8 ವರ್ಷದಲ್ಲಿ ಮೋದಿ ಸರ್ಕಾರದ ಎಂಟು ಸಾಧನೆಗಳೇನು?
ನವದೆಹಲಿ, ಮೇ 30: ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಎಂಟು ವರ್ಷಗಳೇ ಪೂರೈಸಿವೆ. ದೇಶದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರದ ಸಾಧನೆಗಳನ್ನು ಸಾರಿ ಹೇಳುವ ಕಾಲ ಸನ್ನಿಹಿತವಾಗಿದೆ.
ಭಾರತದಲ್ಲಿ ಕಳೆದ 2014ರ ಮೇ 26ರಂದು ದೇಶದ ಪ್ರಧಾನಮಂತ್ರಿ ಆಗಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಾರಿಗೊಳಿಸಿದ ಯೋಜನೆಗಳು ಸಾಕಷ್ಟಿವೆ.
ಮೊದಲ ಬಾರಿ ಅಧಿಕಾರದ ಗದ್ದುಗೆ ಏರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು. ಮೊದಲ ಅವಧಿಯಲ್ಲಿ ನೀಡಿದ ಆಡಳಿತದ ಫಲವಾಗಿ ಎರಡನೇ ಬಾರಿಯೂ ಅಧಿಕಾರದ ಭಾಗ್ಯ ಒಲಿದು ಬಂತು. ಎರಡೂ ಅವಧಿಗಳು ಸೇರಿ ಒಟ್ಟು ಎಂಟು ವರ್ಷಗಳನ್ನು ಪೂರೈಸಿದ ಕೇಂದ್ರ ಸರ್ಕಾರದ ಪ್ರಮುಖ ಎಂಟು ಸಾಧನೆಗಳನ್ನು ಗುರುತಿಸಲಾಗಿದೆ. ಹಾಗಿದ್ದರೆ ಕೇಂದ್ರ ಸರ್ಕಾರದ ಆ ಪ್ರಮುಖ ಸಾಧನೆಗಳೇನು ಎಂಬುದನ್ನು ಈ ವರದಿ ಮೂಲಕ ತಿಳಿದುಕೊಳ್ಳೋಣ.

ದೇಶದಲ್ಲಿ ಆರ್ಟಿಕಲ್ 370 ರದ್ದತಿ
ಕಳೆದ ಆಗಸ್ಟ್ 5, 2019ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್ಟಿಕಲ್ 370 ಅನ್ನು ರದ್ದುಗೊಳಿಸಲು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಮುಖ್ಯವಾಹಿನಿಗೆ ತರಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದರು. ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ವಿಶೇಷ ಸ್ಥಾನಮಾನವನ್ನು ನೀಡುತ್ತದೆ.

