ಮಂಡ್ಯ ತ್ಯಾಗಕ್ಕೆ ಸಿಗಲಿದೆಯಾ ಪ್ರತಿಫಲ: ರಾಜ್ಯಸಭೆ ಚುನಾವಣೆ ರೇಸ್ನಲ್ಲಿ ಸುಮಲತಾ ಹೆಸರು ಮುಂಚೂಣಿ
ಬೆಂಗಳೂರು: ಕರ್ನಾಟಕದಿಂದ ತೆರವಾಗಿರುವ 4 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಿಗದಿಯಾಗಿದ್ದು, ತೆರೆಮರೆಯ ರಾಜಕೀಯ ಲೆಕ್ಕಾಚಾರಗಳು ಬಿರುಸುಗೊಂಡಿವೆ. ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಕೇವಲ ಒಂದು ಸ್ಥಾನ ಮಾತ್ರ ಸಿಗಲಿದ್ದು, ಈ ಏಕೈಕ ಸೀಟಿಗಾಗಿ ಮೈತ್ರಿಕೂಟದೊಳಗೆ ಭಾರಿ ಪೈಪೋಟಿ ಆರಂಭವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಮೈತ್ರಿ ಧರ್ಮಕ್ಕಾಗಿ ತ್ಯಾಗ ಮಾಡಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಈ ಬಾರಿ ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ವರಿಷ್ಠರು ಗಂಭೀರ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಟ್ಟು: ದೇವೇಗೌಡರೇ ಅಭ್ಯರ್ಥಿ?
ಇನ್ನೊಂದೆಡೆ, ಮೈತ್ರಿಕೂಟಕ್ಕೆ ಸಿಗಲಿರುವ ಈ ಒಂದು ಸ್ಥಾನವನ್ನು ತಮಗೇ ಬಿಟ್ಟುಕೊಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನೇ ಮತ್ತೊಮ್ಮೆ ರಾಜ್ಯಸಭೆಗೆ ಮುಂದುವರಿಸಬೇಕು ಎಂಬುದು ಪ್ರಾದೇಶಿಕ ಪಕ್ಷದ ನಾಯಕರ ಹಠವಾಗಿದೆ. ಆದರೆ ಈ ಬಗ್ಗೆ ಬಿಜೆಪಿ ಹೈಕಮಾಂಡ್ನಿಂದ ಇನ್ನೂ ಯಾವುದೇ ಸ್ಪಷ್ಟ ಹಸಿರು ನಿಶಾನೆ ಸಿಕ್ಕಿಲ್ಲ. ಹೀಗಾಗಿ ದೋಸ್ತಿಗಳ ನಡುವೆ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಮುಂದುವರಿದಿದೆ.

ಬಿಜೆಪಿ ಪಟ್ಟಿಯಲ್ಲೇ ಇರಲಿಲ್ಲ ಸುಮಲತಾ ಹೆಸರು
ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಗಾಗಿ ಕರ್ನಾಟಕ ಬಿಜೆಪಿ ಘಟಕವು ಹೈಕಮಾಂಡ್ಗೆ ಈಗಾಗಲೇ ಒಂದು ಪಟ್ಟಿಯನ್ನು ರವಾನಿಸಿದೆ. ಅದರಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮತ್ತು ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಪ್ರಮುಖ ನಾಯಕರ ಹೆಸರುಗಳಿವೆ. ವಿಶೇಷವೆಂದರೆ ರಾಜ್ಯ ನಾಯಕರು ಕಳುಹಿಸಿದ ಈ ಮೂಲ ಪಟ್ಟಿಯಲ್ಲಿ ಸುಮಲತಾ ಅಂಬರೀಷ್ ಅವರ ಹೆಸರೇ ಇರಲಿಲ್ಲ. ಆದರೆ, ದೆಹಲಿ ಮಟ್ಟದ ಬಿಜೆಪಿ ವರಿಷ್ಠರು ಖುದ್ದಾಗಿ ಸುಮಲತಾ ಅವರ ಹೆಸರನ್ನು ಮುನ್ನೆಲೆಗೆ ತಂದು, ಅವರ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೊಟ್ಟ ಮಾತು ಉಳಿಸಿಕೊಳ್ಳುತ್ತಾ ಹೈಕಮಾಂಡ್?
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ನ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದರು. ಆಗ ಹಾಲಿ ಸಂಸದೆಯಾಗಿದ್ದ ಸುಮಲತಾ ಅವರು ಅಸಮಾಧಾನಗೊಂಡಿದ್ದರೂ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮನವಿಯ ಮೇರೆಗೆ ಸ್ಪರ್ಧೆಯಿಂದ ಹಿಂದೆ ಸರಿದು ಬಳಿಕ ಅಧಿಕೃತವಾಗಿ ಬಿಜೆಪಿ ಸೇರಿದ್ದರು. ಆ ಸಮಯದಲ್ಲಿ ಹೈಕಮಾಂಡ್ ನಾಯಕರು ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರು.
ಲೋಕಸಭೆ ಚುನಾವಣೆ ಮುಗಿದ ನಂತರ ಸುಮಲತಾ ಅವರಿಗೆ ಯಾವುದೇ ಜವಾಬ್ದಾರಿ ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಸುಮಲತಾ ಅವರು ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದರು. ಈ ಭೇಟಿಯ ಬೆನ್ನಲ್ಲೇ ಅವರ ಹೆಸರು ರಾಜ್ಯಸಭೆ ರೇಸ್ನಲ್ಲಿ ಮುಂಚೂಣಿಗೆ ಬಂದಿದೆ. ಮಂಡ್ಯ ತ್ಯಾಗಕ್ಕೆ ಪ್ರತಿಫಲವಾಗಿ ಸುಮಲತಾ ಅವರಿಗೆ ಹೈಕಮಾಂಡ್ ಮಣೆ ಹಾಕುತ್ತಾ ಅಥವಾ ಜೆಡಿಎಸ್ನ ಒತ್ತಡಕ್ಕೆ ಮಣಿಯುತ್ತಾ ಎನ್ನುವುದು ಮುಂದಿನ ಕೆಲವು ದಿನಗಳಲ್ಲಿ ಅಧಿಕೃತವಾಗಿ ಹೊರಬೀಳಲಿದೆ.













Click it and Unblock the Notifications