ಬೆಂಗಳೂರು-ಭುವನೇಶ್ವರ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇದೇ ಜೂನ್ 25ರಿಂದ ವಿಶೇಷ ರೈಲು ಸೇವೆ ಆರಂಭ
ಬೆಂಗಳೂರು ಮತ್ತು ಒಡಿಶಾ ನಡುವೆ ಸಂಚರಿಸುವ ರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ರೈಲ್ವೆ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪೂರ್ವ ಕರಾವಳಿ ರೈಲ್ವೆಯು (East Coast Railway) ಭುವನೇಶ್ವರದಿಂದ ಬೆಂಗಳೂರಿಗೆ ವಿಶೇಷ ಏಕಮುಖ (One-Way) ರೈಲು ಸೇವೆಯನ್ನು ಘೋಷಿಸಿದೆ. ಈ ಬಗ್ಗೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಚಾರದ ವೇಳಾಪಟ್ಟಿ
ರೈಲು ಸಂಖ್ಯೆ 08401 (ಭುವನೇಶ್ವರ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು) ಜೂನ್ 25ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಭುವನೇಶ್ವರದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಈ ರೈಲು ಮರುದಿನ ಅಂದರೆ ಜೂನ್ 26ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ತಲುಪಲಿದೆ.

ಪ್ರಮುಖ ನಿಲುಗಡೆಗಳು
ಈ ರೈಲು ಒಡಿಶಾದಿಂದ ಹೊರಟು ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಪ್ರಮುಖ ನಗರಗಳ ಮೂಲಕ ಕರ್ನಾಟಕವನ್ನು ಪ್ರವೇಶಿಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗಮಧ್ಯೆ ಪ್ರಮುಖ 20 ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ. ಖುರ್ದಾ ರೋಡ್, ಬಾಳುಗಾಂವ್, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ ರೋಡ್, ವಿಜಯನಗರಂ, ದುವ್ವಾಡ, ಸಮಲ್ಕೋಟ್, ರಾಜಮಂಡ್ರಿ, ವಿಜಯವಾಡ, ಓಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟಾ, ಕಟಪಾಡಿ, ಜೋಲಾರ್ಪೇಟೆ, ಕುಪ್ಪಂ, ಬಂಗಾರಪೇಟೆ, ವೈಟ್ಫೀಲ್ಡ್ ಮತ್ತು ಕೃಷ್ಣರಾಜಪುರಂ ಮಾರ್ಗದಲ್ಲಿ ಸಂಚರಿಸಲಿದೆ.
ಬೋಗಿಗಳ ವಿವರ
ದೂರದ ಪ್ರಯಾಣ ಇರುವುದರಿಂದ ಪ್ರಯಾಣಿಕರ ಹಿತಕರ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಪೂರಕವಾಗಿ ಈ ರೈಲನ್ನು ಸಂಪೂರ್ಣ ಹವಾನಿಯಂತ್ರಿತ (AC) ಬೋಗಿಗಳಿಂದ ರೂಪಿಸಲಾಗಿದೆ. ಈ ರೈಲಿನಲ್ಲಿ ಒಟ್ಟು 16 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 7 ಎಸಿ ತ್ರೀ ಟೈರ್ (AC 3 Tier) ಬೋಗಿಗಳು, 7 ಎಸಿ ತ್ರೀ ಟೈರ್ ಎಕಾನಮಿ (AC 3 Tier Economy) ಬೋಗಿಗಳು, ಜನರೇಟರ್ ಕಾರ್ ಸೌಲಭ್ಯವಿರುವ 2 ಲಗೇಜ್ ಮತ್ತು ಬ್ರೇಕ್ ವ್ಯಾನ್ಗಳು ಇರಲಿವೆ. ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಸೌಲಭ್ಯ ಪಡೆದುಕೊಳ್ಳಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದು ಏಕಮುಖ (One-Way) ವಿಶೇಷ ರೈಲು ಆಗಿರುವುದರಿಂದ ಭುವನೇಶ್ವರದಿಂದ ಬೆಂಗಳೂರಿಗೆ ಬರುವವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿರಲಿದೆ. ಬೇಸಿಗೆಯ ನಂತರದ ಸೀಸನ್ ಹಾಗೂ ಶಾಲಾ-ಕಾಲೇಜುಗಳು ಆರಂಭವಾಗುವ ಈ ಸಮಯದಲ್ಲಿ ಊರುಗಳಿಂದ ಬೆಂಗಳೂರಿಗೆ ಮರಳುವ ಐಟಿ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ರೈಲು ಸಾಕಷ್ಟು ಸಹಕಾರಿಯಾಗಲಿದೆ. ಈ ಮಾರ್ಗದಲ್ಲಿ ಪ್ರಯಾಣಿಸಲು ಇಚ್ಛಿಸುವವರು ರೈಲ್ವೆ ಕೌಂಟರ್ಗಳು ಅಥವಾ ಐಆರ್ಸಿಟಿಸಿ (IRCTC) ವೆಬ್ಸೈಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.