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಚಾಲನೆ
ಭಾರತೀಯ ಜನತಾ ಪಕ್ಷದ ಚುನಾವಣಾ ಕಾರ್ಯಕ್ರಮದಲ್ಲಿ ರಾಮಮಂದಿರ ನಿರ್ಮಾಣದ ಭರವಸೆ ನೀಡಲಾಗಿದ್ದು, ಇದೀಗ ಅದು ನನಸಾಗುವ ಹಾದಿಯಲ್ಲಿದೆ. ಪ್ರಧಾನಿ ಮೋದಿ ಆಗಸ್ಟ್ 2020ರಲ್ಲಿ ಹೊಸ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ರಾಮಮಂದಿರ ನಿರ್ಮಾಣ ಕಾರ್ಯವು 2023ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಆಜಾದಿ ಕಾ ಅಮೃತ್ ಮಹೋತ್ಸವ
ಭಾರತದ 75ನೇ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ, ಸರ್ಕಾರವು "ಆಜಾದಿ ಕಾ ಅಮೃತ್ ಮಹೋತ್ಸವ" ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ದೇಶಾದ್ಯಂತ ಆಚರಿಸಲಾಗುತ್ತಿದ್ದು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಎಲ್ಲರನ್ನು ಗೌರವಿಸಲಾಯಿತು. ಈ ಅಭಿಯಾನ ಘೋಷಿಸಿದ ರಾಷ್ಟ್ರೀಯ ವೀರರ ಕೊಡುಗೆಗಳನ್ನು ಸ್ಮರಿಸಿಕೊಳ್ಳಲಾಯಿತು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ತಿಳಿಯಿರಿ
ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆಯ ಸಂದರ್ಭದಲ್ಲಿ ಹಿಂದುಳಿದ ಮತ್ತು ಬಡ ಜನರಿಗಾಗಿ ಉಚಿತ ಪಡಿತರ ಘೋಷಿಸಲಾಯಿತು. ಕೋವಿಡ್-19 ಎರಡನೇ ಅಲೆ ಸಮಯದಲ್ಲಿ ಈ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ಅಂದರೆ ಮಾರ್ಚ್ 2022ರವರೆಗೆ ವಿಸ್ತರಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಒಟ್ಟು 80 ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ಪಡಿತರವನ್ನು ವಿತರಿಸಲಾಯಿತು.

ಸಾರ್ವತ್ರಿಕ ಕೋವಿಡ್-19 ಲಸಿಕೆ
ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ದೇಶಾದ್ಯಂತ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ಘೋಷಿಸಲಾಯಿತು. ಜಗತ್ತಿನಲ್ಲೇ ಅತಿದೊಡ್ಡ ಪ್ರಮಾಣದ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಲಾಗಿದ್ದು, ದೇಶದಲ್ಲಿ ಇದುವರೆಗೂ 193 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. 15 ಮತ್ತು 18 ವಯೋಮಾನದ ಯುವಕರಿಗೂ ಲಸಿಕೆಯನ್ನು ನೀಡಲಾಗುತ್ತಿದ್ದು, ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅಭಿಯಾನವನ್ನು ಯಶಸ್ವಿಯಾಗಿದೆ. ಭಾರತದಲ್ಲಿ ಸ್ವದೇಶಿ ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಉತ್ಪಾದನೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡುವುದರ ಜೊತೆಗೆ ನೆರೆಹೊರೆಯ ರಾಷ್ಟ್ರಗಳಿಗೂ ಲಸಿಕೆಯನ್ನು ಪೂರೈಸುವ ಮೂಲಕ ಸೈ ಎನಿಸಿಕೊಳ್ಳಲಾಗಿದೆ.
ಆಯುಷ್ಮಾನ್ ಭಾರತ್ ಬಗ್ಗೆ ತಿಳಿಯಿರಿ : ಕಳೆದ 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಆಯುಷ್ಮಾನ್ ಭಾರತ್ ಎಂಬ ಆರೋಗ್ಯ ರಕ್ಷಣೆ ಯೋಜನೆಯನ್ನು ನರೇಂದ್ರ ಮೋದಿ ಘೋಷಿಸಿದರು. ಇದು ವಿಶ್ವದ ಅತಿದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂದು ಗುರುತಿಸಲ್ಪಟ್ಟಿದೆ. ಇದು 10.74 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಹಣವನ್ನು ಪಡೆದಿದ್ದರೂ, ಅನುಷ್ಠಾನದ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡಲಾಗುತ್ತದೆ. ಈ ಯೋಜನೆಯು ಮೂರು ದಿನಗಳ ಪೂರ್ವ ಆಸ್ಪತ್ರೆಗೆ ಮತ್ತು 15 ದಿನಗಳ ನಂತರದ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಔಷಧಿ ವೆಚ್ಚಗಳು ಸೇರಿವೆ.

