ಡಿ.ಕೆ.ಶಿವಕುಮಾರ್ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ: ಯಾರಿಗೆ ಸಿಗಲಿದೆ ಚಾನ್ಸ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಬಹುನಿರೀಕ್ಷಿತ ನಾಯಕತ್ವ ಬದಲಾವಣೆ ಪ್ರಕ್ರಿಯೆ ಸುಸೂತ್ರವಾಗಿ ಮುಗಿದಿದ್ದು, ಈಗ ಎಲ್ಲರ ಕಣ್ಣು ನೂತನ ಸಚಿವ ಸಂಪುಟ ರಚನೆಯ ಮೇಲೆ ನೆಟ್ಟಿದೆ. ಸಿದ್ದರಾಮಯ್ಯ ಹಾಗೂ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ.ಶಿವಕುಮಾರ್ ಅವರು ಯಾವುದೇ ಬಹಿರಂಗ ಭಿನ್ನಾಭಿಪ್ರಾಯಗಳಿಲ್ಲದೆ 'ಜೋಡೆತ್ತು'ಗಳಂತೆ ಒಗ್ಗಟ್ಟು ಪ್ರದರ್ಶಿಸಿ ಪವರ್ ಶೇರಿಂಗ್ ಸೂತ್ರಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ, ಹೈಕಮಾಂಡ್ಗೆ ಈಗ ಹೊಸ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಮತ್ತು ಹಳೆಯ ಸಚಿವರಿಗೆ ಕೋಕ್ ನೀಡಬೇಕು ಎನ್ನುವ ಅಸಲಿ ಸರ್ಕಸ್ ಶುರುವಾಗಿದೆ. ಮೂಲಗಳ ಪ್ರಕಾರ ಮೊದಲ ಹಂತದ ಸಂಭಾವ್ಯ ಸಚಿವರ ಪಟ್ಟಿ ಈಗಾಗಲೇ ಹೈಕಮಾಂಡ್ ಕೈಸೇರಿದ್ದು, ಈ ಪೈಕಿ ಕೆಲವರ ಹೆಸರು ಅಂತಿಮವಾಗಿದೆ.
ಸಚಿವ ಸ್ಥಾನ ನೀಡುವ ಬಗ್ಗೆ ಎಐಸಿಸಿ ಮಟ್ಟದಲ್ಲಿ ಹೈವೋಲ್ಟೇಜ್ ಸಭೆಗಳು ನಡೆಯುತ್ತಿವೆ. ಮಂತ್ರಿಗಿರಿಗಾಗಿ ಹೊಸಬರು ಹಾಗೂ ಹಳಬರ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಶಾಸಕರು ದೆಹಲಿಗೆ ದಂಡಯಾತ್ರೆ ಆರಂಭಿಸಿದ್ದಾರೆ. ಈ ನಡುವೆ ಮೊದಲ ಹಂತದಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ 10ರಿಂದ 12 ನಾಯಕರ ಸಂಭಾವ್ಯ ಪಟ್ಟಿಯನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಪಟ್ಟಿಯನ್ನು ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ವೇಣುಗೋಪಾಲ್ ಪರಿಶೀಲಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಂತಿಮ ಅನುಮೋದನೆಗೆ ರವಾನಿಸಲಿದ್ದಾರೆ.

ಮೊದಲ ಹಂತದ ಸಂಭಾವ್ಯ ಸಚಿವರು ಯಾರು?
ಜೂನ್ 3ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಬಹುದಾದ ಪ್ರಮುಖ ನಾಯಕರ ವಿವರ ಇಲ್ಲಿದೆ.
ಯು.ಟಿ. ಖಾದರ್
ಕರಾವಳಿ ಭಾಗದ ಪ್ರಭಾವಿ ಮತ್ತು ಹಿರಿಯ ನಾಯಕರಾಗಿರುವ ಇವರು, ಈ ಹಿಂದೆಯೂ ಸಚಿವರಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕರಾವಳಿ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಾತಿನಿಧ್ಯಕ್ಕಾಗಿ ಇವರ ಹೆಸರು ಮುಂಚೂಣಿಯಲ್ಲಿದೆ. ಹಾಲಿ ವಿಧಾನಸಭೆಯ ಸ್ಪೀಕರ್ ಆಗಿರುವ ಖಾದರ್ಗೆ ಮಂತ್ರಿಗಿರಿ ಒಲಿಯಲಿದೆ ಎಂದು ಹೇಳಲಾಗುತ್ತಿದೆ.