ಇದು ರೈಲ್ವೆ ಇಲಾಖೆ ವಿಶೇಷ ಸಂದರ್ಭಗಳಲ್ಲಿ ಓಡಿಸುವ ವಿಶೇಷ ರೈಲಾಗಿರುವುದರಿಂದ ಇದರ ಟಿಕೆಟ್ ದರವು ಸಾಮಾನ್ಯ ಎಕ್ಸ್ಪ್ರೆಸ್ ರೈಲುಗಳಿಗಿಂತ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ. ಈ ರೈಲಿನ ಟಿಕೆಟ್ಗಳನ್ನು ಐಆರ್ಸಿಟಿಸಿ ಅಧಿಕೃತ ವೆಬ್ಸೈಟ್, ಮೊಬೈಲ್ ಆಪ್ ಅಥವಾ ಯಾವುದೇ ರೈಲ್ವೆ ನಿಲ್ದಾಣದ ರಿಸರ್ವೇಶನ್ ಕೌಂಟರ್ಗಳ ಮೂಲಕ ಬುಕ್ ಮಾಡಬಹುದು. ಇಂತಹ ಒನ್-ವೇ ವಿಶೇಷ ರೈಲುಗಳಿಗೆ ಸಾಮಾನ್ಯವಾಗಿ ತತ್ಕಾಲ್ ಕೋಟಾ ಇರುವುದಿಲ್ಲ. ಆದ್ದರಿಂದ ಪ್ರಯಾಣಿಕರು ಸಾಮಾನ್ಯ ಮುಂಗಡ ಬುಕಿಂಗ್ ಮೂಲಕವೇ ಸೀಟುಗಳನ್ನು ಕಾಯ್ದಿರಿಸಬೇಕಾಗುತ್ತದೆ.
ಇವುಗಳಲ್ಲಿ ಪ್ರತಿ ಸೀಟಿಗೆ ಪ್ರತ್ಯೇಕ ಎಸಿ ವೆಂಟ್ಸ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳು, ರೀಡಿಂಗ್ ಲೈಟ್ಸ್ ಹಾಗೂ ಸುಧಾರಿತ ವಿನ್ಯಾಸದ ಬರ್ತ್ಗಳಿರುತ್ತವೆ. ಈ ವಿಶೇಷ ರೈಲಿನಲ್ಲಿ ಅಧಿಕೃತ ಪ್ಯಾಂಟ್ರಿ ಕಾರ್ (ಅಡುಗೆ ಬೋಗಿ) ಲಭ್ಯವಿರುವುದಿಲ್ಲ. ಆದರೆ ಪ್ರಯಾಣಿಕರು 'ಇ-ಕೇಟರಿಂಗ್' (E-Catering) ಸೌಲಭ್ಯದ ಮೂಲಕ ಐಆರ್ಸಿಟಿಸಿ ಆಪ್ ಬಳಸಿ ತಮಗೆ ಬೇಕಾದ ಪ್ರಮುಖ ನಿಲ್ದಾಣಗಳಲ್ಲಿ ಆನ್ಲೈನ್ ಮೂಲಕ ಆಹಾರವನ್ನು ಆರ್ಡರ್ ಮಾಡಿ ತಮ್ಮ ಸೀಟಿಗೆ ತರಿಸಿಕೊಳ್ಳಬಹುದು. ರೈಲಿನಲ್ಲಿ ಕಾಫಿ, ಟೀ, ನೀರಿನ ಬಾಟಲಿ ಸೌಲಭ್ಯ ಇರಲಿದೆ.
ಕಂಟೋನ್ಮೆಂಟ್ ನಿಲ್ದಾಣವು ಶಿವಾಜಿನಗರ ಮತ್ತು ಎಂ.ಜಿ. ರಸ್ತೆಗೆ ತೀರಾ ಹತ್ತಿರದಲ್ಲಿದೆ. ಇಲ್ಲಿಂದ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಸುಲಭವಾಗಿ ಆಟೋ ಅಥವಾ ಬಿಎಂಟಿಸಿ ಬಸ್ ಸೌಲಭ್ಯ ಸಿಗುತ್ತದೆ. ಅಲ್ಲದೆ ವೈಟ್ಫೀಲ್ಡ್ ಮತ್ತು ಕೆ.ಆರ್.ಪುರಂನಲ್ಲೇ ಇಳಿಯುವ ಐಟಿ ಉದ್ಯೋಗಿಗಳಿಗೆ ಇದು ಅತ್ಯಂತ ಸುಲಭ ಮಾರ್ಗವಾಗಿದೆ.













Click it and Unblock the Notifications