ಬೇಳೆ ಕಾಳು ದಾಸ್ತಾನು ಇಟ್ಟುಕೊಂಡವರ ಮೇಲೆ ಜಪ್ತಿ ಕ್ರಮ
ಬೆಂಗಳೂರು, ಅಕ್ಟೋಬರ್. 26: ಬೇಳೆ ಕಾಳುಗಳ ಮೇಲಿನ ಅಕ್ರಮ ಸಂಗ್ರಹಣೆ ಮೇಲಿನ ದಾಳಿ ನಿರಂತರವಾಗಿ ಮುಂದುವರಿದಿದೆ. ಕಲಬುರಗಿ ಜಿಲ್ಲೆಯಲ್ಲಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು 1,441 ಕ್ವಿಂಟಲ್ ಬೇಳೆ ವಶಪಡಿಸಿಕೊಂಡಿದ್ದಾರೆ.
ಚಿಲ್ಲರೆ ವಹಿವಾಟುದಾರರು, ಸಗಟು ವ್ಯಾಪಾರಸ್ಥರು ಹಾಗೂ ದಾಲ್ಮಿಲ್ಗಳ ಮೇಲೆ ಅಧಿಕಾರಿಗಳು ಭಾನುವಾರ ಸಹ ದಾಳಿ ನಡೆಸಿ ಅಕ್ರಮ ಮತ್ತು ಹೆಚ್ಚುವರಿ ದಾಸ್ತಾನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳ 11 ತಂಡಗಳು ಸತತ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ಚಿಲ್ಲರೆ ಮಾರುಕಟ್ಟೆಯಲ್ಲಿ ತೊಗರಿ ಮತ್ತು ಉದ್ದು ದ್ವಿಶತಕ ಬಾರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಯನಿರತವಾಗಿದ್ದು ಬೇಳೆ ಕಾಳು ದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಕಳೆದ ಒಂದು ವಾರದಿಂದ ದೇಶಾದ್ಯಂತ ದಾಳಿ ನಡೆಸಲಾಗುತ್ತಿದೆ.
13 ರಾಜ್ಯಗಳಲ್ಲಿ 6,077 ದಾಳಿ ನಡೆಸುವ ಮೂಲಕ ಸುಮಾರು 75,000 ಟನ್ ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 74,846 ಟನ್ನಷ್ಟು ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಪೈಕಿ ಮಹಾರಾಷ್ಟ್ರ ವೊಂದರಿಂದಲೇ 46,397 ಟನ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಕರ್ನಾಟಕದಲ್ಲಿ 8,755 ಟನ್, ಬಿಹಾರದಲ್ಲಿ 4,933 ಟನ್, ಛತ್ತೀಸ್ಗಢದಲ್ಲಿ 4,530 ಟನ್, ತೆಲಂಗಾಣದಲ್ಲಿ 2,546 ಟನ್, ಮಧ್ಯ ಪ್ರದೇಶದಲ್ಲಿ 2,295 ಟನ್ ಮತ್ತು ರಾಜಸ್ಥಾನದಲ್ಲಿ 2,222 ಟನ್ಗಳಷ್ಟು ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ.