ಕರ್ನಾಟಕದಲ್ಲಿ ಕೊವಿಡ್-19 ರೋಗಿಗಳಿಗೆ ಆಕ್ಸಿಜನ್ ಒದಗಿಸಲು ಕ್ರಮ
ಬೆಂಗಳೂರು, ಮೇ 3: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಪ್ರತಿನಿತ್ಯ ನೂರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಇತ್ತೀಚಿಗಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ವೈದ್ಯಕೀಯ ವ್ಯವಸ್ಥೆ ಇಲ್ಲದೇ 24ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ಪ್ರತಿನಿತ್ಯ ನೂರಾರು ಸೋಂಕಿತರು ಮಹಾಮಾರಿಯಿಂದಾಗಿ ಪ್ರಾಣ ಬಿಡುತ್ತಿದ್ದಾರೆ. ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ರೋಗಿಗಳಿಗೆ ಹಾಸಿಗೆ, ಆಕ್ಸಿಜನ್, ಐಸಿಯು ಬೆಡ್ ಸೇರಿದಂತೆ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪವಿದೆ.
ಕೇಂದ್ರ ಸರಕಾರದ ವಿರುದ್ದ ಕೊರೊನಾ ತಜ್ಞರ ಸಮಿತಿಯ ಗಂಭೀರ ಆರೋಪ
ಚಾಮರಾಜನಗರ ಜಿಲ್ಲೆಯಲ್ಲಿ ಆಮ್ಲಜನಕ ವ್ಯವಸ್ಥೆ ಇಲ್ಲದೇ 24ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ ಆಮ್ಲಜನಕ ವ್ಯವಸ್ಥೆ ಹಾಗೂ ವೈದ್ಯಕೀಯ ಅಗತ್ಯತೆ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಒಂದು ವರದಿ ಇಲ್ಲಿದೆ ಓದಿ.
ಆಮ್ಲಜನಕ ಉತ್ಪಾದಕರು, ಸರಬರಾಜುದಾರರ ಜೊತೆ ಸಿಎಂ ಸಭೆ:
*ಈಗ ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಆಕ್ಸಿಜನ್ ಕೋಟಾದಲ್ಲಿ ಯಾವುದೇ ರೀತಿ ಕಡಿತವಾಗದಂತೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು
* ಆಕ್ಸಿಜನ್ ಟ್ಯಾಂಕರ್ಗಳನ್ನು ತುಂಬಿಸುವ ಅವಧಿಯನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳುವುದು
* ಆಕ್ಸಿಜನ್ ಟ್ಯಾಂಕರ್ಗಳು ತಡೆರಹಿತ ಪ್ರಯಾಣಕ್ಕಾಗಿ ಗ್ರೀನ್ ಕಾರಿಡಾರ್ಗಳನ್ನು ಒದಗಿಸುವುದು
* ಟೋಲ್ಗಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಟೋಲ್ಗಳಿಗೆ ನಿರ್ದೇಶನ ನೀಡುವುದು
* ನೈಟ್ರೋಜನ್, ಆರ್ಗನ್ ಅನಿಲಗಳ ಸಾಗಣೆ ಟ್ಯಾಂಕರ್ಗಳನ್ನು ಆಕ್ಸಿಜನ್ ಸಾಗಣೆಗೆ ಪರಿವರ್ತಿಸಲು ಕ್ರಮವಹಿಸುವುದು
* ತುರ್ತು ಅಗತ್ಯಕ್ಕಾಗಿ ಆಕ್ಸಿಜನ್ ವಾಹನಗಳ ಚಾಲನೆಗಾಗಿ LPG ಟ್ಯಾಂಕರ್ಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು ಅಗತ್ಯವಿದ್ದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು
* ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರು ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಿಯೋಜಿಸಲ್ಪಟ್ಟ ಅಧಿಕಾರಿಗೆ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಡೆರಹಿತವಾಗಿ ಆಕ್ಸಿಜನ್ ಪೂರೈಕೆ ಮಾಡಲು ಕೋರಲಾಯಿತು
* ಲಭ್ಯವಿರುವ ಟ್ಯಾಂಕರ್ ಅನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಸೂಚಿಸಲಾಯಿತು