ಕೇಂದ್ರ ಸರಕಾರದ ವಿರುದ್ದ ಕೊರೊನಾ ತಜ್ಞರ ಸಮಿತಿಯ ಗಂಭೀರ ಆರೋಪ
ಹಲವು ರಾಜ್ಯಗಳು ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಮೊರೆ ಹೋಗಿದ್ದರೂ ಕೊರೊನಾ ಆರ್ಭಟ ಮುಂದುವರಿಯುತ್ತಲೇ ಇದೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಮಸ್ಯೆಗಳು ಇನ್ನಿಲ್ಲದಂತೇ ಕಾಡುತ್ತಿದೆ.
ಮೇ ಒಂದರಿಂದ ಹದಿನೆಂಟು+ ವಯಸ್ಸಿನವರಿಗೆ ಲಸಿಕೆ ನೀಡಲು ಆರಂಭಿಸಲಾಗುವುದು ಎನ್ನುವ ಪ್ರಧಾನಿ ಮೋದಿಯ ಘೋಷಣೆ, ಬರೀ ಮಾತಲ್ಲೇ ಉಳಿದಿದೆ. ಯಾವುದೇ ಮುಂದಾಲೋಚನೆಯಿಲ್ಲದೇ ಎಂಬತ್ತಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ರಫ್ತು ಮಾಡಿ ವಿಶ್ವಗುರು ಆಗಲು ಹೋಗಿ, ದೇಶದಲ್ಲಿ ಲಸಿಕೆಗೆ ಹಾಹಾಕಾರ ಉಂಟಾಗಲು ನೇರವಾಗಿ ಮೋದಿ ಸರಕಾರವನ್ನೇ ದೂಷಿಸಬೇಕಾಗಿದೆ.
ಕಳೆದ ವರ್ಷಾಂತ್ಯದಲ್ಲಿ ಕೊರೊನಾ ಮೊದಲನೇ ಅಲೆ ಕಮ್ಮಿಯಾಗುತ್ತಾ ಬಂದ ಮೇಲೆ, ಜನಜೀವನ ಎಂದಿನಂತೆ ಸಾಗಲು ಆರಂಭಿಸಿತು. ಆದರೆ, ಅಷ್ಟೊತ್ತಿಗೆ ಬೇರೆ ಬೇರೆ ದೇಶಗಳಲ್ಲಿ ಎರಡನೇ ಮಾರಿ ಶುರುವಾಗಿತ್ತು.
ಕೊರೊನಾ ಆರೋಗ್ಯ ಎಮರ್ಜೆನ್ಸಿಯನ್ನು ಕೇಂದ್ರ ಸರಕಾರ ಸರಿಯಾಗಿ ನಿಭಾಯಿಸುವಲ್ಲಿ ಎಡವಿತ್ತು ಎನ್ನುವ ಆರೋಪ ಹಿಂದಿನಿಂದಲೂ ಇತ್ತು. ಈಗ, ಐವರು ತಜ್ಞರ ಸಮಿತಿ ನೀಡಿದ್ದ ಎಚ್ಚರಿಕೆಯನ್ನು ಕೇಂದ್ರ ಸರಕಾರ ನಿರ್ಲ್ಯಕ್ಷಿಸಿತು ಎನ್ನುವ ಆರೋಪ ಸಮಿತಿ ಸದಸ್ಯರೇ ಮಾಡಿದ್ದಾರೆ. ಏನಿದು ಆರೋಪ?

