ಕರ್ನಾಟಕದ 63 ಲಕ್ಷ ರೈತರ ಖಾತೆಗೆ 11ನೇ ಕಂತು: ಕೇಂದ್ರದಿಂದ 1269.85 ಕೋಟಿ ಬಿಡುಗಡೆ
ನವದೆಹಲಿ, ಜೂನ್ 1: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 21,000 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮಂಗಳವಾರದ ರೈತರ ಖಾತೆಗೆ 11ನೇ ಕಂತಿನ ಹಣವನ್ನು ಜುಲೈ 31ರಂದು ಜಮಾ ಮಾಡಲಾಗಿದೆ. "ಕರ್ನಾಟಕದ 63 ಲಕ್ಷ ರೈತರಿಗೆ 1269.85 ಕೋಟಿ ರೂಪಾಯಿ ಹಣವನ್ನು ವರ್ಗಾಯಿಸಲಾಗಿದೆ," ಎಂದು ಸಂಸದೆ ಶೋಭಾ ಕರಂದ್ಲಾಜೆ ಕೂ ಮಾಡಿದ್ದಾರೆ.
8 ವರ್ಷದಲ್ಲಿ ಮೋದಿ ಸರ್ಕಾರದ ಎಂಟು ಸಾಧನೆಗಳೇನು?
"ರೈತರ ಕಲ್ಯಾಣಕ್ಕಾಗಿ ಕಟಿಬದ್ಧವಾಗಿದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ. #PMKisan ಯೋಜನೆಯಡಿಯಲ್ಲಿ ಇಂದು ಕರ್ನಾಟಕದ ಒಟ್ಟು 63 ಲಕ್ಷಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 1269.85 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ," ಎಂದು ಸಂಸದೆ ಶೋಭಾ ಕರಂದ್ಲಾಜೆ ಬರೆದುಕೊಂಡಿದ್ದಾರೆ.
ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ
'ಗರೀಬ್ ಕಲ್ಯಾಣ್ ಸಮ್ಮೇಳನ'ದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮಂಗಳವಾರ ಶಿಮ್ಲಾಗೆ ಆಗಮಿಸಿದ್ದರು. ಕೇಂದ್ರದ ಎನ್ಡಿಎ ಸರ್ಕಾರದ ಎಂಟನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು. ಶಿಮ್ಲಾದ ರಿಡ್ಜ್ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ದಿನ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಜಮಾ ಮಾಡಲಾಗಿದೆ.
12.5 ಕೋಟಿ ಫಲಾನುಭವಿಗಳಿಗೆ 11ನೇ ಕಂತು
ಭಾರತದ ಅರ್ಹ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 2,000 ರೂಪಾಯಿ ಆರ್ಥಿಕ ನೆರೆವು ಪಡೆಯುತ್ತಾರೆ. ದೇಶದಾದ್ಯಂತ 12.5 ಕೋಟಿ ರೈತರು ಪಿಎಂ ಕಿಸಾನ್ ನಿಧಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗೆ ಹೆಸರು ನೋಂದಾಯಿಸಿಕೊಂಡಿರುವ ರೈತರ ಬ್ಯಾಂಕ್ ಖಾತೆಗೆ 11ನೇ ಕಂತು ಜಮೆ ಮಾಡಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಎಂದರೇನು?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ದೇಶಾದ್ಯಂತ ಬಡತನದ ಅಂಚಿನಲ್ಲಿರುವ ಕೋಟ್ಯಂತರ ಬಡ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ಅರ್ಹ ರೈತರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷದಲ್ಲಿ ಒಟ್ಟು 6000 ರೂಪಾಯಿ ಪಡೆದುಕೊಳ್ಳುತ್ತಾರೆ. ಪ್ರತಿ ನಾಲ್ಕು ತಿಂಗಳಗೆ ಒಂದು ಬಾರಿ ಕೇಂದ್ರ ಸರ್ಕಾರದಿಂದಲೇ ರೈತರ ಬ್ಯಾಂಕ್ ಖಾತೆಗೆ 2000 ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ. 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ದೇಶಾದ್ಯಂತ ಕೆಲವು ವಿನಾಯಿತಿಗಳಡಿ ಕೃಷಿಯೋಗ್ಯ ಭೂಮಿಯೊಂದಿಗೆ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ.
ಅರ್ಹ ರೈತರು ಇ-ಕೆವೈಸಿ ಮಾಡಿಸಲು ಸರ್ಕಾರದ ಆದೇಶ
ದೇಶದಲ್ಲಿ ಮೇ 31ರೊಳಗೆ ಅರ್ಹ ಫಲಾನುಭವಿಗಳಿಗೆ 11ನೇ ಕಂತಿನ ಹಣವನ್ನು ನೀಡಲಾಗುವುದರ ಬಗ್ಗೆ ಕೇಂದ್ರ ಸರ್ಕಾರ ಸುಳಿವು ನೀಡಿದೆ. ಈ ಹಿನ್ನೆಲೆ ಇ-ಕೆವೈಸಿ ನೋಂದಣಿಗೆ ಮೇ 15ರ ಬದಲಿಗೆ ಮೇ 31ರ ಗಡುವು ವಿಧಿಸಲಾಗಿತ್ತು. ಆದರೆ ಅಷ್ಟರೊಳಗೆ ಇ-ಕೆವೈಸಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ರೈತರು ಖಾತೆ ಜೊತೆಗೆ ಇ-ಕೆವೈಸಿ ಮಾಡಿಸುವುದು ಹೇಗೆ?:
* ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ https://pmkisan.gov.in/ ಗೆ ಭೇಟಿ ನೀಡಿ
* ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
* ಫಾರ್ಮರ್ಸ್ ಕಾರ್ನರ್ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
* ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ
* ಆಧಾರ್ Ekyc ಯ ಪುಟ ತೆರೆಯಲಿದೆ
* ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
* ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
* ಬಳಿಕ search ಬಟನ್ ಕ್ಲಿಕ್ ಮಾಡಬೇಕು
* ಅದರ ನಂತರ, ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
* ಬಳಿಕ Get OTP ಅನ್ನು ಕ್ಲಿಕ್ ಮಾಡಿ
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
* ಒಟಿಪಿಯನ್ನು ನಮೂದಿಸಿ, Submit ಮಾಡಿ
* ನೀವು Submit ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