ರಾಜ್ಯಕ್ಕಾದ ಅನ್ಯಾಯ ಪ್ರಶ್ನಿಸದ ಸಂಸದರನ್ನು ಆಯ್ಕೆ ಮಾಡಬೇಡಿ: ಸಿದ್ದರಾಮಯ್ಯ ಮನವಿ
ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ರಾಜ್ಯದ 27 ಸಂಸದರು ಪ್ರಶ್ನಿಸದಿದ್ದ ಮೇಲೆ ಅವರನ್ನೇಕೆ ಮತ್ತೆ ಸಂಸತ್ತಿಗೆ ಕಳುಹಿಸಬೇಕು. ಕರ್ನಾಟಕಕ್ಕೆ ನಿಜವಾಗಿ ನ್ಯಾಯ ಸಿಗುವಂತಾಗಬೇಕಾದರೆ ಕಾಂಗ್ರೆಸ್ ಸಂಸದರನ್ನೇ ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ-2 ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಹಕಾರದಿಂದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುಮಲತಾ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರೂ ಸೇರಿ 27 ಮಂದಿ ಬಿಜೆಪಿ ಸಂಸದರಿದಿದರೂ, ರಾಜ್ಯಕ್ಕೆ ಎಲ್ಲ ರೀತಿಯಲ್ಲೂ ಅನ್ಯಾಯವಾಗುತ್ತಲೇ ಇದ್ದರೂ ಯಾರೂ ಪ್ರಶ್ನೆ ಮಾಡಲಿಲ್ಲ. ಇದನ್ನು ಜನತೆ ಗಂಭೀರವಾಗಿ ಪರಿಗಣಿಸಬೇಕು ಎಂದರು.

ನಾಡಿನ ಸಮಸ್ಯೆಗಳು, ದಲಿತರು, ಹಿಂದುಳಿದವರು, ರೈತರ ಸಮಸ್ಯೆಗಳನ್ನು ಪ್ರಸ್ತಾಪ ಮಾಡುವವರನ್ನು ಆಯ್ಕೆ ಮಾಡಿ ಕಳುಹಿಸಿದಲ್ಲಿ ಕರ್ನಾಟಕಕ್ಕೆ ನಿಜವಾಗಲೂ ನ್ಯಾಯ ಸಿಗುತ್ತೆ. ಇಲ್ಲದಿದ್ದರೆ ಈ ಬಾರಿ ಆದಂತೆ ಮುಂದೆಯೂ ಆಗುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳು ಸಹಕಾರಿ
ನಾವು ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ಕೊಟ್ಟಿದ್ದೇವೆ. ಗೃಹಜ್ಯೋತಿ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಿದ್ದೇವೆ. ಇದರಿಂದಾಗಿ ನಾಡಿನಾದ್ಯಂತ ಜನತೆಗೆ ಸಹಾಯವಾಗಿದೆ ಎಂದು ಹೇಳಿದರು.
ಶಕ್ತಿ ಯೋಜನೆಯಲ್ಲಿ 1.91 ಕೋಟಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ 1.17 ಕೋಟಿ ಮನೆಯ ಯಜಮಾನಿಗೆ 22 ಸಾವಿರ ಕೊಡುವ ಕೆಲಸ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ಬಿಜೆಪಿಯವರು ಮೋಸ ಮಾಡಿದರೂ ಸಹ ಪ್ರತಿಯೊಬ್ಬರಿಗೂ ₹170 ಗಳಂತೆ ಒಂದು ಕುಟುಂಬದಲ್ಲಿ ಐದು ಜನರಿದ್ದರೆ ₹850 ಕೊಡುವ ಕೆಲಸ ಮಾಡುತ್ತಿದ್ದೇವೆ. ಪದವೀಧರರಿಗೆ ₹3 ಸಾವಿರ, ಡಿಪ್ಲೋಮಾದಾರರಿಗೆ ₹1500 ಕೊಡುತ್ತಿದ್ದೇವೆ ಎಂದು ಹೇಳಿದರು.
ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ
ಧರ್ಮ, ಜಾತಿಯ ಹೆಸರಲ್ಲಿ ನರೇಂದ್ರಮೋದಿಯವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಯಾರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಅವರನ್ನು ಬಿಟ್ಟು ಯಾರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಅವರಿಗೆ ಬೆಂಬಲ ನೀಡಬೇಕು. ನಮ್ಮ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಇಲ್ಲಿನ ಸಚಿವ ಚೆಲುವರಾಯಸ್ವಾಮಿ ಹೇಳಿದ್ದರು. ಅವರ ಮನವಿ ಮೇರೆಗೆ ತಕ್ಷಣ ₹50 ಕೋಟಿ ಹಣ ಬಿಡುಗಡೆ ಮಾಡಿ ಮೈಷುಗರ್ ಚಾಲನೆ ಮಾಡಿದ್ದೇವೆ. ಪದೇ ಪದೇ ದುರಸ್ಥಿಗೆ ಹಣ ಕೊಡಲಾಗದು ಎಂಬುದನ್ನು ಮನವರಿಕೆ ಮಾಡಿಕೊಂಡು ಕಾರ್ಖಾನೆ ಇರುವ ಸ್ಥಳದಲ್ಲೇ ಹೊಸ ಕಾರ್ಖಾನೆ ಸ್ಥಾಪನೆಗೆ ಬಜೆಟ್ನಲ್ಲಿ ಘೋಷಣೆ ಮಾಡಿದ್ದೇವೆ ಎಂದರು.
ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಅಗತ್ಯ ಎಂದು ಇಲ್ಲಿನ ಸಚಿವರು, ಶಾಸಕರು ಮಾಡಿದ ಮನವಿಗೆ ಸ್ಪಂದಿಸಿ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದೇವೆ. ಹೇಮಾವತಿ ಮತ್ತು ವಿಶ್ವೇಶ್ವರಯ್ಯ ನಾಲಾ ಜಾಲಗಳ ಆಧುನೀಕರಣ ಮಾಡಿ ಕೊನೇ ಬಯಲಿನ ಜನರಿಗೆ ನೀರು ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.












Click it and Unblock the Notifications