ಕೊರೊನಾ ತಜ್ಞರ ಸಮಿತಿಯಲ್ಲಿದ್ದ ಐವರು ಕೇಂದ್ರ ಸರಕಾರದ ಅಸಡ್ದೆಯ ಬಗ್ಗೆ ಗಂಭೀರ ಆರೋಪ
ಕೊರೊನಾ ತಜ್ಞರ ಸಮಿತಿಯಲ್ಲಿದ್ದ ಐವರು ಕೇಂದ್ರ ಸರಕಾರದ ಅಸಡ್ದೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಿದ್ದ ಇವರುಗಳು, "ನಾವು ರೂಪಾಂತರ ವೈರಸ್ ಬಗ್ಗೆ ಅಧ್ಯಯನ ನಡೆಸಿ, ವಿಶೇಷ ಮುತುವರ್ಜಿ ವಹಿಸಿ, ಕೇಂದ್ರದ ಆರೋಗ್ಯ ಸಚಿವಾಲಯಕ್ಕೆ ವರದಿಯನ್ನು ನೀಡಿದ್ದೆವು. ನಮ್ಮ ವರದಿಗೆ ಕೇಂದ್ರ ಸರಕಾರ ಮುತುವರ್ಜಿಯನ್ನೇ ತೋರಲಿಲ್ಲ"ಎನ್ನುವ ಆರೋಪವನ್ನು ಮಾಡಿದ್ದಾರೆ.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬರುವುದು ಎಷ್ಟು ಮುಖ್ಯ
"ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬರುವುದು ಎಷ್ಟು ಮುಖ್ಯ ಎಂದು ವರದಿಯಲ್ಲಿ ನಾವು ಉಲ್ಲೇಖಿಸಿದ್ದೆವು. ವೈರಸ್ ಹರಡುವುದನ್ನು ತಪ್ಪಿಸಲು ಮಾರ್ಚ್ ತಿಂಗಳಲ್ಲೇ ಲಾಕ್ ಡೌನ್ ನಂತಹ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾವು ಶಿಫಾರಸು ಮಾಡಿದ್ದೆವು"ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.

ಖುದ್ದು ಪ್ರಧಾನಿಗಳೇ, ಸಾರ್ವಜನಿಕ ಸಭೆಯನ್ನು ನಡೆಸಿದರು
"ಸಾರ್ವಜನಿಕರು ಮಾಸ್ಕ್ ಧರಿಸದೇ ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಖುದ್ದು ಪ್ರಧಾನಿಗಳೇ, ಸಾರ್ವಜನಿಕ ಸಭೆಯನ್ನು ನಡೆಸಿದರು, ಅಲ್ಲಿ ಲಕ್ಷಾಂತರ ಜನ ಜಮಾವಣೆಗೊಂಡರು. ರೈತರ ಹೋರಾಟದಲ್ಲೂ ಹೀಗೇ ಆಯಿತು"ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ಇಂದು ದೇಶದಲ್ಲಿ ದಿನವೊಂದಕ್ಕೆ ನಾಲ್ಕು ಲಕ್ಷಕ್ಕೆ ಸಮೀಪ ಪಾಸಿಟೀವ್ ಕೇಸುಗಳು ಬರುತ್ತಿವೆ
"ಕೊರೊನಾ ಮೊದಲನೇ ಅಲೆಗಿಂತ ಈಗಿನ ವೈರಸ್ ಹೆಚ್ಚು ಬೇಗ ಹರಡುತ್ತದೆ. ಆದರೆ, ಎಲ್ಲವನ್ನೂ ವರದಿಯಲ್ಲಿ ಉಲ್ಲೇಖಿಸಿದರೂ, ನಮ್ಮ ವರದಿಯ ಬಗ್ಗೆ ಕೇಂದ್ರ ಸರಕಾರ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಪರಿಣಾಮ ಇಂದು ದೇಶದಲ್ಲಿ ದಿನವೊಂದಕ್ಕೆ ನಾಲ್ಕು ಲಕ್ಷಕ್ಕೆ ಸಮೀಪ ಪಾಸಿಟೀವ್ ಕೇಸುಗಳು ಬರುತ್ತಿವೆ"ಎಂದು ಕೊರೊನಾ ತಜ್ಞರ ಸಮಿತಿ ಸದಸ್ಯರು ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications