BMTC: ಮಹಿಳೆ ಮೇಲೆ ಹಲ್ಲೆ ಮಾಡಿದ ಬಸ್ ಕಂಡಕ್ಟರ್ ಅಮಾನತು ಹಿಂಪಡೆಯುವಂತೆ ಆಗ್ರಹ
ಬೆಂಗಳೂರು, ಏಪ್ರಿಲ್.03: ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಂಡಕ್ಟರ್ನ ಅಮಾನತು ರದ್ದುಗೊಳಿಸುವಂತೆ ಕರ್ನಾಟಕ ಸಾರಿಗೆ ಒಕ್ಕೂಟ ಒತ್ತಾಯಿಸಿದೆ.
ಮಹಿಳೆ ಮೇಲೆ ಹಲ್ಲೆ ಮಾಡಿದ ಬಿಎಂಟಿಸಿ ಕಂಡಕ್ಟರ್ಗೆ ಜಾಮೀನು ಪಡೆಯಲು ಸಹಾಯ ಮಾಡದ ಬಿಎಂಟಿಸಿ ಆಡಳಿತ ಮಂಡಳಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಆಯೋಗದ (ಕೆಎಸ್ಆರ್ಟಿಸಿ) ಸಿಬ್ಬಂದಿ ಮತ್ತು ಕಾರ್ಮಿಕರ ಸಂಘ ಟೀಕಿಸಿದೆ. ಘಟನೆ ನಡೆದ ತಕ್ಷಣ ಮಹಿಳೆ ದೂರಿನ ಮೇಲೆ ಅವರನ್ನು ಬಂಧಿಸಲಾಗಿದೆ. ಆದರೆ, ಘಟನೆಯನ್ನು ಸರಿಯಾಗಿ ಪರಿಶೀಲನೆ ಮಾಡಿಲ್ಲ ಎಂದು ಟೀಕಿಸಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಆಯೋಗದ (ಕೆಎಸ್ಆರ್ಟಿಸಿ) ಸಿಬ್ಬಂದಿ ಮತ್ತು ಕಾರ್ಮಿಕರ ಸಂಘವು ಬಿಎಂಟಿಸಿ ಎಂಡಿ ರಾಮಚಂದ್ರನ್ ಆರ್ ಅವರಿಗೆ ಪತ್ರ ಬರೆದಿದೆ. "ನಾವು ತಮಗೆ 27.03.2024ರಂದು ಬರೆದ ಪತ್ರಕ್ಕೆ ಈವರೆಗೂ ತಮ್ಮಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಅಥವಾ ಸಂಬಂಧಪಟ್ಟ ಅಧಿಕಾರಿಗಳು ದಸ್ತಗಿರಿಯಾದ ನೌಕರನಿಗೆ ಜಾಮೀನು ಕೊಡಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಹೇಳಲು ವಿಷಾದಿಸುತ್ತೇವೆ. ನಮ್ಮ ಫೆಡರೇಷನ್ ಕಾರ್ಯಕರ್ತರು ಹಾಗೂ ದಸ್ತಗಿರಿಯಾಗಿದ್ದ ನಿರ್ವಾಹಕನ ಬಂಧುಗಳು ಜೊತೆ ಸೇರಿ ದಸ್ತಗಿರಿಯಾಗಿದ್ದ ನೌಕರನನ್ನು 29.03.2024 ರಂದು ಬಿಡುಗಡೆ ಮಾಡಿಸಿ ಜೈಲಿನಿಂದ ಹೊರತಂದಿದ್ದಾರೆ. ಈ ಬಗ್ಗೆ ಆಡಳಿತ ವರ್ಗದ ಯಾವೊಬ್ಬ ಅಧಿಕಾರಿಯೂ ಯೋಚಿಸಿದಂತೆ ಕಾಣುವುದಿಲ್ಲ. ಅದರ ಬದಲು ಘಟನೆ ನಡೆದ ದಿನವೇ ಬಹಳ ಉತ್ಸುಕರಾಗಿ ನೌಕರನನ್ನು ಅಮಾನತುಗೊಳಿಸಿ ಅದನ್ನು ಮಾಧ್ಯಮಗಳಿಗೆ ಹೇಳಿಕೆ ಕೊಡುವ ಮೂಲಕ ಸಂತೃಪ್ತರಾಗಿದ್ದಾರೆ. ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ" ಎಂದಿದೆ.
