ನನ್ನ ಗರ್ಭಪಾತಕ್ಕೆ ಸಿಎಂ ವಿಜಯ್ ಅವರೇ ಕಾರಣ, ಮೊದಲ ಮಗು ಬದುಕಲು ಅವಕಾವಿತ್ತು: ಕಣ್ಣೀರಿಟ್ಟ ಖ್ಯಾತ ನಟಿ
ಬಿಗ್ ಬಾಸ್ ಮೂಲಕ ಮನೆಮಾತಾಗಿದ್ದ ನಟಿ ಜೂಲಿ (ಮರಿಯಾ ಜೂಲಿಯಾನಾ) ಅವರು ತಮಿಳುನಾಡು ಸಿಎಂ ಹಾಗೂ ನಟ ದಳಪತಿ ವಿಜಯ್ ಅವರ ಬಗ್ಗೆ ಗಂಭೀರ ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ನನಗೆ ಗರ್ಭಪಾತವಾಗಿದೆ ಎಂದು ಅವರು ಕಣ್ಣೀರು ಹಾಕಿರುವ ಜೂಲಿ, ಈ ಘಟನೆಗೆ ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೇ ಕಾರಣ ಎಂದು ಆರೋಪ ಮಾಡಿರುವುದು ಸಂಚಲನ ಸೃಷ್ಟಿಸಿದೆ.
ನನ್ನ ಮೊದಲ ಮಗು ಸಾವು
ಆನ್ಲೈನ್ ಕಿರುಕುಳ ಮತ್ತು ಚಾರಿತ್ರ್ಯ ವಧೆ ವಿರುದ್ಧ ಚೆನ್ನೈನಲ್ಲಿ ಪೊಲೀಸ್ ದೂರು ದಾಖಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಜೂಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಎದುರಾದ ತೀವ್ರ ನಿಂದನೆ ಮತ್ತು ಟ್ರೋಲ್ಗಳಿಂದಾಗಿ ತಮಗೆ ಗರ್ಭಪಾತವಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಜೂಲಿ, "ನನಗೆ ಜನವರಿಯಲ್ಲಿ ಮೊಹಮ್ಮದ್ ಇಕ್ರೀಮ್ ಅವರೊಂದಿಗೆ ಮದುವೆಯಾಗಿತ್ತು. ನಾವು ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೆವು. ಆದರೆ ಗರ್ಭಪಾತವಾಗಿ ಮಗು ಸಾವನ್ನಪ್ಪಿತು ಎಂದು ಗೋಳಾಡಿದ್ದಾರೆ.

