ಶಬರಿಮಲೆ ಯಾತ್ರಿಕರಿಗೆ ಗುಡ್ ನ್ಯೂಸ್: ಸುರಕ್ಷಿತ ದರ್ಶನಕ್ಕೆ ಬರಲಿದೆ AI ಆಧಾರಿತ ವ್ಯವಸ್ಥೆ
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ಬಾರಿಯ ವಾರ್ಷಿಕ ಯಾತ್ರೆ ವೇಳೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಜನದಟ್ಟಣೆ ನಿರ್ವಹಣಾ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುವ ಶಬರಿಮಲೆಯಲ್ಲಿ ಸುರಕ್ಷಿತ ಮತ್ತು ಸುಗಮ ದರ್ಶನ ಕಲ್ಪಿಸುವ ಉದ್ದೇಶದಿಂದ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಶಬರಿಮಲೆ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿಯು (TDB) ಮತ್ತು ಕೇರಳ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಸಂಬಂಧ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿದ್ದಾರೆ. ದೆಹಲಿ, ಚೆನ್ನೈ ಮತ್ತು ಮುಂಬೈ ಮೂಲದ ಮೂರು ಎಐ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ತಾಂತ್ರಿಕ ಯೋಜನೆಗಳನ್ನು ಮಂಡಿಸಿದ್ದಾರೆ.

ಈ ವರ್ಷದ ಶಬರಿಮಲೆ ಯಾತ್ರೆ ನವೆಂಬರ್ ಎರಡನೇ ವಾರದಿಂದ ಆರಂಭವಾಗಲಿದ್ದು, ಕಳೆದ ವರ್ಷ ಸುಮಾರು 51 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಟ್ಟಣೆ ನಿಯಂತ್ರಣವೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಶಬರಿಮಲೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ತಿಳಿಸಿದ್ದಾರೆ. ಈ ಮಹತ್ವದ ಯೋಜನೆಯ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊತ್ತಿರುವ ಅವರು, ಮುಂಬರುವ ದಿನಗಳಲ್ಲಿ ತಂತ್ರಜ್ಞಾನದ ನೆರವಿನೊಂದಿಗೆ ಶಬರಿಮಲೆಯ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದ್ದಾರೆ.
"ಶಬರಿಮಲೆ ದಟ್ಟ ಕಾಡಿನ ಮಧ್ಯೆದ ಪ್ರದೇಶದಲ್ಲಿರುವುದರಿಂದ ಇಲ್ಲಿ ಸಾಮಾನ್ಯ ವ್ಯವಸ್ಥೆಗಳು ಸಾಕಾಗುವುದಿಲ್ಲ. ಭಕ್ತರ ರಕ್ಷಣೆ ಮತ್ತು ಸುಗಮ ಸಂಚಾರಕ್ಕಾಗಿ ಸ್ಥಳೀಯ ಪರಿಸ್ಥಿತಿಗೆ ಸೂಕ್ತವಾಗುವ ವಿಶೇಷ 'ಎಐ' (Artificial Intelligence) ಪರಿಹಾರಗಳನ್ನು ತರಬೇಕಿದೆ. ಇದರ ಮೂಲಕ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಿಲ್ಲದ ದರ್ಶನ ವ್ಯವಸ್ಥೆ ಕಲ್ಪಿಸಬಹುದು," ಎಂದು ಅವರು ಹೇಳಿದ್ದಾರೆ.
ಭಕ್ತರ ಸುರಕ್ಷತೆಗೆ ಎಐ ಕಾವಲು: ಮುಂಚಿತವಾಗಿಯೇ ಸಿಗಲಿದೆ ಟ್ರಾಫಿಕ್ ಅಲರ್ಟ್!
