ಜೋಫ್ರಾ ಆರ್ಚರ್ ತಕ್ಕ ಪಾಠ ಕಲಿಸಿದ್ದಾರೆ: ವೈಭವ್ ಸೂರ್ಯವಂಶಿ ಕೆಣಕಿದ ಆರ್ಸಿಬಿ ಮಾಜಿ ಆಟಗಾರ
Vaibhav Sooryavanshi: ಸದ್ಯ ಟೀಮ್ ಇಂಡಿಯಾವು ಇಂಗ್ಲೆಂಡ್ ಪ್ರವಾಸದಲ್ಲಿದೆ. ಈಗಾಗಲೇ ಟಿ20 ಸರಣಿ ಕೈಚೆಲ್ಲಿರುವ ಭಾರತ ತಂಡ ವೈಟ್-ವಾಷ್ನಿಂದ ತಪ್ಪಿಸಿಕೊಳ್ಳಲು ಶನಿವಾರ (ಜುಲೈ 11) ನಡೆಯುವ ಪಂದ್ಯದಲ್ಲಿ ಗೆಲ್ಲಲ್ಲೇಬೇಕಿದೆ. ಇದಕ್ಕೂ ಮುನ್ನ ಆರ್ಸಿಬಿ ಮಾಜಿ ಆಟಗಾರ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಚುಚ್ಚು ಮಾತುಗಳನ್ನಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಭಾರತದ ಉದಯೋನ್ಮುಖ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಕಠಿಣ ಸವಾಲು ಎದುರಾಗಿದೆ. ಇಂಗ್ಲೆಂಡ್ ತಂಡದ ಅನುಭವಿ ಮತ್ತು ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಚಾಣಾಕ್ಷತನ ತಂತ್ರಕ್ಕೆ ಸಿಲುಕಿ ಸೂರ್ಯವಂಶಿ ಸತತವಾಗಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಮೊಯಿನ್ ಅಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನ ಗುಣಮಟ್ಟದ ಕುರಿತು ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬ್ಯಾಟಿಂಗ್ನಲ್ಲಿ ಎಡವುತ್ತಿರುವ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಅವರು ತಮ್ಮ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೇಶಿ ಕ್ರಿಕೆಟ್ನಲ್ಲಿ ಉತ್ತಮ ರನ್ ಗಳಿಸಿ ಮತ್ತು ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಿ ಎಲ್ಲರ ಗಮನ ಸೆಳೆದಿದ್ದರು. ಹೀಗಾಗಿ ಅವರ ಬ್ಯಾಟಿಂಗ್ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ವಿಶ್ವದರ್ಜೆಯ ಬೌಲರ್ ಜೋಫ್ರಾ ಆರ್ಚರ್ ಅವರನ್ನು ಎದುರಿಸಲು ಪರದಾಡುತ್ತಿದ್ದಾರೆ. ಒಂದು ಅಥವಾ ಎರಡು ಸಿಕ್ಸರ್ಗಷ್ಟೇ ಸೀಮಿತವಾಗಿದ್ದು, ಕಡಿಮೆ ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.
ಸುಲಭವಾಗಿ ವಿಕೆಟ್ ಒಪ್ಪಿಸಿದ ವಂಡರ್ ಕಿಡ್
ಆರ್ಚರ್ ಕೇವಲ ವೇಗವಾಗಿ ಬೌಲಿಂಗ್ ಮಾಡದೆ, ಯುವ ಆಟಗಾರನನ್ನು ಔಟ್ ಮಾಡಲು ರಣತಂತ್ರ ಹೂಡಿದರು. ಮೊದಲು ಕೆಲವು ಶಾರ್ಟ್-ಪಿಚ್ ಎಸೆತಗಳನ್ನು ಹಾಕಿ ಕಾಡಿದರು. ಇದರಿಂದ ಯುವ ಬ್ಯಾಟರ್ ವೈಭವ್ ರನ್ ಗಳಿಸಲು ಪರದಾಡಿದರು. ಕೊನೆಗೆ ಆರ್ಚರ್ ಬೌಲಿಂಗ್ ಶೈಲಿ ಬದಲಾಯಿಸಿ ಲೆಂತ್ ಬಾಲ್ ಎಸೆದು ವಿಕೆಟ್ ಕಿತ್ತು ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಈ ವೇಗಿಯ ಎಸೆದ ಎಸೆತಗಳನ್ನು ಅರ್ಥ ಮಾಡಿಕೊಳ್ಳದ 'ವಂಡರ್ ಕಿಡ್' ಸುಲಭವಾಗಿ ಔಟ್ ಆದರು.