ಸತೀಶ್ ಜಾರಕಿಹೊಳಿ
ಬೆಳಗಾವಿ ಹಾಗೂ ಕಿತ್ತೂರು ಕರ್ನಾಟಕ ಭಾಗದ ಪ್ರಬಲ ನಾಯಕ. ಪರಿಶಿಷ್ಟ ಪಂಗಡ (ST) ಸಮುದಾಯದ ದೊಡ್ಡ ನಾಯಕರಾಗಿರುವ ಇವರು ಸಂಘಟನಾ ಶಕ್ತಿಯಾಗಿದ್ದು, ಉತ್ತರ ಕರ್ನಾಟಕ ಭಾಗದ ಕೋಟಾದಡಿ ಇವರ ಸೇರ್ಪಡೆ ನಿಶ್ಚಿತ ಎನ್ನಲಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲೂ ಸತೀಶ್ ಅವರು ಸಚಿವ ಸ್ಥಾನದಲ್ಲಿದ್ದು, ಡಿಕೆಶಿ ಟೀಂನಲ್ಲೂ ಮಹತ್ವದ ಖಾತೆ ಪಡೆಯಲಿದ್ದಾರಂತೆ.
ಡಾ. ಜಿ. ಪರಮೇಶ್ವರ್
ಮಾಜಿ ಉಪಮುಖ್ಯಮಂತ್ರಿಯಾಗಿ ಹಾಗೂ ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿರಿಯ ದಲಿತ ನಾಯಕ. ಆಡಳಿತದ ಅನುಭವ ಇವರ ಪ್ಲಸ್ ಪಾಯಿಂಟ್ ಆಗಿದ್ದು, ಮೊದಲ ಪಟ್ಟಿಯಲ್ಲಿ ಇವರ ಹೆಸರು ಪ್ರಮುಖವಾಗಿದೆ. ಸದ್ಯ ಹಾಲಿ ಗೃಹ ಸಚಿವರೂ ಆಗಿರುವ ಪರಮೇಶ್ವರ್ ಅವರಿಗೆ ಖಾತೆ ಬದಲಾಗುವ ಸಾಧ್ಯತೆ ಇದೆ. ಅಥವಾ ಇರುವ ಗೃಹ ಖಾತೆಯಲ್ಲೇ ಮುಂದುವರಿಯುತ್ತಾರಾ ಎನ್ನುವುದು ನಾಳೆ ತಿಳಿಯಲಿದೆ.
ಪ್ರಿಯಾಂಕ್ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ದಲಿತ ಸಮುದಾಯದ ಯುವ ನಾಯಕ. ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳನ್ನು ನಿಭಾಯಿಸಿದ ಅನುಭವ ಇವರಿಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿಯೂ ಪ್ರಿಯಾಂಕ್ ಸ್ಥಾನ ಗಿಟ್ಟಿಸಿಕೊಳ್ಳುವುದು ಫಿಕ್ಸ್ ಎನ್ನಲಾಗುತ್ತಿದೆ.

ರಾಮಲಿಂಗಾರೆಡ್ಡಿ
ಬೆಂಗಳೂರು ನಗರ ರಾಜಕಾರಣದ ಅತ್ಯಂತ ಹಿರಿಯ ಮತ್ತು ಪ್ರಭಾವಿ ನಾಯಕ. ಸಂಘಟನಾ ಚತುರರಾಗಿರುವ ರೆಡ್ಡಿ ಅವರಿಗೆ ಬೆಂಗಳೂರು ನಗರದ ಕೋಟಾದಡಿ ಹಾಗೂ ರೆಡ್ಡಿ ಸಮುದಾಯದ ಪ್ರಾತಿನಿಧ್ಯದಡಿ ಸಚಿವ ಸ್ಥಾನ ಲಭಿಸುವುದು ಬಹುತೇಕ ಖಚಿತ. ಈಗ ಸಾರಿಗೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯನ್ನು ನಿಭಾಯಿಸಿರುವ ಇವರಿಗೆ ಡಿಕೆಶಿ ಟೀಂನಲ್ಲಿ ಗೃಹ ಖಾತೆ ಸಿಗಬಹುದು ಎಂಬ ಚರ್ಚೆಯೂ ಜೋರಾಗಿದೆ.
