14 ದಿನಗಳಲ್ಲೇ ಉತ್ತರಾಖಂಡ್ ಸಿಎಂ ತೀರಥ್ ಸಿಂಗ್ ರಾವತ್ ಗುಣಮುಖ
ನವದೆಹಲಿ, ಏಪ್ರಿಲ್ 04: ಕಳೆದ ಎರಡು ದಿನಗಳಿಂದ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾವೈರಸ್ ನಕಾರಾತ್ಮಕ ವರದಿ ಬಂದಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ತಿಳಿಸಿದ್ದಾರೆ.
"ಕೊವಿಡ್-19 ಸೋಂಕಿನಿಂದ ಬಳಲುತ್ತಿದ್ದ ನನ್ನ ಆರೋಗ್ಯದಲ್ಲಿ ಕ್ಷಿಪ್ರಗತಿಯ ಚೇತರಿಕೆ ಕಂಡು ಬಂದಿದೆ. ಕಳೆದ 48 ಗಂಟೆಗಳಲ್ಲಿ ನಡೆಸಿದ ಕೊರೊನಾವೈರಸ್ ಸೋಂಕು ತಪಾಸಣೆಯಲ್ಲಿ ಎರಡು ಬಾರಿ ನೆಗೆಟಿವ್ ಎಂದು ವರದಿ ಬಂದಿದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಸ್ನೇಹಿತರು, ಹಿತೈಷಿಗಳು ಮತ್ತು ಬೆಂಬಲಿಗರಿಗೆ ನಾನು ಸದಾ ಕೃತಜ್ಞತೆಯನ್ನು ಅರ್ಪಿಸುತ್ತೇನೆ" ಎಂದು ತೀರಥ್ ಸಿಂಗ್ ರಾವತ್ ಟ್ವೀಟ್ ಮಾಡಿದ್ದಾರೆ.
ಉತ್ತರಾಖಂಡ್ ಸಿಎಂ ತೀರಥ್ ಸಿಂಗ್ ರಾವತ್ರಿಗೆ ಕೊರೊನಾವೈರಸ್
ಉತ್ತರಾಖಂಡ್ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರಿಗೆ ಮಾರ್ಚ್ 22ರಂದು ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ಸ್ಪಷ್ಟವಾಗಿತ್ತು. ಅಂದು ನನ್ನ ಕೊರೊನಾ ಪರೀಕ್ಷಾ ವರದಿ ಧನಾತ್ಮಕವಾಗಿ ಬಂದಿದೆ. ನಾನು ಚೆನ್ನಾಗಿದ್ದೇನೆ ಮತ್ತು ನನಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಬರೆದುಕೊಂಡಿದ್ದರು.
ಆಪ್ತರಿಗೆ ವೈದ್ಯಕೀಯ ತಪಾಸಣೆಯ ಸಲಹೆ:
"ವೈದ್ಯರ ಮೇಲ್ವಿಚಾರಣೆಯಲ್ಲಿ ನಾನು ಸ್ವಯಂಪ್ರೇರಿತ ದಿಗ್ಬಂಧನದಲ್ಲಿ ಇದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ನಿಕಟ ಸಂಪರ್ಕದಲ್ಲಿ ಇದ್ದವರು ದಯವಿಟ್ಟು ಜಾಗರೂಕರಾಗಿರಿ, ಕೊರೊನಾವೈರಸ್ ಸೋಂಕಿತ ತಪಾಸಣೆಗೆ ಒಳಗಾಗಬೇಕು" ಎಂದು ತೀರಥ್ ಸಿಂಗ್ ರಾವತ್ ಮನವಿ ಮಾಡಿಕೊಂಡಿದ್ದರು.
ಭಾರತದಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆ:
ದೇಶದಲ್ಲಿ ಒಂದೇ ದಿನ 93,249 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 1,24,85,509ಕ್ಕೆ ಏರಿಕೆಯಾಗಿದೆ. 513 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1,64,623ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 60,048 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,16,29,289 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ಹೊರತಾಗಿ 6,91,597 ಸಕ್ರಿಯ ಪ್ರಕರಣಗಳಿವೆ.