಿಯೂರಪ್ಪ ಕೈಗೊಳ್ಳುತ್ತಿದ್ದಾರೆ ಎಂಬುದು ಆರೋಪ.

ಡಿಸೆಂಬರ್ನಲ್ಲಿ ಅಮಿತ್ ಶಾ ಆಗಮನ
ರಾಜ್ಯ ಘಟಕದ ಹಲವು ವಿಚಾರಗಳು ಮತ್ತು 2019ರ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ನಡೆಸಲು ಡಿಸೆಂಬರ್ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆಗ ನಾಯಕತ್ವ ಬದಲಾವಣೆ ಬಗ್ಗೆಯೂ ಮಹತ್ವದ ಮಾತುಕತೆ ನಡೆಸಿ, ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಅಧ್ಯಕ್ಷರನ್ನು ಬದಲಾಯಿಸಿ
ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರು, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರು ಸಹ ಅವರೇ. ಎರಡು ಹುದ್ದೆಯಲ್ಲಿ ಅವರು ಇದ್ದಾರೆ. ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿ ಎಂಬ ಕೂಗು ಕೆಲವು ತಿಂಗಳ ಹಿಂದೆ ಕೇಳಿಬಂದಿತ್ತು. ಈಗ ಪುನಃ ಮತ್ತೆ ನಾಯಕತ್ವ ಬದಲಾವಣೆ ಪ್ರಶ್ನೆ ಎದ್ದಿದೆ. ಏನಾಗಲಿದೆ? ಎಂದು ಕಾದು ನೋಡಬೇಕು.












Click it and Unblock the Notifications