ವಾಯವ್ಯ ಸಾರಿಗೆಗೆ ಸೇರಲಿವೆ ನೂರಾರು 'ಆಧುನಿಕ' ಬಸ್ಗಳು, ಮಾಹಿತಿ
ಹುಬ್ಬಳ್ಳಿ, ಮಾರ್ಚ್ 15: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ 'ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ' (NWKRTC) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಆಧುನಿಕ, ಸುವ್ಯವಸ್ಥಿತ ವಿವಿಧ ಬಸ್ಗಳು ಸೇರಿ ಒಟ್ಟು 799 ಹೊಸ ಬಸ್ಗಳನ್ನು ನಿಗಮ ಪರಿಚಯಿಸಲು ತಯಾರಿ ನಡೆಸಿದೆ.
ಪ್ರಸಕ್ತ 2023-2024 ನೇ ಸಾಲಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹಲವು ಬಗೆಯ ಹೊಸ ಬಸ್ಗಳ ಖರೀದಿ ಪ್ರಕ್ರಿಯೆ ಆರಂಭಿಸಿದೆ. ಈ ಪೈಕಿ ನಿಗಮವು 20 ಪಲ್ಲಕ್ಕಿ (NWKRTC Pallakki bus) ನಾನ್ ಏಸಿ ಸ್ಲೀಪರ್, 04 ಮಲ್ಟಿ ಆಕ್ಸಲ್ ಏಸಿ ಸ್ಲೀಪರ್ (ಅಂಬಾರಿ ಉತ್ಸವ), 675 BS-6 ಮಾದರಿಯ ಗ್ರಾಮಾಂತರ ಬಸ್ಸುಗಳು ಹಾಗೂ 100 ನಗರ ಸಾರಿಗೆ ಬಸ್ಸುಗಳು ಹೀಗೆ ಒಟ್ಟು 799 ಹೊಸ ಬಸ್ಸುಗಳನ್ನು ತನ್ನ ವ್ಯಾಪ್ತಿಗೆ ಸೇರಿಕೊಳ್ಳಲಿದೆ.

ಕೆಲವು ಬಸ್ಗಳ ಸೇವೆ ಆರಂಭ
ಈ ಮೂಲಕ ಈ ಭಾಗದ ಜನರಿಗೆ ಅತ್ಯುತ್ತಮ ಪ್ರಯಾಣ ಸೇವೆ, ಆರಾಮದಾಯಕ ಸೇವೆ ನೀಡಲು ನಿಗಮವು ಸಜ್ಜಾಗಿದೆ. ಈಗಾಗಲೇ 10 ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, 236 BS-6 ಮಾದರಿಯ ಗ್ರಾಮಾಂತರ ನೂತನ ಬಸ್ಸುಗಳು ರಸ್ತೆಗಿಳಿಸಲಾಗಿದೆ. ಈ ಬಸ್ಗಳು ವಿವಿಧ ನಿಗದಿತ ಮಾರ್ಗದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿವೆ.
100 ನಗರ ಸಾರಿಗೆ ಬಸ್ಸುಗಳ ಖರೀದಿ
ಉಳಿದಂತೆ 10 ಪಲ್ಲಕ್ಕಿ ನಾನ್ ಏಸಿ ಸ್ಲೀಪರ್, 04 ಮಲ್ಟಿ ಆಕ್ಸಲ್ ಏಸಿ ಸ್ಲೀಪರ್ (ಅಂಬಾರಿ ಉತ್ಸವ), 439 BS-6 ಮಾದರಿಯ ಗ್ರಾಮಾಂತರ ಬಸ್ಸುಗಳು ಹಾಗೂ 100 ನಗರ ಸಾರಿಗೆ ಬಸ್ಸುಗಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಟೆಂಡರ್ ಕರೆಯಲಾಗಿದೆ. ಆದಷ್ಟು ಶೀಘ್ರವೇ ಈ ಬಸ್ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದು ನಿಗಮದ ಮೂಲಗಳು ಮಾಹಿತಿ ನೀಡಿವೆ.
350 ಇಲೆಕ್ಟ್ರಿಕಲ್ ಬಸ್
ಮೇಲಿನ ಈ ಎಲ್ಲ ಬಸ್ಗಳ ಜೊತೆಗೆ ನಿಗಮವು ಹಳ್ಳಿ ಸಂಚಾರಕ್ಕೆಂದು 150 ನಗರ ಹಾಗೂ 200 ಗ್ರಾಮಾಂತರ ಹೀಗೆ ಒಟ್ಟು 350 ಇಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಟೆಂಡರ್ ಅನ್ನು ಶೀಘ್ರವೇ ಕರೆಯಲಿದೆ..
ಪಲ್ಲಕ್ಕಿ 'ಸ್ಲೀಪರ್ ಬಸ್ಗಳು' ಸಂತೋಷದ ಪ್ರಯಾಣ ಎಂಬ ಟ್ಯಾಗ್ಲೈನ್ ಒಳಗೊಂಡಿವೆ. 11.3 ಮೀಟರ್ ಉದ್ದದ ಈ ಬಸ್ಗಳು 197 ಎಚ್ಪಿ ಎಂಜಿನ್ ಒಳಗೊಂಡಿವೆ. ಪ್ರಯಾಣಿಕರಿಗೆ ಮಲಗಲು ಆರಾಮದಾಯಕ ವ್ಯವಸ್ಥೆ ಒಳಗೊಂಡಿದೆ ಕೂರಲು ಸೂಕ್ತವಾಗಿದೆ.
ಬಸ್ ಒಳಗೆ ಪ್ರತಿ ಆಸನಕ್ಕೂ ಮೊಬೈಲ್, ಲ್ಯಾಪ್ಟಾಪ್ ಚಾರ್ಜಿಂಗ್, ಆಡಿಯೊ ಸ್ಪೀಕರ್, ಪಾದರಕ್ಷೆಗಳನ್ನು ಇಡುವ ಸೌಲಭ್ಯ ಕಲ್ಪಿಸಲಾಗಿದೆ.