"ಈ ಮಧ್ಯೆ ಘಟನೆ ನಡೆದ ಬಗ್ಗೆ ಸದರಿ ಬಸ್ಸಿನ ಸಿಸಿ ಕ್ಯಾಮೆರಾದ ಫೂಟೇಜ್ ನಮ್ಮ ಗಮನಕ್ಕೆ ಬಂದಿದೆ. ಟಿಕೇಟ್ ವಿಷಯದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಗೂ ಕರ್ತವ್ಯ ಮಗ್ನರಾಗಿದ್ದ ನಿರ್ವಾಹಕರಿಗೂ ವಾಗ್ವಾದ ನಡೆದಿರುವುದು ನಿಜ. ಈ ಮಹಿಳೆಯು ಬಹಳ ಏರುಧ್ವನಿಯಿಂದ ನಿರ್ವಾಹಕರ ವಿರುದ್ಧ (ಹಿಂದಿಯಲ್ಲಿ) ಕೂಗಾಡುತ್ತಿರುವುದು ಹಾಗೂ ನಿರ್ವಾಹಕ ಅದಕ್ಕೆ ಜವಾಬು ಕೊಡುತ್ತಿರುವುದು ಕಾಣುತ್ತದೆ. ಉದ್ರೇಕಗೊಂಡ ಮಹಿಳೆ ಮೊದಲು ಹೊಡೆದಿದ್ದಾರೆ. ನಂತರ ನಿರ್ವಾಹಕ ಪ್ರತಿಕ್ರಿಯಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯು ಮತ್ತೆ ನಿರ್ವಾಹಕನನ್ನು ಓಡಾಡಿಸಿಕೊಂಡು ಹೊಡೆದು ವಾಹನದಿಂದ ಇಳಿದು ಹೋಗಿ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಸದರಿ ನಿರ್ವಾಹಕರ ವಿರುದ್ಧ ದೂರು ಕೊಟ್ಟಿದ್ದಾರೆ" ಎಂದು ದೂರಿನಲ್ಲಿ ಇರುವ ವಿಷಯಗಳನ್ನು ತಿಳಿಸಿದ್ದಾರೆ.

ಸೂಕ್ತ ಪರಿಶೀಲನೆ ನಡೆಸದೆ ಬಸ್ ಕಂಡಕ್ಟರ್ನನ್ನು ಅಮಾನತು ಮಾಡಲಾಗಿದೆ. ಘಟನೆಯಲ್ಲಿ ಏನಾಯಿತು ಎಂಬುದನ್ನು ಬಿಎಂಟಿಸಿ ಪರಿಶೀಲಿಸಬೇಕು ಮತ್ತು ನಂತರ ಕ್ರಮ ತೆಗೆದುಕೊಳ್ಳಬೇಕು. ಕೇವಲ ವೀಡಿಯೊವನ್ನು ಆಧರಿಸಿ ಉದ್ಯೋಗಿಯನ್ನು ಅಮಾನತುಗೊಳಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಅವರ ಅಮಾನತು ಹಿಂತೆಗೆದುಕೊಳ್ಳುವಂತೆ ಫೆಡರೇಶನ್ ಬಿಎಂಟಿಸಿಯನ್ನು ಒತ್ತಾಯಿಸುತ್ತದೆ ಎಂದು ಪತ್ರದಲ್ಲಿ ಸೇರಿಸಿದ್ದಾರೆ.
ಇದಾದ ಬಳಿಕ ಸಂಘವು ಕೆಲವು ಬೇಡಿಕೆಗಳನ್ನು ಇಟ್ಟಿದೆ.
1. ಆಮಾನತ್ತಾಗಿರುವ ನಿರ್ವಾಹಕನನ್ನು ಕೂಡಲೇ ಹಿಂದಿನ ದಿನದಿಂದಲೇ ಕೆಲಸಕ್ಕೆ ವಾಪಸ್ ತೆಗೆದುಕೊಂಡು ಇಡೀ ಘಟನೆಯ ಬಗ್ಗೆ ಸಮಗ್ರವಾದ ವಿಚಾರಣೆ ನಡೆಸಬೇಕು.
2. ಈ ನಿರ್ವಾಹಕನ ವಿರುದ್ಧ ಯಾವುದೇ ಸೇಡಿನ ಕ್ರಮವನ್ನು ತೆಗೆದುಕೊಳ್ಳಬಾರದು.
3. ಮರುಕಳಿಸಬಾರದು. ಯಾವುದೇ ನೌಕರನೂ ಪ್ರಯಾಣಿಕರ ವಿರುದ್ಧ ಕೋಪತಾಪಗಳನ್ನು ಕರ್ತವ್ಯನಿರತನಾಗಿರುವಾಗ ತೋರಿಸಕೂಡದು. ಆದರೆ ದಿನವಹಿ ಲಕ್ಷಾಂತರ ಮಂದಿ ಪ್ರಯಾಣ ಮಾಡುವ ಸಂಸ್ಥೆಯಲ್ಲಿ ಹಲವಾರು ಕಾರಣಗಳಿಂದ ದುರ್ಘಟನೆಗಳು ನಡೆಯುವ ಸಾಧ್ಯತೆಯಿದೆ. ಅಂತಹ ಸಂದರ್ಭಗಳಲ್ಲಿ ಸಂಸ್ಥೆಯ ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ನೌಕರರನ್ನು ಕರೆಸಿ ವಿಚಾರಣೆ ನಡೆಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬಹುದು. ತಾನು 30-40 ವರ್ಷ ನಿಷ್ಠೆಯಿಂದ ದುಡಿಯುವ ಸಂಸ್ಥೆಯು ತನಗೆ ನ್ಯಾಯ ಕೊಡಿಸಲು ವಿಫಲವಾಗಿದೆಯೆಂಬ ಅನಾಥಪ್ರಜ್ಞೆ ಅವನನ್ನು ಕಾಡಬಾರದು ಎಂದು ಮನವಿ ಮಾಡಿದೆ.












Click it and Unblock the Notifications