ಕೆಎಸ್ಆರ್ಟಿಸಿ: ಅ.10ರಂದು ಒಂದೇ ದಿನ ದಾಖಲೆಯ 22.64 ಕೋಟಿ ರೂ. ಆದಾಯ
ಬೆಂಗಳೂರು, ಅ.11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಅ.10ರಂದು ಸಾರಿಗೆ ಸಂಸ್ಥೆಯ ಇತಿಹಾಸದಲ್ಲೇ ಅತ್ಯಧಿಕ ಸಾರಿಗೆ ಆದಾಯ ರೂ. 22.64 ಕೋಟಿಗಳನ್ನು ದಾಖಲಿಸಿದೆ.
ನಾಡಹಬ್ಬ ದಸರಾ ಸಂಭ್ರಮದಲ್ಲಿ ನಿಗಮದ ಎಲ್ಲಾ ವಾಹನಗಳನ್ನು ಸುಸ್ಥಿತಿಲ್ಲಿಟ್ಟುಕೊಂಡು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಹೆಚ್ಚು ಬಸ್ಗಳ ಸಂಚಾರ ಮಾಡಿದ್ದು, ದಸರಾ ಪ್ಯಾಕೇಜ್ ಪ್ರವಾಸಗಳನ್ನು ಸಕಾಲದಲ್ಲಿ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುರುವುದು ಶ್ಲಾಘನೀಯ ಎಂದು ಕೆಎಸ್ಆರ್ಟಿಸಿ ಅಧ್ಯಕ್ಷ, ಶಾಸಕ ಎಂ. ಚಂದ್ರಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸಿಬ್ಬಂದಿಗೆ ಬರೆದ ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.
ಕೊವಿಡ್ ಕಾರಣದಿಂದಾಗಿ ಸಂಸ್ಥೆಯು ಕಳೆದೆರಡು ವರುಷಗಳಿಂದ ಯಾವುದೇ ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸಿರುವುದಿಲ್ಲ ಹಾಗೂ ನಿವೃತ್ತಿ/ ವರ್ಗಾವಣೆ ಗೊಂಡ ಸಿಬ್ಬಂದಿಗೆ ಬದಲಾಗಿ ಹೊಸ ನೇಮಕಾತಿಯನ್ನು ಮಾಡಿರುವುದಿಲ್ಲ ಆದಾಗ್ಯೂ ಸಮಸ್ತ ಸಿಬ್ಬಂದಿಗಳ ಪರಿಶ್ರಮ ದಕ್ಷತೆಯಿಂದ ಇಂದು ದಾಖಲೆಯ ಆದಾಯವನ್ನು ಗಳಿಸಿದೆ. ಸಿಬ್ಬಂದಿಯ ಅವಿರತ ಪರಿಶ್ರಮ, ದಕ್ಷತೆ ಹಾಗೂ ಬದ್ಧತೆಗೆ ಸಂದ ಪ್ರತಿಫಲ. ಕೆಎಸ್ಆರ್ಟಿಸಿ ಮತ್ತೊಮ್ಮೆ ಜನರ ಜೀವನಾಡಿ ಎಂಬುದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.