ಆರ್ಸಿಬಿ ಮಾಜಿ ಆಟಗಾರ ಹೇಳಿದ್ದೇನು?
ಈ ಕುರಿತು ಆರ್ಸಿಬಿ ತಂಡದ ಮಾಜಿ ಆಟಗಾರ ಮೊಯಿನ್ ಅಲಿ ಅವರು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಇದು ಕ್ರಿಕೆಟ್ ಅಭಿಮಾನಿಗಳ ನಡುವೆ ಭಾರಿ ಚರ್ಚೆ ಹುಟ್ಟುಹಾಕಿದೆ. 'ದೇಶಿ ಕ್ರಿಕೆಟ್ನಲ್ಲಿ ಆಡುವುದಕ್ಕೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ಅತ್ಯುತ್ತಮ ಬೌಲರ್ಗಳನ್ನು ಎದುರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಜೋಫ್ರಾ ಆರ್ಚರ್ ನಿಮಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಎಂದರೆ ಏನು ಎಂಬುದರ ಮೊದಲ ಪಾಠ ಕಲಿಸಿದ್ದಾರೆ. ಇಲ್ಲಿ ಕೇವಲ ಪ್ರತಿಭೆ ಇದ್ದರೆ ಸಾಲದು, ಪರಿಸ್ಥಿತಿಗೆ ತಕ್ಕಂತೆ ಆಡುವ ಜಾಣ್ಮೆ ಇರಬೇಕು,' ಎಂದು ಅವರು ಬರೆದುಕೊಂಡಿದ್ದಾರೆ.
ನೆಟ್ಟಿಗರು ಹೇಳೋದೇನು?
ಈ ಟ್ವಿಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು 'ಈ ಮಾತು ನಿಜ ಎಂದು ಒಪ್ಪಿಕೊಂಡರೆ, ಇನ್ನು ಕೆಲವರು ವೈಭವ್ ಸೂರ್ಯವಂಶಿ ಇನ್ನೂ ತುಂಬಾ ಚಿಕ್ಕ ವಯಸ್ಸಿನ ಆಟಗಾರನಾಗಿದ್ದು, ಕಲಿಯಲು ಅವರಿಗೆ ಸಮಯ ಬೇಕು,' ಎಂದು ಬೆಂಬಲ ಸೂಚಿಸಿದ್ದಾರೆ. ಕ್ರಿಕೆಟ್ ವಿಶ್ಲೇಷಕರ ಪ್ರಕಾರ, 'ವೈಭವ್ ಸೂರ್ಯವಂಶಿ ಅವರ ಇಂಗ್ಲೆಂಡ್ ಪ್ರವಾಸದ ಈ ಅನುಭವವು ಅವರ ಭವಿಷ್ಯದ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ. ಭಾರತ ಮತ್ತು ಐಪಿಎಲ್ ಪಿಚ್ಗಳಿಗಿಂತ ವಿದೇಶಿ ಪಿಚ್ಗಳು ಭಿನ್ನವಾಗಿರುತ್ತವೆ ಮತ್ತು ಅಲ್ಲಿನ ಬೌಲಿಂಗ್ ಗುಣಮಟ್ಟವೂ ಉತ್ತಮವಾಗಿರುತ್ತದೆ'.
ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಕಂಡ ಆಟಗಾರರಿಗೆ ಇಂತಹ ಕಠಿಣ ಸವಾಲುಗಳು ಎದುರಾದಾಗ, ಅವರು ತಮ್ಮ ಬ್ಯಾಟಿಂಗ್ ಶೈಲಿಯಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಸಿಗುತ್ತದೆ. ಹಾಗೆಯೇ ಈ ಹಿನ್ನಡೆಯಿಂದ ಪಾಠ ಕಲಿತು ವೈಭವ್ ಸೂರ್ಯವಂಶಿ ಮುಂದಿನ ಪಂದ್ಯಗಳಲ್ಲಿ ಹೇಗೆ ಕಮ್ಬ್ಯಾಕ್ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ. ಇವರ ಆಟ ನೋಡಲು ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿದೆ.












Click it and Unblock the Notifications