ಮಂಡ್ಯ : ಮದ್ದೂರಮ್ಮನ ಜಾತ್ರೆಗೆ ಸಾಕ್ಷಿಯಾದ ಭಕ್ತರು
ಮಂಡ್ಯ, ಏಪ್ರಿಲ್ 28 : ಇತಿಹಾಸ ಪ್ರಸಿದ್ಧ ಶ್ರೀ ಮದ್ದೂರಮ್ಮನವರ ಜಾತ್ರಾ ಮಹೋತ್ಸವ ಕೊಂಡೋತ್ಸವದೊಂದಿಗೆ ಆರಂಭಗೊಂಡಿದೆ. ದೇವಿಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಶ್ರೀ ಮದ್ದೂರಮ್ಮನವರ ಕೊಂಡ ಮಹೋತ್ಸವದ ಮುನ್ನಾ ದಿನದಂದು ರಾತ್ರಿ ದೇವಾಲಯಕ್ಕೆ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾರ ರಾತ್ರಿ ಮದ್ದೂರಮ್ಮನ ಕೊಂಡಕ್ಕೆ ಅಗ್ನಿ ಸ್ಪರ್ಶ ಪೂಜೆ ಮಾಡಲಾಯಿತು. [ತುಮಕೂರು : ಕೊಂಡ ಹಾಯುವ ವೇಳೆ 30 ಜನರಿಗೆ ಗಾಯ]

ರಾತ್ರಿ 1 ಗಂಟೆಗೆ ಮಂಗಳ ವಾದ್ಯ, ತಮಟೆ, ನಗಾರಿಗಳೊಡನೆ ಶಿಂಷಾ ನದಿಗೆ ಹೋಗಿ ನದಿಯ ದಡದಲ್ಲಿ ಶ್ರೀ ಮದ್ದೂರಮ್ಮನವರಿಗೆ 101 ಬಂಟರಿಗೆ ಬಾಳೆ ಎಲೆ ನೈವೇದ್ಯ ಅರ್ಪಿಸಲಾಯಿತು. ಬಳಿಕ ಚಂದ್ರ ಭಂಡಾರ, ಎಡಪೂಜೆ, ಹೂ ಹೊಂಬಾಳೆ ಪೂಜೆ, ಕರಗ ಪೂಜೆ ಸಾಂಗವಾಗಿ ನಡೆಯಿತು. [ಮೈಸೂರು : ಕಟ್ಟೆಮಳಲವಾಡಿ ಸಿಡಿ ಉತ್ಸವಕ್ಕೆ ಸಾಕ್ಷಿಯಾದ ಭಕ್ತರು]
ನಂತರ ಮದ್ದೂರಮ್ಮ ದೇವಿಯ ಪೂಜಾ ಉತ್ಸವ ಮಟ್ಮನೆಗೆ ಆಗಮಿಸಿ, ಅಲ್ಲಿಂದ ಮತ್ತೆ ದೇವರು ಸಿದ್ಧಗೊಂಡು ಅಲ್ಲಿಂದ ಸೋಮೇಗೌಡರ ಬೀದಿ, ಮೇಗಲ ಬೀದಿ ಮೂಲಕ ದೇಗುಲಕ್ಕೆ ಆಗಮಿಸಿತು. ಬಳಿಕ ಇದೇ ಪ್ರಥಮ ಬಾರಿಗೆ ಪೂಜಾರಿ ಶಿವಣ್ಣ ಕೊಂಡವನ್ನು ಹಾಯುವ ಮೂಲಕ ಕೊಂಡೋತ್ಸವವನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನೂರಾರು ಯುವಕರು, ಮಹಿಳೆಯರು, ಭಕ್ತಾದಿಗಳ ಹರ್ಷೋದ್ಘಾರ ಜಯಕಾರದ ನಡುವೆ ಕೊಂಡೋತ್ಸವ ನಡೆಯಿತು.












Click it and Unblock the Notifications