ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ತಂದೆ ಸ್ಥಾನದಲ್ಲಿ ನಿಂತು ಸಚಿವ ಎನ್.ಚಲುವರಾಯಸ್ವಾಮಿ ಅವರು ನಮಗೆ ಸಹಕಾರ ಕೊಟ್ಟಿದ್ದರು. ಅದರ ಋಣ ತೀರಿಸಲು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದಾಗಿ ನಟ ದರ್ಶನ್ ಹೇಳಿದರು.
ನಾಗಮಂಗಲ ತಾಲೂಕಿನ ಬೆಳ್ಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಣೇಗೌಡ (ಸ್ಟಾರ್ ಚಂದ್ರು) ಪರ ಮಂಗಳವಾರ ನಡೆಸಿದ ಭರ್ಜರಿ ರೋಡ್ಶೋನಲ್ಲಿ ಮಾತನಾಡಿ, ಸುಮಲತಾ ಅಂಬರೀಷ್ ಪರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಜಿಲ್ಲೆಯಾದ್ಯಂತ ಸಹಕಾರ ಮಾಡಿದರು, ಸುಮಲತಾ ಅಂಬರೀಷ್ ಅವರ ಗೆಲುವಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರ ಸಹಕಾರವೂ ಇತ್ತು, ಆದ್ದರಿಂದ ನಾನು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತಯಾಚನೆ ಮಾಡುತ್ತಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣೇಗೌಡ ಉದ್ಯಮಿಯಾಗಿದ್ದು, ತಮಗೆ ಪರಿಚಿತರಾಗಿದ್ದಾರೆ. ಇಂತಹ ಸರಳ ಸಮಾಜಿಕ ಕಳಕಳಿ ಉಳ್ಳ ವ್ಯಕ್ತಿ ರಾಜಕೀಯ ಕ್ಷೇತ್ರಕ್ಕೆ ಬಂದಿರುವುದು ತುಂಬಾ ಒಳ್ಳೆಯ ಸಂಗತಿ. ಆದ್ದರಿಂದ ಜಿಲ್ಲೆಯ ಜನತೆ ಹಾಗೂ ನನ್ನ ಅಭಿಮಾನಿಗಳು ಸ್ಟಾರ್ ಚಂದ್ರು ಅವರಿಗೆ ಮತ ಕೊಟ್ಟು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ತಾಲೂಕಿನ ಕನ್ನಾಘಟ ಗ್ರಾಮದ ವೆಂಕಟರಮಣೇಗೌಡ ಉದ್ಯಮಿಯಾಗಿ ರಾಜ್ಯದಲ್ಲಿ ಬೆಳೆದು ಸಮಾಜ ಸೇವೆ ಮಾಡಬೇಕೆಂದು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ಇದೇ ತಾಲೂಕಿನ ಮಗನಾಗಿರುವ ಚಂದ್ರುಗೆ ತಾಲೂಕಿನ ಜನತೆ ಅತೀ ಹೆಚ್ಚು ಮತಗಳನ್ನು ನೀಡಿ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಸಮಗ್ರ ಅಭಿವೃದ್ದಿಯ ಭರವಸೆ
ಬೆಳ್ಳೂರು ಪಟ್ಟಣ ಪಂಚಾಯಿತಿಗೆ ₹25ಕೋಟಿ ವಿಶೇಷ ಅನುದಾನ ತಂದು ಬೆಳ್ಳೂರು ಪಟ್ಟಣವೂ ಸೇರಿದಂತೆ ಪ.ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಭೂತಸೌಕರ್ಯಗಳೊಂದಿಗೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಾಗಮಂಗಲ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗೆ ಸುಸಜ್ಜಿತವಾಗಿ ಸ್ಥಳಾವಕಾಶ ಕಲ್ಪಿಸಿಕೊಡುವ ಜೊತೆಗೆ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಾಗುವುದು. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಜನರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಾನು ನಿಮ್ಮೂರಿನ ಮಗ, ಗ್ರಾಮೀಣ ಪ್ರದೇಶದವನು, ಜಿಲ್ಲೆಯ ಎಲ್ಲ ಜನರ ಸೇವೆ ಮಾಡಲು ಬಂದಿದ್ದೇನೆ. ದಯಮಾಡಿ ಮತ ಕೊಟ್ಟು ಆಶೀರ್ವದಿಸಬೇಕು. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಬಡವರ ದೀನ ದಲಿತರ ಪರವಾಗಿದ್ದು, ಎಲ್ಲ ವರ್ಗದ ಜನರ ಕೈಹಿಡಿಯಲಿವೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಕೊಟ್ಟು ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications