ಲಂಕಾ ಬಗ್ಗುಬಡಿದು ವಿಶ್ವದಾಖಲೆ ಮಾಡಿದ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಅಚ್ಚರಿ ಹೇಳಿಕೆ, ವೈರಲ್
Vaibhav Sooryavanshi: ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ 'ಎ' ವಿರುದ್ಧ ಭಾರತ 'ಎ' ತಂಡ ಭರ್ಜರಿಯಾಗಿ ಗೆಲುವು ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಇದರ ಬೆನ್ನಲ್ಲೇ ಈ ಗೆಲುವಿಗೆ ಪ್ರಮುಖ ಕಾರಣನಾದ ಟೀಮ್ ಇಂಡಿಯಾ ಯುವ ಸ್ಟಾರ್ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶ್ರೀಲಂಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾದ 15 ವರ್ಷದ ವೈಭವ್ ಸೂರ್ಯವಂಶಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ಹಾಗೂ ಹಿಂದಿನ ಪಂದ್ಯದಲ್ಲಿ ಎದುರಾಗಿದ್ದ ಸಣ್ಣ ವಿವಾದಗಳ ಹೊರತಾಗಿಯೂ ತಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೊಸ ದಾಖಲೆ ಬರೆದ ವೈಭವ್
ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ 'ಲಿಸ್ಟ್ ಎ' ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಇವರ ಆಕ್ರಮಣ ಬ್ಯಾಟಿಂಗ್ ನೆರವಿನಿಂದ ಭಾರತ 'ಎ' ತಂಡ ಕೇವಲ 9 ಓವರ್ಗಳಲ್ಲಿ 132 ರನ್ ಕಲೆಹಾಕಿತು.
ಅಂತಿಮವಾಗಿ ಭಾರತ ತಂಡವು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 377 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ 'ಎ' ತಂಡ 47.1 ಓವರ್ಗಳಲ್ಲಿ 311 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತ 66 ರನ್ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ಪಂದ್ಯದ ನಂತರ ವೈಭವ್ ಅವರು ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ವೈಭವ್ ಸೂರ್ಯವಂಶಿ ಹೇಳಿದ್ದೇನು?
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರು, 'ನಾನು ಯಾವುದೇ ಹೆಚ್ಚಿನ ಆಲೋಚನೆ ಮಾಡಿರಲಿಲ್ಲ. ಮೊದಲ 10 ಓವರ್ಗಳಲ್ಲಿ ನಾನು ಅಂದುಕೊಂಡಿದ್ದ ಯೋಜನೆಯನ್ನು ಕೇವಲ ಮೈದಾನದಲ್ಲಿ ಕಾರ್ಯಗತಗೊಳಿಸಲು ಬಯಸಿದ್ದೆ,' ಎಂದು ಹೇಳಿ ಗಮನ ಸೆಳೆದಿದ್ದಾರೆ.
ಐಪಿಎಲ್ನಲ್ಲಿ ಬರೋಬ್ಬರಿ 72 ಸಿಕ್ಸರ್ಗಳನ್ನು ಸಿಡಿಸಿ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದ ವೈಭವ್, ತಮಗೆ ಏಕದಿನ ಮಾದರಿಯೂ ತುಂಬಾ ಮುಖ್ಯ ಎಂದಿದ್ದಾರೆ. 'ನಾನು ಈಗಾಗಲೇ 50 ಓವರ್ಗಳ ಪಂದ್ಯಗಳನ್ನು ಆಡಿದ್ದೇನೆ. ಆದರೆ ಅದರ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ ಅನಿಸುತ್ತದೆ. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಒಂದು ಸವಾಲಾಗಿತ್ತು, ಅದನ್ನು ನಾನು ಆನಂದಿಸಿದೆ,' ಎಂದು ಅವರು ಹೇಳಿದ್ದಾರೆ.
ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗಿದ್ದರು. ಅಲ್ಲದೆ, ಶ್ರೀಲಂಕಾ ಆಟಗಾರರೊಂದಿಗೆ ಮೈದಾನದಲ್ಲಿ ಸಣ್ಣ ಮಾತಿನ ಚಕಮಕಿಗೂ ಇಳಿದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ತರಬೇತುದಾರರೊಂದಿಗೆ ಚರ್ಚಿಸಿದ ನಂತರ ನಾನು ತಪ್ಪುಗಳನ್ನು ತಿದ್ದಿಕೊಂಡೆ. ಈ ಸರಣಿಯಿಂದ ಸಾಕಷ್ಟು ಕಲಿತಿದ್ದೇನೆ,' ಎಂದು ಹೇಳಿದರು.
ವೈಭವ್ಗೆ ನಾಯಕರ ಮೆಚ್ಚುಗೆ
ಭಾರತ 'ಎ' ತಂಡದ ನಾಯಕ ತಿಲಕ್ ವರ್ಮಾ ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಸತತ ಪಂದ್ಯಗಳ ಸೋಲಿನ ನಂತರವೂ ತಂಡವು ಫೈನಲ್ನಲ್ಲಿ ತೋರಿದ ದಿಟ್ಟತನ ಅದ್ಭುತವಾಗಿತ್ತು ಎಂದಿದ್ದಾರೆ. ಶ್ರೀಲಂಕಾ 'ಎ' ತಂಡದ ನಾಯಕ ಸಹನ್ ಅರಾಚ್ಚಿಗೆ ಕೂಡ ವೈಭವ್ ಅವರ ಸ್ಫೋಟಕ ಇನ್ನಿಂಗ್ಸ್ ತಮ್ಮ ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ತಳ್ಳಿತು ಎಂದು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೀಗ ವೈಭವ್ ಸೂರ್ಯವಂಶಿ ಅವರು ನೀಡಿರುವ ಈ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗಿದೆ.












Click it and Unblock the Notifications