ಉಕ್ರೇನ್ ಮತ್ತು ಅಫ್ಘಾನ್ ನೆಲದಿಂದ ಭಾರತೀಯರ ರಕ್ಷಣೆ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಆಪರೇಷನ್ ದೇವಿಶಕ್ತಿಯನ್ನು ಆರಂಭಿಸಲಾಗಿತ್ತು. ಅಫ್ಘಾನ್ ನೆಲದಲ್ಲಿ ತಾಲಿಬಾನಿಗಳು ಕ್ರೌರ್ಯ ಮೆರೆಯುತ್ತಿದ್ದ ಸಂದರ್ಭದಲ್ಲಿ 700 ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಯಿತು.
ಅದೇ ರೀತಿ ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್ ನೆಲದಲ್ಲಿ ನೂರಾರು ಭಾರತೀಯರು ನೆಲೆ ಸಿಗದೇ ನರಳಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಳಿದ ಕೇಂದ್ರ ಸರ್ಕಾರವು ಕೆಲವು ವಿದೇಶೀ ಪ್ರಜೆಗಳು ಸೇರಿದಂತೆ ಒಟ್ಟು 23,000 ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ದೇಶದ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಅನ್ನು 2019ರ ಫೆಬ್ರವರಿ ತಿಂಗಳ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಯಿತು. ಇದು ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಒಂದು ವರ್ಷದಲ್ಲಿ ಮೂರು ಬಾರಿ ರೈತರ ಖಾತೆಗೆ ನೇರವಾಗಿ 2,000 ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿನಲ್ಲಿ ಒಂದು ಬಾರಿಯಂತೆ ಒಟ್ಟು ಮೂರು ಬಾರಿ 2,000 ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಕಳೆದ 1 ಜನವರಿ 2022 ರಂದು, ಈ ಯೋಜನೆಯಡಿಯಲ್ಲಿ ಭಾರತದಾದ್ಯಂತ 10.09 ಕೋಟಿಗೂ ಹೆಚ್ಚು ರೈತರಿಗೆ ಹಣಕಾಸಿನ ನೆರವಿನ 10ನೇ ಕಂತಾಗಿ 20,900 ಕೋಟಿ ರೂಪಾಯಿ ಹಣವನ್ನು ಜಮೆ ಮಾಡಲಾಗಿದೆ.

ಪ್ರಧಾನಿ ಆವಾಸ್ ಯೋಜನೆ ಬಗ್ಗೆ ತಿಳಿಯಿರಿ
ಕಳೆದ 2015ರ ಜೂನ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) "2022 ರ ವೇಳೆಗೆ ಎಲ್ಲರಿಗೂ ವಸತಿ" ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. 2022ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಮುಖ ಯೋಜನೆಯಡಿ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 48,000 ಕೋಟಿ ರೂಪಾಯಿ ಮೀಸಲಿರಿಸುವುದಾಗಿ ಘೋಷಿಸಿದರು.
ಕಳೆದ 2020-21ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (PMAY-G) ಕಾರ್ಯಕ್ರಮದ ಅಡಿಯಲ್ಲಿ 33.99 ಲಕ್ಷ ಮನೆಗಳು ಮತ್ತು ನವೆಂಬರ್ 25, 2021ಕ್ಕೆ 26.20 ಲಕ್ಷ ಯೂನಿಟ್ಗಳು ಪೂರ್ಣಗೊಂಡಿವೆ ಎಂದು 2022ರ ಆರ್ಥಿಕ ಸಮೀಕ್ಷೆ ಹೇಳಿದೆ. ಅದೇ ರೀತಿ ಪ್ರಧಾನ ಮಂತ್ರಿ ಆವಾಸ್ ಯೋಜನೆ - ಅರ್ಬನ್ (PMAY-U) ಗಾಗಿ, 14.56 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. 2021-22ರಲ್ಲಿ 4.49 ಲಕ್ಷ ಮನೆಗಳು 2021ರ ಡಿಸೆಂಬರ್ವರೆಗೆ ಪೂರ್ಣಗೊಂಡಿವೆ.












Click it and Unblock the Notifications