ಯತೀಂದ್ರ ಸಿದ್ದರಾಮಯ್ಯ/ಭೈರತಿ ಸುರೇಶ್
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಿಂದ ಈ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಹೈಕಮಾಂಡ್ ಮಾತು ಕೊಟ್ಟಿರುವ ಹಿನ್ನೆಲೆಯಲ್ಲಿ ಸ್ವತಃ ಡಾ. ಯತೀಂದ್ರ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಒಂದು ವೇಳೆ ಯತೀಂದ್ರ ಮಿಸ್ ಆದರೆ ಭೈರತಿ ಸುರೇಶ್ ಅವರಿಗೆ ಲಕ್ ಖುಲಾಯಿಸಲಿದೆ.
ಕೆ.ಜೆ.ಜಾರ್ಜ್
ಬೆಂಗಳೂರು ನಗರದ ಹಿರಿಯ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಹಳೇ ನಿಷ್ಠಾವಂತರು. ಅಲ್ಪಸಂಖ್ಯಾತ (ಕ್ರಿಶ್ಚಿಯನ್) ಕೋಟಾದಡಿ ಇವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಈಗಲೂ ಸಚಿವ ಸ್ಥಾನದಲ್ಲಿರುವ ಜಾರ್ಜ್ಗೆ ಮುಂದೆ ಯಾವ ಖಾತೆ ಸಿಗಲಿದೆ ಎನ್ನುವ ಕುತೂಹಲವಿದೆ.

ಕೃಷ್ಣ ಬೈರೇಗೌಡ
ಬೆಂಗಳೂರಿನ ಮತ್ತೊಬ್ಬ ಪ್ರಮುಖ ಒಕ್ಕಲಿಗ ಸಮುದಾಯದ ಹಿರಿಯ ಶಾಸಕ. ಆಡಳಿತಾತ್ಮಕ ವಿಷಯಗಳಲ್ಲಿ ಉತ್ತಮ ಹಿಡಿತ ಹೊಂದಿರುವ ಇವರು ಸಂಪುಟದ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕಂದಾಯ ಇಲಾಖೆ ಮೂಲಕ ಹೊಸತನಕ್ಕೆ ನಾಂದಿ ಹಾಡಿರುವ ಇವರಿಗೆ ಸಚಿವ ಸ್ಥಾನ ಮುಂದುವರಿಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಎಂ.ಬಿ.ಪಾಟೀಲ್ ಅಥವಾ ಈಶ್ವರ ಖಂಡ್ರೆ
ಲಿಂಗಾಯತ ಸಮುದಾಯದ ಪ್ರಾತಿನಿಧ್ಯಕ್ಕಾಗಿ ಈ ಇಬ್ಬರು ಪ್ರಭಾವಿ ನಾಯಕರ ನಡುವೆ ತೀವ್ರ ಪೈಪೋಟಿ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಬ್ಯಾಂಕ್ ಗಟ್ಟಿಯಾಗಿಡಲು ಇವರಲ್ಲಿ ಒಬ್ಬರಿಗೆ ಮೊದಲ ಹಂತದಲ್ಲೇ ಮಂತ್ರಿ ಸ್ಥಾನ ಸಿಗಲಿದೆ.
ಜೂನ್ 3ರಂದು ಸಂಜೆ ರಾಜಭವನದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪ್ರಮಾಣವಚನ ಸಮಾರಂಭದಲ್ಲಿ ಯಾರಿಗೆಲ್ಲಾ ಅದೃಷ್ಟ ಒಲಿಯಲಿದೆ ಎಂಬ ಅಧಿಕೃತ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.













Click it and Unblock the Notifications