ಆನ್ಲೈನ್ನಲ್ಲಿ ನಡೆದ ನಿರಂತರ ಹಲ್ಲೆ, ಅವಾಚ್ಯ ನಿಂದನೆಗಳು ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದವು. ಈ ತೀವ್ರ ಮಾನಸಿಕ ಒತ್ತಡದ ಕಾರಣದಿಂದಾಗಿ ನನ್ನ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿತು" ಎಂದು ಹೇಳಿದ್ದಾರೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಹಾಗೂ ಸಿಎಂ ವಿಜಯ್ ಅವರ ಬೆಂಬಲಿಗರು ತಮ್ಮನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಅವರು ದೂರಿದ್ದಾರೆ.
₹15 ಲಕ್ಷದ ಕಿಡ್ನಿ ಹಗರಣದ ಸುಳ್ಳು ಆರೋಪ
ತಮ್ಮ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದಿರುವ ಜೂಲಿ, "ನನ್ನ ಹೆಸರನ್ನು ಹಾಳು ಮಾಡಲು ಟಿವಿಕೆ ಬೆಂಬಲಿಗರು ಮತ್ತು ಒಬ್ಬ ವಕೀಲ ಸೇರಿ ಕಥೆ, ಚಿತ್ರಕಥೆ ಬರೆದು ₹15 ಲಕ್ಷದ ಕಿಡ್ನಿ ಹಗರಣದ ಸುಳ್ಳು ಆರೋಪವನ್ನು ನನ್ನ ಮೇಲೆ ಹೊರಿಸಿದ್ದಾರೆ. ಕೇವಲ ಒಬ್ಬ ಮಹಿಳೆ ಟಿವಿಕೆ ಪಕ್ಷದ ವಿರುದ್ಧ ಮಾತನಾಡಿದಳು ಎಂಬ ಒಂದೇ ಕಾರಣಕ್ಕೆ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಜಯ್ ವಿರುದ್ಧ ಜೂಲಿ ವಾಗ್ದಾಳಿ
"ನಟ ವಿಜಯ್ ಅಣ್ಣ ನೇರವಾಗಿ ಈ ಕೆಲಸ ಮಾಡದೇ ಇರಬಹುದು. ಆದರೆ ಅವರ ಬೆಂಬಲಿಗರಿಗೆ ಇಂತಹ ಟ್ರೋಲ್ ಮಾಡಬೇಡಿ ಎಂದು ಒಂದೇ ಒಂದು ಮಾತು ಹೇಳಿದ್ದರೆ, ಇಂದು ನಾನು ನನ್ನ ಮಗುವನ್ನು ಕಳೆದುಕೊಳ್ಳುತ್ತಿರಲಿಲ್ಲ. ನನ್ನ ಮಗುವಿನ ಸಾವಿಗೆ ಅವರೇ ಜವಾಬ್ದಾರರು" ಎಂದು ಜೂಲಿ ಆರೋಪಿಸಿದ್ದಾರೆ. "ಜನರು ವಿಜಯ್ ಅಣ್ಣ ಇನ್ಸ್ಟಾಗ್ರಾಮ್ ಮೂಲಕ ಸಿಎಂ ಆದರು ಎನ್ನುತ್ತಾರೆ. ತಮ್ಮ ವಿರುದ್ಧ ಮಾತನಾಡುವವರ ಮೇಲೆ ದಾಳಿ ಮಾಡಿಸುವುದನ್ನು ಬಿಟ್ಟು, ಅವರು ಸಾರ್ವಜನಿಕರ ಕೆಲಸದ ಕಡೆ ಗಮನ ಹರಿಸಲಿ" ಎಂದು ಹೇಳಿದ್ದಾರೆ.

ಜೂಲಿ ಅವರು ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ (ಡಿಎಂಕೆ ಸರ್ಕಾರದ ಅವಧಿಯಲ್ಲಿ) 8 ಜನರ ವಿರುದ್ಧ ದೂರು ನೀಡಿದ್ದರು. ಚುನಾವಣೆ ಮುಗಿದು ಮೇ ತಿಂಗಳಲ್ಲಿ ವಿಜಯ್ ನೇತೃತ್ವದ ಹೊಸ ಸರ್ಕಾರ ಬಂದ ಬಳಿಕ ತಮಗೆ ಪೊಲೀಸರಿಂದ ನೋಟಿಸ್ ಬಂದಿದೆ ಎಂದು ಜೂಲಿ ತಿಳಿಸಿದ್ದಾರೆ. "ನೀವು ದೂರು ನೀಡಿದಾಗ ಡಿಎಂಕೆ ಸರ್ಕಾರವಿತ್ತು, ಈಗ ಬೇರೆ ಸರ್ಕಾರ ಬಂದಿದೆ. ಅನಾಮಧೇಯ ಖಾತೆಗಳ ಟ್ರೋಲ್ಗೆ ವಿಜಯ್ ಅವರನ್ನು ಹೇಗೆ ಹೊಣೆ ಮಾಡುತ್ತೀರಿ?" ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೂಲಿ, "ನಾನು ಚುನಾವಣಾ ಸಮಯದಲ್ಲಿ ದೂರು ನೀಡಿದ್ದೆ. ಈಗ ಹೊಸ ಸರ್ಕಾರ ಬಂದಿದೆ ಎಂದ ಮೇಲೆ ಅವರ ಬೆಂಬಲಿಗರು ಮಾಡುತ್ತಿರುವ ತಪ್ಪುಗಳಿಗೆ ಅವರೇ ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವೇ?" ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ವಿಜಯ್ ಅಭಿಮಾನಿಗಳು ಜೂಲಿ ಅವರ ಈ ಆರೋಪವನ್ನು ತಳ್ಳಿಹಾಕಿದ್ದು, ವೈಯಕ್ತಿಕ ಗರ್ಭಪಾತದ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜೂಲಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗರ್ಭಪಾತಕ್ಕೆ ವಿಜಯ್ ಅವರೇ ಕಾರಣ ಎಂದಿರುವುದು ತಮಿಳುನಾಡು ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವುದಂತೂ ನಿಜ.













Click it and Unblock the Notifications