ಓಡಿಸಿ ಬಿಟ್ಟ ಬಸ್ಗಳು ಬರದಿದ್ದರೆ ಸಾಕು
ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿ ಎಂದರೆ ರಾಜಕಾರಣಿಗಳಿಗೆ ತಾತ್ಸಾರ. ಭಾಗದ ಜಿಲ್ಲೆಗಳ ಅಭಿವೃದ್ಧಿ, ಸಾರಿಗೆ ಸೌಲಭ್ಯ ಸೇರಿದಂತೆ ಅನೇಕ ವಿಚಾರಗಳಲ್ಲಿ ಉತ್ತರ ಕರ್ನಾಟಕಕ್ಕೆ ಹಿಂದುಳಿದ ಪಟ್ಟ ಬೀಳಲು ಮೂಲ ಕಾರಣ ಈ ಭಾಗದ ರಾಜಕಾರಣಿಗಳ ನಿರ್ಲಕ್ಷ್ಯ. ಇವರು ನಮಗೆ ಸೌಲಭ್ಯಗಳು ಬೇಕು ಎಂದು ಹಠಕ್ಕೆ ಬಿದ್ದು ವಿಶೇಷ ಅನುದಾನ ತಂದಿರುವ ನಿದರ್ಶನಗಳು ತೀರ ವಿರಳವಾಗಿವೆ.
ಅಭಿವೃದ್ಧಿಯಲ್ಲಿ ನಾವು ಹಿಂದುಳಿಯಲು ಇಲ್ಲಿನ ರಾಜಕಾರಣಿಗಳೇ ಬೇಜವಾಬ್ದಾರಿಯೇ ಕಾರಣ ಎಂದು ಇಲ್ಲಿನ ಮಂದಿ ಕಿಡಿ ಕಾರಿದ್ದಾರೆ. ಓಡಿಸಿ ಬಿಟ್ಟ ಬಸ್ ಈ ಭಾಗಕ್ಕೆ ಬರದಿದ್ದರೆ ಸಾಕು ಎಂದು ಪ್ರಯಾಣಿಕರು ಪ್ರಾರ್ಥಿಸುತ್ತಿದ್ದಾರೆ.
ವಾಯವ್ಯ ಸಾರಿಗೆಯು ಬಸ್ಗಳ ಕೊರತೆಯಿಂದ ಅಂತಾರಾಜ್ಯ ಕೇಲ ಸಾರಿಗೆಗಳನ್ನು ಸ್ಥಗಿತಗೊಳಿಸಿದರೂ ನಮ್ಮ ರಾಜಕಾರಣಿಗಳು ಚಿಂತಿಸಲಿಲ್ಲ. ಸದನದಲ್ಲಿ ಗಟ್ಟಿಧ್ವನಿ ಎತ್ತಲಿಲ್ಲ. ಹೀಗಾಗಿ ಉತ್ತರದ ಸಾರಿಗೆ ಸಂಕಟ ನಿತ್ಯ ನಿರಂತರವಾಗಿದೆ ಎಂದು ಪ್ರಾಜ್ಞರು ನೋವು ವ್ಯಕ್ತಪಡಿಸಿದ್ದಾರೆ. ಈಗ ಹೊಸ ಬಸ್ ಗಳು ಯಾವ ಸ್ಥಿತಿ ಇರುತ್ತವೆ ಸಹ ನೋಡಬೇಕು. ಕಾರಣ ಬೇರೆ ಭಾಗದಲ್ಲಿ ಓಡಿಸಿ ಬಿಟ್ಟ ಬಸ್ಗಳನ್ನೇ ಇಲ್ಲಿ ನೀಡುವ ಪದ್ಧತಿಯೊಂದು ಚಾಲ್ತಿಯಲ್ಲಿದೆ.












Click it and Unblock the Notifications