ದೇವಸ್ಥಾನದ ಭದ್ರತೆಯನ್ನು ಹೆಚ್ಚಿಸಲು ಎಐ ಕ್ಯಾಮೆರಾ, ಡ್ರೋನ್ ಮತ್ತು ಜಿಐಎಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಇದು ಜನಸಂದಣಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಿದೆ. ದೇವಸ್ಥಾನದ ವಿವಿಧ ಭಾಗಗಳಿಂದ ಬರುವ ದೃಶ್ಯಗಳನ್ನು ಪರಿಶೀಲಿಸುವ ಎಐ ವ್ಯವಸ್ಥೆಯು, ಜನದಟ್ಟಣೆಯ ಮುನ್ಸೂಚನೆಯನ್ನು ನೀಡುತ್ತದೆ. ಯಾವ ಜಾಗದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಲ್ಲಿನ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತ ಎಚ್ಚರಿಕೆ ಸಂದೇಶಗಳು ರವಾನೆಯಾಗುವುದರಿಂದ ಸಮಸ್ಯೆಗಳು ಉದ್ಭವಿಸುವುದಿಲ್ಲ ಮತ್ತು ಇದಕ್ಕೆ ತಕ್ಕನಾಗಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.
ತಪ್ಪಿಸಿಕೊಂಡ ಭಕ್ತರ ಪತ್ತೆಗೆ ನೆರವು ಮತ್ತು ಪಾರ್ಕಿಂಗ್ ಗೊಂದಲಕ್ಕೆ ಮುಕ್ತಿ
ಶಬರಿಮಲೆ ಯಾತ್ರೆಯಲ್ಲಿ ಕೆಲವೊಮ್ಮೆ ಕುಟುಂಬದ ಸದಸ್ಯರು ಅಥವಾ ಗುಂಪಿನ ಸದಸ್ಯರು ತಪ್ಪಿಸಿಕೊಳ್ಳುವ ಘಟನೆಗಳು ನಡೆಯುತ್ತವೆ. ಎಐ ಆಧಾರದ ವ್ಯವಸ್ಥೆಯ ನೆರವಿನಿಂದ ಕಾಣೆಯಾಗುವ ಭಕ್ತರನ್ನು ಪತ್ತೆಹಚ್ಚಲು ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಬರಿಮಲೆ ವಲಯದಲ್ಲನ ಒಟ್ಟು 26 ಪಾರ್ಕಿಂಗ್ ಪ್ರದೇಶಗಳಲ್ಲಿ ಭಕ್ತರ ಮತ್ತು ವಾಹನಗಳ ದಟ್ಟಣೆಯನ್ನು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಡಿಜಿಟಲ್ ಆಗಿ ನಿರ್ವಹಿಸಲು ಈ ತಂತ್ರಜ್ಞಾನ ಹೊಸ ಶಕ್ತಿ ತುಂಬಲಿದೆ.
ಪೊಲೀಸ್ ಸಿಬ್ಬಂದಿಗೆ ಕಡಿಮೆಯಾಗಲಿದೆ ಕರ್ತವ್ಯದ ಒತ್ತಡ
ಪ್ರತಿ ವರ್ಷ ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಜನದಟ್ಟಣೆ ನಿಯಂತ್ರಣ, ವಾಹನ ಸಂಚಾರ ವ್ಯವಸ್ಥೆ ಹಾಗೂ ಭದ್ರತಾ ಕಾರ್ಯಗಳಲ್ಲಿ ಅವರು ನಿರಂತರವಾಗಿ ತೊಡಗಿರುತ್ತಾರೆ. ಎಐ ವ್ಯವಸ್ಥೆ ಜಾರಿಗೆ ಬಂದರೆ ನಿಯಂತ್ರಣ ಮತ್ತು ನಿಗಾ ಕಾರ್ಯಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದು, ಪೊಲೀಸರ ಮೇಲಿನ ಕೆಲಸದ ಒತ್ತಡವೂ ಕಡಿಮೆಯಾಗಲಿದೆ. ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಡಿಜಿಟಲ್ ಸಾಧನಗಳ ಮೂಲಕ ತಕ್ಷಣದ ಮಾಹಿತಿ ಮತ್ತು ಎಚ್ಚರಿಕೆಗಳು ಸಂದೇಶಗಳು ತಲುಪಲಿವೆ.














Click it and Unblock the Notifications