ಸಿಎಂ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವಂತದ್ದು ಬಿಎಸ್ವೈಗೆ ಏನಾಯ್ತು?
ಮೂರು ದಿನದೊಳಗೆ ಮುಖ್ಯಮಂತ್ರಿಗಳು ಕ್ಷಮೆಯಾಚಿಸದಿದ್ದರೆ, ಸಿಎಂ ಸಿದ್ದರಾಮಯ್ಯ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಚ್ಚರಿಕೆ.
ಬೆಂಗಳೂರು, ಜುಲೈ 4: ನಗರದಲ್ಲಿ ನಡೆಯುತ್ತಿರುವ ಮನೆಮನೆ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ದ ಫುಲ್ ಗರಂ ಆಗಿದ್ದಾರೆ.
ಮೂರು ದಿನದೊಳಗೆ ಮುಖ್ಯಮಂತ್ರಿಗಳು ಕ್ಷಮೆಯಾಚಿಸದಿದ್ದರೆ, ಸಿದ್ದರಾಮಯ್ಯ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪ ದಾಖಲು
ಕೆಲವು ದಿನಗಳ ಹಿಂದೆ ಅಥಣಿಯಲ್ಲಿ ಭ್ರಷ್ಟಾಚಾರದ ದುಡ್ಡನ್ನು ಚೆಕ್ ನಲ್ಲಿ ತೆಗೆದುಕೊಂಡ ಏಕೈಕ ರಾಜಕಾರಣಿಯೆಂದರೆ ಅದು ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು.
ಇದಾದ ನಂತರ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರದಿದ್ದರೆ, ಅಮಿತ್ ಶಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರದಿದ್ದರೆ, ಯಡಿಯೂರಪ್ಪ ಜೈಲಿನಲ್ಲಿ ಇರುತ್ತಿದ್ದರು ಎಂದು ಸಿದ್ದರಾಮಯ್ಯ, ಮಂಗಳವಾರ (ಜು 4) ಯಡಿಯೂರಪ್ಪ ವಿರುದ್ದ ಕಿಡಿಕಾರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಇನ್ನು ಮೂರು ದಿನದೊಳಗೆ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ..
ಚೆಕ್ ಮೂಲಕ ದುಡ್ಡು ತೆಗೆದುಕೊಂಡ ಬಿಎಸ್ವೈ
ಅಥಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ಡೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯ, ಜೈಲಿಗೆ ಹೋಗಿ ಬಂದ ವ್ಯಕ್ತಿ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಾರಲ್ವಾ, ಅವರಿಗೆ ಮಾನಮರ್ಯಾದೆ ಏನಾದರೂ ಇದೆಯಾ ಎಂದು ಲೇವಡಿ ಮಾಡಿದ್ದರು.
ಸಿದ್ದರಾಮಯ್ಯ Vs ಯಡಿಯೂರಪ್ಪ
ಇದಾದ ನಂತರ ಮತ್ತೆ ಹೇಳಿಕೆಯನ್ನು ರೀಪ್ಲೇ ಮಾಡಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಭ್ರಷ್ಟಾಚಾರದ ವಿರುದ್ದ ಮಾತನಾಡಲು ಅರ್ಹರೇ, ಇಲ್ಲವೇ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತು ಅಮಿತ್ ಶಾ ಇಲ್ಲದಿದ್ದರೆ ಯಡಿಯೂರಪ್ಪ ಜೈಲಿನಲ್ಲೇ ಇರಬೇಕಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದು ವಿರುದ್ದ ಮಾನನಷ್ಟ ಮೊಕದ್ದಮೆ
ಸಿಎಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಹೋದಲೆಲ್ಲಾ ಸಿದ್ದರಾಮಯ್ಯ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಂದಿನಿಂದ ಮೂರು ದಿನದ ಗಡುವನ್ನು ಅವರಿಗೆ ನೀಡುತ್ತೇನೆ. ಅವರು ನನ್ನ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ನಾನು ಮಾನನಷ್ಟ ಮೊಕದ್ದಮೆ ಹೂಡುವುದು ನಿಶ್ಚಿತ ಎಂದು ಯಡಿಯೂರಪ್ಪ ಗುಡುಗಿದ್ದಾರೆ.
ದೀನ್ ದಯಾಳ್ ಉಪಾಧ್ಯಾಯ ಜನ್ಮ ಶತಮಾನೋತ್ಸವ
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ದೇಶಾದ್ಯಂತ ಸದ್ಯ ಜಾರಿಯಲ್ಲಿರುವ 'ವಿಸ್ತಾರಕ' ಯೋಜನೆಯಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನ ಮನೆ-ಮನೆ ಸಂಪರ್ಕ ಅಭಿಯಾನ ಆರಂಭಿಸಿದ್ದಾರೆ.
ಮನೆ-ಮನೆ ಸಂಪರ್ಕ ಅಭಿಯಾನ
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಸಂಪಂಗಿರಾಮನಗರ ವಾರ್ಡ್ ನಲ್ಲಿ ಹಿಂದುಳಿದ ವರ್ಗಗಳವರ ಮನೆಗಳಿಗೆ ತೆರಳಿ ಯಡಿಯೂರಪ್ಪ ಜಾಗೃತಿ ಮೂಡಿಸಿದರು. ಪಕ್ಷದ ಸಾಧನೆಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸುವುದಕ್ಕಾಗಿ ಮನೆಮನೆಗೂ ಭೇಟಿ ನೀಡುತ್ತಿರುವ ಯಡಿಯೂರಪ್ಪನವರಿಗೆ ಮೊಹಲ್ಲಾದ ಮಹಿಳೆಯರು ಆರತಿ ಎತ್ತಿ ಸ್ವಾಗತ ಕೋರಿದರು.